ನಾಲ್ವರು ಶಾಸಕರ ಅಮಾನತಿಗೆ ಕೋರಿ ಸಿದ್ದರಾಮಯ್ಯರಿಂದ ದೂರು
ಬೆಂಗಳೂರು, ಫೆಬ್ರವರಿ 11: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದ ನಾಲ್ವರು ಅತೃಪ್ತ ಶಾಸಕರಿಗೆ ಅನರ್ಹತೆಯ ಭೀತಿ ಎದುರಾಗಿದೆ.
ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ಸಿನ ನಾಲ್ವರು ಅತೃಪ್ತ ಶಾಸಕರನ್ನು ಅನರ್ಹ ಮಾಡುವಂತೆ ಕೋರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪೀಕರ್ ರಮೇಶ್ಕುಮಾರ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಎರಡೆರಡು ಬಾರಿ ಶೋಕಾಸ್ ನೋಟಿಸ್, ವಿಪ್ಗಳನ್ನು ಜಾರಿ ಮಾಡಿದ್ದರೂ ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ ಕುಮಠಳ್ಳಿ, ಬಿ.ನಾಗೇಂದ್ರ ಹಾಗೂ ಡಾ. ಉಮೇಶ್ ಜಾಧವ್ ಅವರು ಉಲ್ಲಂಘನೆ ಮಾಡಿದ್ದಾರೆ.
ಹೀಗಾಗಿ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲ ಅನರ್ಹಗೊಳಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಿಎಲ್ ಪಿ ನಾಯಕ ಸಿದ್ದರಾಮಯ್ಯ ಅವರು ಮನವಿ ಪೂರ್ವಕ ದೂರು ನೀಡಿದ್ದಾರೆ. ಸಿದ್ದರಾಮಯ್ಯ ಅವರು ನೀಡಿದ ದೂರಿನಲ್ಲಿ ಏನಿದೆ? ಸ್ಪೀಕರ್ ರಮೇಶ್ ಕುಮಾರ್ ಅವರ ಮುಂದಿರುವ ತಕ್ಷಣದ ಆಯ್ಕೆಗಳ ಬಗ್ಗೆ ಮುಂದೆ ಓದಿ...
82 ಪುಟಗಳ ದೂರು ನೀಡಿದ ಸಿದ್ದರಾಮಯ್ಯ
ಶಾಸಕಾಂಗ ಸಭೆ, ಬಜೆಟ್ ಅಧಿವೇಶನಕ್ಕೆ ಗೈರು ಹಾಜರಾಗಿರುವ ಬಗ್ಗೆ ವಿವರಣೆ ಕೋರಿ ಈ ನಾಲ್ವರು ಶಾಸಕರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ .ವಿಪ್ ಉಲ್ಲಂಘನೆ, ಸಚೇತಕರ ಆದೇಶ ಪಾಲಿಸದಿರುವುದು, ಪಕ್ಷ ವಿರೋಧಿ ಚಟುವಟಿಕೆ ಮುಂತಾದ ಆರೋಪಗಳನ್ನು ಉಲ್ಲೇಖಿಸಿರುವ 82 ಪುಟಗಳ ದೂರಿನ ಪ್ರತಿಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿಸಿಎಂ ಜಿ ಪರಮೇಶ್ವರ ಅವರು ಜತೆಗಿದ್ದರು.
ಶಾಸಕರು ರಾಜೀನಾಮೆ ಸಲ್ಲಿಸಿದರೆ, ಮುಂದೇನು?
ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರ ಅಮಾನತು ಮನವಿ ಕುರಿತಂತೆ ಕ್ರಮ ಜರುಗಿಸುವುದಕ್ಕೂ ಮುನ್ನ ಶಾಸಕರು ರಾಜೀನಾಮೆ ನೀಡಬಹುದು. ಆದರೆ, ಯಾವುದೇ ಅತೃಪ್ತ ಶಾಸಕರು ರಾಜೀನಾಮೆ ನೀಡಿದರೂ ಅದನ್ನು ತಕ್ಷಣ ಅಂಗೀಕರಿಸಬೇಕೆಂದಿಲ್ಲ.
ರಾಜೀನಾಮೆ ಅಂಗೀಕರಿಸುವುದು ಬಿಡುವುದು ಸ್ಪೀಕರ್ ಇಚ್ಛೆ
ಶಾಸಕರ ರಾಜೀನಾಮೆಯನ್ನು ಯಾವಾಗ ಅಂಗೀಕರಿಸಬೇಕು ಎಂಬುದು ಸ್ಪೀಕರ್ ವಿವೇಚನೆಗೆ ಬಿಟ್ಟ ವಿಚಾರ. ಇಂತಿಷ್ಟೇ ಅವಧಿಯಲ್ಲಿ ರಾಜೀನಾಮೆ ಅಂಗೀಕರಿಸಬೇಕು ಎಂಬ ನಿಯಮವಿಲ್ಲ. ವೈಎಸ್ಆರ್ ಕಾಂಗ್ರೆಸ್ ಸಂಸದರು ರಾಜೀನಾಮೆ ನೀಡಿದ ಸಂದರ್ಭ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ತಕ್ಷಣ ಅಂಗೀಕರಿಸಿರಲಿಲ್ಲ. ಐದಾರು ತಿಂಗಳು ಕಳೆದರೂ ಈ ಬಗ್ಗೆ ಮುಂದಿನ ಕ್ರಮ ಜರುಗಿಸಿರಲಿಲ್ಲ.
ಸ್ಪೀಕರ್ ಮೇಲೆ ಒತ್ತಡ ತರಲು ಬರುವುದಿಲ್ಲ
ಶಾಸಕರ ರಾಜೀನಾಮೆ ಅಂಗೀಕಾರ ಆಗದಿದ್ದಲ್ಲಿ ರಾಜ್ಯಪಾಲರಿಗೆ ಅಥವಾ ನ್ಯಾಯಾಲಯದ ಮೊರೆ ಹೋದರೂ ಸ್ಪೀಕರ್ ಮೇಲೆ ಒತ್ತಡ ತರಲು ಬರುವುದಿಲ್ಲ. ರಾಜ್ಯಪಾಲರು ಸದನದಲ್ಲಿ ಬಹುಮತ ಸಾಬೀತಿಗೆ ಸೂಚನೆ ನೀಡಬಹುದು. ಆ ಸಂದರ್ಭದಲ್ಲಿ ರಾಜೀನಾಮೆ ಅಂಗೀಕಾರ ಆಗದೆ ಇರುವ ಶಾಸಕರಿಗೂ ವಿಪ್ ಜಾರಿ ಮಾಡಬಹುದು. ಸದನದಲ್ಲಿ ವಿಪ್ ಉಲ್ಲಂಘನೆ ಮಾಡಿದರೆ ರಾಜಕೀಯ ಭವಿಷ್ಯಕ್ಕೆ ಸಂಚಕಾರ ತರುವ ಅವಕಾಶ ಸ್ಪೀಕರ್ಗೆ ಇದೆ.
ರೆಬೆಲ್ ಶಾಸಕರಿಗೂ ಅವಕಾಶಗಳಿವೆ
ಶಾಸಕರನ್ನು ಅನರ್ಹಗೊಳಿವ ನಿಟ್ಟಿನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರ ನಡೆ ಏನು? ಎಂಬುದು ಕುತೂಹಲಕಾರಿಯಾಗಲಿದೆ. ಅತೃಪ್ತ ಶಾಸಕರ ವಿರುದ್ಧ ದೂರು ಅಂಗೀಕಾರವಾದರೆ ಅವರ ಶಾಸಕತ್ವ ರದ್ದು ಮಾಡಬಹುದು. ಆದರೆ, ಸ್ಪೀಕರ್ ಅವರು ಕ್ರಮ ಕೈಗೊಳ್ಳುವ ಮುನ್ನವೇ ನಾಲ್ವರು ಶಾಸಕರು ರಾಜೀನಾಮೆ ನೀಡಿದರೆ, ಮುಂದಿನ ಕ್ರಮದಿಂದ ಪಾರಾಗಬಹುದು. ಇದು ರೆಬೆಲ್ ಶಾಸಕರ ಮುಂದಿರುವ ತಕ್ಷಣದ ಆಯ್ಕೆ. ಒಂದು ವೇಳೆ ಅಮಾನತಾದರೆ, ನಂತರ ರಾಜ್ಯಪಾಲರ ಮೊರೆ ಹೋಗಬಹುದು.