ಸ್ನೇಹಿತನ ಸಂಕಷ್ಟ ಹಂಚಿಕೊಂಡ ಇವರು ನಿಜವಾದ ಗೆಳೆಯರು!
ಯಾದಗಿರಿ, ಫೆ. 19 : ಸ್ನೇಹಿತರು ಎಂದು ನಮ್ಮೊಂದಿಗೆ ಇರುತ್ತಾರೆ ಎಂಬುದಕ್ಕೆ ಜೀವಂತ ಉದಾಹರಣೆ ಯಾದಗಿರಿ ಜಿಲ್ಲೆಯಲ್ಲಿದೆ. ತಮ್ಮ ಆತ್ಮೀಯ ಸ್ನೇಹಿತನ ಐಎಎಸ್ ಕನಸನ್ನು ನನಸು ಮಾಡಲು ನಾಲ್ವರು ಸ್ನೇಹಿತರು ಬೆಂಬಲವಾಗಿ ನಿಂತಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಅಶೋಕ್ ಚೌವ್ಹಾಣ್ ಗೆ ಧೈರ್ಯತುಂಬಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ ಆ ಮೂಲಕ ನಿಜವಾದ ಸ್ನೇಹ ಏನೆಂದು ಸಾಬೀತುಪಡಿಸಿದ್ದಾರೆ.
ಯಾದಗಿರಿಯಿಂದ 16 ಕಿ.ಮೀ. ದೂರದಲ್ಲಿರುವ ಯರಗೋಳದ ಬಳಿಯ ತಾವರನಾಯಕ ತಾಂಡಾದ ಅಶೋಕ್ ಚೌವ್ಹಾಣ್ ಸ್ನೇಹಿತರ ಬೆಂಬಲದಿಂದ ಐಎಎಸ್ ಕನಸನ್ನು ನನಸು ಮಾಡಿಕೊಳ್ಳಲು ಹೊರಟಿರುವವನು. ಪ್ರತಿಭಾವಂತ ವಿದ್ಯಾರ್ಥಿಯಾದ ಅಶೋಕ್ ಚೌವ್ಹಾಣ್ ಐಎಎಸ್ ಅಧಿಕಾರಿಯಾಗಬೇಕು ಎಂಬ ಕಸಸು ಕಟ್ಟಿಕೊಂಡಿದ್ದ. ಆದರೆ, ಆರ್ಥರೈಟಿಸ್ ಗೆ ಸಂಬಂಧಿಸಿದ ರೋಗ ಅಶೋಕ್ ಕನಸಿಗೆ ತಣ್ಣೀರು ಸುರಿದಿತ್ತು.
ಎಂಟನೇ ತರಗತಿ ತನಕ ಎಲ್ಲ ಮಕ್ಕಳಂತೆ ಚಟುವಟಿಕೆಯ ಚಿಲುಮೆಯಾಗಿದ್ದ ಅಶೋಕ್ ಚೌವ್ಹಾಣ್ ಗೆ ಆರ್ಥರೈಟಿಸ್ ಗೆ ಸಂಬಂಧಿಸಿದ ರೋಗ ಬಂದ ನಂತರ ಕಾಲುಗಳು ಸ್ವಾಧೀನ ಕಳೆದುಕೊಂಡವು. ಸೊಂಟದ ತನಕ ಚೈತನ್ಯವನ್ನು ಕಳೆದುಕೊಂಡಿರುವ ಅಶೋಕನಿಗೆ ಸದ್ಯ ಓಡಾಡಲು ಸಾಧ್ಯವಿಲ್ಲ. ಆದರೆ, ನಾಲ್ವರ ಸ್ನೇಹಿತರು ಅವರನನ್ನು ತಾಂಡಾದಿಂದ ಶಾಲೆಗೆ ಮಗುವಂತೆ ಎತ್ತಿಕೊಂಡು ಹೋಗುತ್ತಾರೆ. ಗೆಳೆಯನ ಓದು ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂದು ಅಶೋಕ್ ಚೌವ್ಹಾಣ್ ಬೆಂಬಲಕ್ಕೆ ನಿಂತಿದ್ದಾರೆ. [ಆದರ್ಶ ಮೆರೆದ ದಂಪತಿಗಳು]
ತಾವರನಾಯಕ್ ತಾಂಡಾದವನು ಅಶೋಕ್
ಅಶೋಕ್ ಚೌವ್ಹಾಣ್ ಯಾದಗಿರಿ ಜಿಲ್ಲೆಯ ಯರಗೋಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಯರಗೋಳದಿಂದ ನಾಲ್ಕು ಕಿ.ಮೀ. ದೂರದ ಗುಡ್ಡದಲ್ಲಿರೋ ತಾವರನಾಯಕ್ ತಾಂಡಾದ ಧರ್ಮಾ ಚವ್ಹಾಣ್ ದಂಪತಿಗಳ ಒಟ್ಟು ಆರು ಮಕ್ಕಳಲ್ಲಿ ಚೌವ್ಹಾಣ್ ಕೊನೆಯವನು.
ಚೈತನ್ಯದ ಚಿಲುಮೆ ಅಶೋಕ್ ಚೌವ್ಹಾಣ್
ಅಶೋಕ್ ಚೌವ್ಹಾಣ್ ಮೊದಲಿನಿಂದಲೂ ಚೈತನ್ಯದ ಚಿಲುಮೆ. ಐಎಎಸ್ ಅಧಿಕಾರಿಯಾಗಬೇಕು ಎಂಬುದು ಅಶೋಕ್ ಕನಸು, ಎಂಟನೇ ತರಗತಿ ಓದುವ ವೇಳೆಗೆ ಅಶೋಕ್ ಗೆ ಆರ್ಥರೈಟಿಸ್ ಗೆ ಸಂಬಂಧಿಸಿದ ಕಾಯಿಲೆ ಬಂದಿತು. ಇದರಿಂದ ಸೊಂಟದ ವರೆಗೂ ಸ್ವಾಧೀನ ಕಳೆದುಕೊಂಡ ಆತನಿಗೆ ಒಂದು ಹೆಜ್ಜೆ ನೆಡೆದಾಡುವುದು ಸಾಧ್ಯವಿಲ್ಲ.
ಚಿಕಿತ್ಸೆಗಳು ಫಲ ನೀಡಲಿಲ್ಲ
ಅಶೋಕ್ ಚೌವ್ಹಾಣ್ ರೋಗದ ಬಗ್ಗೆ ಆತಂಕಗೊಂಡ ಪೋಷಕರು ಸೋಲ್ಲಾಪುರ, ಹೈದರಾಬಾದ್, ಬೆಂಗಳೂರು, ತಿರುಪತಿ ಮುಂತಾದ ನಗರಗಳ ಆಸ್ಪತ್ರೆಗಳಿಗೆ ಅಲೆದಾಡಿ ಮಗನ ರೋಗ ಗುಣಪಡಿಸಲು ಶ್ರಮಿಸಿದ್ದಾರೆ. ಆದರೆ, ಯಾವುದೇ ಉಪಯೋಗವಾಗಿಲ್ಲ. ಬಡತನದ ಕಾರಣದಿಂದಾಗಿಯೂ ಅಶೋಕ್ ಗೆ ಸೂಕ್ತ ಚಿಕಿತ್ಸೆ ಕೊಡಿಸಲು ಅವರಿಗೆ ಸಾಧ್ಯವಾಗಿಲ್ಲ.
ಸ್ನೇಹಿತರು ಕೈ ಹಿಡಿದರು
ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅಶೋಕ್ ಚೌವ್ಹಾಣ್ ಬೆಂಬಲಕ್ಕೆ ಸ್ನೇಹಿತರು ನಿಂತರು. ಐಎಎಸ್ ಮಾಡಬೇಕೆಂದಿರುವ ಗೆಳೆಯನ ವಿಧ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂದು ಸ್ನೇಹಿತರು ನಿರ್ಧರಿಸಿದರು. ತಮ್ಮ ಜೀವನದ ಪ್ರಮುಖ ಗುರಿ ಅಶೋಕ್ ಗೆ ಸಹಾಯ ಮಾಡುವುದು ಎಂದು ಅವನ ಬೆಂಬಲಕ್ಕೆ ನಿಂತರು.
ಮಕ್ಕಳಂತೆ ಹೊತ್ತುಕೊಂಡು ಹೋಗುತ್ತಾರೆ
ಅಶೋಕ್ ಚೌವ್ಹಾಣ್ ನಾಲ್ವರು ಸ್ನೇಹಿತರು ಅಂದಿನಿಂದ ಅವನ ಜೊತೆ ನಿಂತಿದ್ದಾರೆ. ಅಶೋಕ್ ಚೌಹಾಣ್ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂದು ನಾಲ್ವರು ಸ್ನೇಹಿತರು ಅಶೋಕ್ ನನ್ನು ಶಾಲೆಗೆ ಮಕ್ಕಳಂತೆ ಎತ್ತಿಕೊಂಡು ಹೋಗುತ್ತಾರೆ. ನಂತರ ಶಾಲೆಯಿಂದ ಮನೆಗೆ ಕರೆದುಕೊಂಡು ಬಿಡುತ್ತಾರೆ. ಕಳೆದ ಎರಡು ವರ್ಷಗಳಿಂದ ಇವರು ಮಾಡುತ್ತಿರುವ ಇಂತಹ ಕಾರ್ಯ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರ ಅಚ್ಚುಮೆಚ್ಚಿನ ಶಿಷ್ಯ
ಅಶೋಕ್ ಚೌವ್ಹಾಣ್ ಶಾಲೆಯಲ್ಲಿ ಶಿಕ್ಷಕರ ಅಚ್ಚುಮೆಚ್ಚಿನ ಶಿಷ್ಯ ಎಂದು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಶೋಕ್ ಪ್ರಥಮ ಸ್ಥಾನ ಗಳಿಸಿ ಶಾಲೆಗೂ ಒಳ್ಳೆಯ ಹೆಸರು ತಂದುಕೊಡುತ್ತಾನೆ ಎಂದು ಶಿಕ್ಷಕರು ಭರವಸೆ ವ್ಯಕ್ತಪಡಿಸುತ್ತಾರೆ.