ವಾಜಪೇಯಿ ನಿಧನಕ್ಕೆ ಕರ್ನಾಟಕದ ರಾಜಕೀಯ ನಾಯಕರ ಸಂತಾಪ
ಬೆಂಗಳೂರು, ಆಗಸ್ಟ್ 16 : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಧಿವಶರಾಗಿದ್ದಾರೆ. ಭಾರತದ ರಾಜಕಾರಣದ ಅಜಾಶತ್ರುವಿನ ಅಗಲಿಕೆಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ (93) ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಆ.16ರ ಗುರುವಾರ ಸಂಜೆ ನಿಧನ ಹೊಂದಿದ್ದಾರೆ.
ಕರ್ನಾಟಕದ ಹಲವು ರಾಜಕೀಯ ನಾಯಕರು ಪಕ್ಷಬೇಧ ಮರೆತು ಅಟಲ್ ಬಿಹಾರಿ ವಾಜಪೇಯಿ ಅವರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಡಾ.ಜಿ.ಪರಮೇಶ್ವರ, ಈಶ್ವರ ಖಂಡ್ರೆ ಸೇರಿದಂತೆ ಹಲವು ನಾಯಕರು ಟ್ವಿಟರ್ ಮೂಲಕ ಸಂತಾವ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, 'ನನಗೆ ಪ್ರೇರಣೆಯಾಗಿದ್ದ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಅಗಲಿಕೆಯಿಂದ ಮನಸ್ಸು ಭಾರವಾಗಿದೆ. ಶ್ರೇಷ್ಠ ನಾಯಕ ಹಾಗೂ ಅಪ್ರತಿಮ ದೇಶಭಕ್ತರಾಗಿದ್ದ ಅವರ ನಿಧನವು ದೇಶಕ್ಕೆ ಬಹುದೊಡ್ಡ ನಷ್ಟ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಸಂತಾಪ ಸೂಚಿಸಿ ಟ್ವಿಟ್ ಮಾಡಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಸಂತಾಪ
ಇಂದು ದೇಶ ಅತ್ಯುತ್ತಮ ಕವಿ, ಬರಹಗಾರ, ಮುತ್ಸದ್ದಿ, ಸಹೃದಯಿ ರಾಜಕಾರಣಿಯನ್ನು ಕಳೆದುಕೊಂಡು ಅನಾಥವಾಗಿದೆ. ದೇಶದ ಜನತೆಗೆ ಅದರಲ್ಲೂ ಭಾರತೀಯ ಜನತಾ ಪಕ್ಷದ ಕುಟುಂಬಕ್ಕೆ ತುಂಬಲಾರದ ಹಾನಿಯಾಗಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
'ನನ್ನಂತವರಿಗೆ ಅವರ ಜೊತೆ ಕೆಲಸ ಮಾಡಿದ್ದೆ ಪುಣ್ಯ ಮತ್ತು ದೊಡ್ಡ ಅನುಭವ. ಅವರ ರಾಜಕೀಯ ನಡೆ, ನುಡಿ ಎಲ್ಲರಿಗೂ ಅನುಕರಣೀಯ, 'ಅಂಧೇರಾ ಚಟೇಗಾ, ಸೂರಜ್ ನಿಕ್ಲೇಗಾ, ಕಮಲ್ ಕಿಲೇಗಾ' ಎಂಬ ಅವರ ಮಾತು ದೂರದೃಷ್ಟಿತನ ಮತ್ತು ಆಶಾಭಾವನೆಯನ್ನು ಎತ್ತಿ ತೋರಿಸುತ್ತದೆ ಎಂದು ಯಡಿಯೂರಪ್ಪ ಹೇಳಿದರು.
|
ಡಾ.ಜಿ.ಪರಮೇಶ್ವರ
ಕರ್ನಾಟಕದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಎಚ್.ಡಿ.ದೇವೇಗೌಡರ ಸಂತಾಪ
ಅಟಲ್ ಬಿಹಾರಿ ವಾಜಪೇಯಿ ಅವರೊಬ್ಬ ಶ್ರೇಷ್ಠ ನಾಯಕರು, ಉತ್ತಮ ಸಂಸದೀಯ ಪಟು. ಬೆಂಗಳೂರಿನಲ್ಲಿ ಅವರ ವಿವಿಧ ಕಾರ್ಯಕ್ರಮಗಳಲ್ಲಿನ ಭಾಷಣ ಕೇಳಲು ವಿರೋಧ ಪಕ್ಷದ ನಾಯಕನಾಗಿ ನಾನು ಹೋಗುತ್ತಿದೆ. ಅವರ ನಿಧನದಿಂದ ಉಂಟಾದ ನಷ್ಟವನ್ನು ಯಾರೂ ಭರಿಸಲು ಸಾಧ್ಯವಿಲ್ಲ. ರಾಜಕೀಯ ಕಡು ವಿರೋಧಿಗಳನ್ನು ಅವರು ಕಟುವಾದ ಶಬ್ದಗಳಿಂದ ಟೀಕಿಸಿದವರಲ್ಲ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂತಾಪ ಸೂಚಿಸಿದರು.
'ನಾನು ಪ್ರಧಾನಿಯಾಗಿದ್ದಾಗ ಅವರು ವಿರೋಧ ಪಕ್ಷ ನಾಯಕರಾಗಿದ್ದರು. ಆದರೆ, ಲೋಕಸಭೆ ಕಲಾಪಕ್ಕೆ ಎಂದೂ ಅಡ್ಡಿ ಪಡಿಸಲಿಲ್ಲ' ಎಂದು ದೇವೇಗೌಡರು ನೆನಪು ಮಾಡಿಕೊಂಡರು.

ಎಚ್.ಡಿ.ಕುಮಾರಸ್ವಾಮಿ ಸಂತಾಪ
ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಾಜಪೇಯಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 'ಆಧುನಿಕ ಭಾರತ ಕಂಡ ಅಪರೂಪದ ಮೌಲಿಕ ರಾಜಕಾರಣಿ ವಾಜಪೇಯಿ. ಅಜಾತ ಶತ್ರು, ಅವರ ನಿಧನದಿಂದ ಅತೀವ ದುಃಖವಾಗಿದೆ "ಸೋಲನ್ನೆಂದೂ ಒಪ್ಪಲಾರೆ, ಹೊಸ ಸವಾಲುಗಳಿಗೆಂದೂ ಹೆದರಲಾರೆ" ಎನ್ನುವ ಅವರ ಕವನದ ಸಾಲೊಂದು ವಾಜಪೇಯಿ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ' ಎಂದು ಸಂತಾಪ ಸೂಚಿಸಿದ್ದಾರೆ.
ಶ್ರೀ ವಾಜಪೇಯಿ ಅವರು ಭ್ರಾತೃತ್ವ ಮತ್ತು ಸಹಬಾಳ್ವೆಯಲ್ಲಿ ಅಪರಿಮಿತ ನಂಬಿಕೆ ಇಟ್ಟವರು. ಅವರೊಬ್ಬ ಅತ್ಯುತ್ತಮ ವಾಗ್ಮಿ ಮತ್ತು ಆದರ್ಶ ಸಂಸದೀಯ ಪಟುವಾಗಿದ್ದರು. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಣೆಗೆ ಅವರ ಮಾಡಿದ ಪ್ರಯತ್ನಗಳು ಶ್ಲಾಘನೀಯ. ವೈಯಕ್ತಿಕವಾಗಿ ನಾನು ಅವರನ್ನು ಭೇಟಿ ಮಾಡಿದ್ದೆ. ಅವರ ಸೌಜನ್ಯ ನಮಗೆಲ್ಲರಿಗೂ ಆದರ್ಶ. ಅವರ ನಿಧನದಿಂದ ದೇಶ ಒಬ್ಬ ದಾರ್ಶನಿಕ ವ್ಯಕ್ತಿತ್ವದ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
|
ಲಕ್ಷಾಂತರ ಜನರ ಹೃದಯದಲ್ಲಿದ್ದಾರೆ
ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ವಾಜಪೇಯಿ ಅವರ ನಿಧನದಿಂದಾಗಿ ಒಂದು ಯುಗಾಂತ್ಯವಾಗಿದೆ ಎಂದು ಟ್ವಿಟ್ ಮಾಡಿದ್ದಾರೆ.
|
ದೂರದೃಷ್ಟಿಯ ನಾಯಕ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ದೂರ ದೃಷ್ಟಿಯ ನಾಯಕನನ್ನು ದೇಶದ ಇಂದು ಕಳೆದುಕೊಂಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
|
ಸಂತಾಪ ಸೂಚಿಸಿದ ಸುರೇಶ್ ಕುಮಾರ್
ಮಾಜಿ ಸಚಿವ, ಬಿಜೆಪಿ ನಾಯಕ ಸುರೇಶ್ ಕುಮಾರ್ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಎಸ್.ಆರ್.ಪಾಟೀಲ್ ಸಂತಾಪ
ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರು ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 'ದೇಶ ಕಂಡ ಧೀಮಂತ ನಾಯಕ, ಅಜಾತಶತ್ರು , ಭಾರತರತ್ನ, ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ ನಿಧನದ ಸುದ್ಧಿ ಬಹಳ ಆಘಾತವನ್ನುಂಟು ಮಾಡಿದೆ. ಇದು ಭಾರತ ದೇಶಕ್ಕೆ ತುಂಬಲಾರದ ನಷ್ಟವಾಗಿದೆ' ಎಂದು ಹೇಳಿದ್ದಾರೆ.
|
ಅವರ ಸೌಜನ್ಯ ನಮಗೆಲ್ಲರಿಗೂ ಆದರ್ಶ
ಆಧುನಿಕ ಭಾರತ ಕಂಡ ಅಪರೂಪದ ಮೌಲಿಕ ರಾಜಕಾರಣಿ ವಾಜಪೇಯಿ. ವೈಯಕ್ತಿಕವಾಗಿ ನಾನು ಅವರನ್ನು ಭೇಟಿ ಮಾಡಿದ್ದೆ. ಅವರ ಸೌಜನ್ಯ ನಮಗೆಲ್ಲರಿಗೂ ಆದರ್ಶ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ.

ಬಹಳ ದುಖಃ ವಾಗಿದೆ
ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದಾಗಿ ಬಹಳ ದುಖಃವಾಗಿದೆ. ದಕ್ಷ, ಪ್ರಾಮಾಣಿಕ, ಜನಪ್ರಿಯ ಪ್ರಧಾನಮಂತ್ರಿಗಳಾಗಿದ್ದರು. ಇವರ ಕಾಲದಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ರೂಪಿಸಿ ದೇಶದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ ಎಂದು ಸಂತಾಪದಲ್ಲಿ ತಿಳಿಸಿದ್ದಾರೆ.












Click it and Unblock the Notifications