ಎಚ್ಡಿಕೆ ಸರಕಾರದ ಸುಗಮ ಸಂಚಾರಕ್ಕೆ, ಗೌಡ್ರ ಸಮ್ಮುಖದಲ್ಲಿ 6 ಒಪ್ಪಂದಕ್ಕೆ ಸಹಿ
ಎಚ್ಡಿಕೆ ಸರಕಾರದ ಸುಗಮ ಸಂಚಾರಕ್ಕೆ, ಗೌಡ್ರ ಸಮ್ಮುಖದಲ್ಲಿ 6 ಒಂಪದ್ದಕ್ಕೆ ಸಹಿ
Recommended Video

ಕರ್ನಾಟಕದ ಹದಿನೈದನೇ ಅಸೆಂಬ್ಲಿಯ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ಹತ್ತು ದಿನಗಳ ನಂತರ, ಸಚಿವ ಸಂಪುಟದ ಹಗ್ಗಜಗ್ಗಾಟಕ್ಕೆ ಕೊನೆಗೂ ಶುಭ ಶುಕ್ರವಾರದ ದಿನ (ಜೂ 1) ತೆರೆಬಿದ್ದಿದೆ.
ಪ್ರಮುಖವಾಗಿ ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಕಾಂಗ್ರೆಸ್ಸಿನಲ್ಲಿ ದೊಡ್ಡದಿದ್ದರಿಂದ ಜೊತೆಗೆ, ಕೆಲವೊಂದು ಖಾತೆ ತಮಗೇ ಬೇಕೆಂದು ಎರಡೂ ಪಕ್ಷಗಳು ಪಟ್ಟು ಹಿಡಿದಿದ್ದ ಕಾರಣಕ್ಕಾಗಿ, ಅಧಿಕೃತ ಘೋಷಣೆ ಹೊರಬೀಳುವಲ್ಲಿ ವಿಳಂಬವಾಗಿತ್ತು.
ಇನ್ನೇನಿದ್ದರೂ ದೋಸ್ತಿ ಸರಕಾರದಲ್ಲಿ ತಮ್ಮತಮ್ಮ ಪಕ್ಷಕ್ಕೆ ಮಂಜೂರಾಗಿರುವ ಖಾತೆಗಳನ್ನು ಯಾರ್ಯಾರಿಗೆ ಹಂಚಬೇಕು ಎನ್ನುವುದು ಆಯಾಯ ಪಕ್ಷಕ್ಕೆ ಬಿಟ್ಟಿದ್ದು. ಇದರಲ್ಲೂ ಏನಾದರೂ ತಕರಾರು ಇದೆಯಾ ಎನ್ನುವ ಸಂದೇಹಕ್ಕೆ, ಸದ್ಯದ ಮಾಹಿತಿ ಪ್ರಕಾರ ಇಲ್ಲ. ಯಾಕೆಂದರೆ, ಯಾವ ಖಾತೆಯನ್ನು ಯಾರಿಗೆ ವಹಿಸಬೇಕು ಎನ್ನುವುದು ಈಗಾಗಲೇ ಬಹುತೇಕ ನಿರ್ಧಾರವಾಗಿ ಹೋಗಿದೆ.
ಚುನಾವಣಾ ಫಲಿತಾಂಶ ಹೊರಬಿದ್ದ ದಿನದಿಂದ ಇದುವರೆಗೂ, ಜೆಡಿಎಸ್ ವರಿಷ್ಠ ದೇವೇಗೌಡರ ಮನೆ ಅಕ್ಷರಸಃ ರಾಜಕೀಯ ಚಟುವಟಿಕೆಯ ಕೇಂದ್ರಬಿಂದುವಾಗಿತ್ತು. ಇದಕ್ಕೆ ಕಾರಣ, ಜೆಡಿಎಸ್ - ಕಾಂಗ್ರೆಸ್ ಮೈತ್ರಿಗೆ ರಾಷ್ಟ್ರ ಮಟ್ಟದಲ್ಲಿ ತಳಹದಿ ರೂಪುಗೊಳ್ಳಲು ಕಾರಣವಾಗಿದ್ದು ದೇವೇಗೌಡ್ರು.
ಮಗನನ್ನು ಮುಖ್ಯಮಂತ್ರಿಯಾಗಿ ನೋಡಬೇಕೆನ್ನುವುದು ನನ್ನ ಬಯಕೆ ಎಂದು ಅದೆಷ್ಟೋ ಬಾರಿ ಹೇಳಿದ್ದ ಗೌಡ್ರು, ದೋಸ್ತಿ ಸರಕಾರ ಸರಿಯಾದ ರೀತಿಯಲ್ಲಿ ಅಸ್ತಿತ್ವಕ್ಕೆ ಬಂದು, ಖಾತೆ ಹಂಚಿಕೆ, ಸಚಿವ ಸ್ಥಾನ ಯಾರ್ಯಾರಿಗೆ ನೀಡಬೇಕು ಮುಂತಾದ ಪ್ರಮುಖ ವಿಚಾರಗಳಲ್ಲಿ ತಮ್ಮ ಹಿಡಿತವೇನು ಎನ್ನುವುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಕುಮಾರಸ್ವಾಮಿ ಸರಕಾರ ಸುಗಮವಾಗಿ ಸಾಗಲು, ಆರು ಒಪ್ಪಂದಕ್ಕೆ ಸಹಿ, ಅದ್ಯಾವುದು? ಮುಂದೆ ಓದಿ..

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಜೊತೆಗೆ, ಮತ್ತೊಂದು ಕಾಂಗ್ರೆಸ್ ಮುಕ್ತ ರಾಜ್ಯವಾಗಬಾರದು ಎನ್ನುವ ಏಕೈಕ ಕಾರಣಕ್ಕಾಗಿ ಕಾಂಗ್ರೆಸ್, ಯಾವಾಗ ಅತಂತ್ರ ಫಲಿತಾಂಶ ಹೊರಬೀಳುತ್ತಿದ್ದಂತೇ ಜೆಡಿಎಸ್ ಬಾಗಿಲು ಬಡಿದಿದ್ದು ಎನ್ನುವುದು ಅಪ್ರತಿಮ ರಾಜಕಾರಣಿ ದೇವೇಗೌಡರಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಕಾಂಗ್ರೆಸ್ ಬೆಂಬಲ ಒಪ್ಪಿಕೊಳ್ಳುವಂತೆ ದೇಶದ ಇತರ ಪ್ರಾದೇಶಿಕ ಪಕ್ಷಗಳ ಪ್ರಮುಖರೂ, ಗೌಡ್ರಿಗೆ ಒತ್ತಡ ಹೇರಿದ್ದೂ ಗೌಪ್ಯವಾಗಿ ಉಳಿದಿಲ್ಲ.

ಎರಡೂ ಕೈಯಿಂದ ಬಳಸಿಕೊಂಡ ದೇವೇಗೌಡ್ರು
ಸಿಕ್ಕ ಅವಕಾಶವನ್ನು ಎರಡೂ ಕೈಯಿಂದ ಬಳಸಿಕೊಂಡ ದೇವೇಗೌಡ್ರು, ಸಿಎಂ ಆಗಿ ಕುಮಾರಸ್ವಾಮಿಯ ಅವಧಿ ಐದು ವರ್ಷನೋ ಅಥವಾ ಮೂವತ್ತು ತಿಂಗಳೋ ಎನ್ನುವ ಗೊಂದಲಕ್ಕೂ ಒಂದು ಹಂತಕ್ಕೆ ತೆರೆ ಎಳೆದಿದ್ದಾರೆ. ಜೊತೆಗೆ, ಎಚ್ಡಿಕೆ ಪ್ರಮಾಣವಚನಕ್ಕೆ ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಕರೆಸಿ, ಮುಂದಿನ ಸಾರ್ವತ್ರಿಕ ಚುನಾವಣೆಗೆ ಹೊಸ ಲೆಕ್ಕಾಚಾರಕ್ಕೂ ನಾಂದಿ ಹಾಡಿದ್ದಾರೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಗಳ ಸಹಿ
ಶುಕ್ರವಾರ ( ಜೂ 1) ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸುವ ಮುನ್ನ, ದೇವೇಗೌಡರ ಸಮ್ಮುಖದಲ್ಲಿ ಸರಕಾರ ಯಾವುದೇ ಅಡ್ಡಿ ಆತಂಕವಿಲ್ಲದೇ ಮುಂದುವರಿಯಲು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಗಳು ಸಹಿಹಾಕಿದ್ದಾರೆ ಎನ್ನುವ ಮಾಹಿತಿಯಿದೆ. ಆ ಆರು ಷರತ್ತು ಅಥವಾ ಒಪ್ಪಂದಗಳು ಏನು?ಮುಂದಿನ ಎರಡು ಸ್ಲೈಡಿನಲ್ಲಿ ನೋಡಿ..

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮುಂದುವರಿಯಲಿದೆ
1. ಮುಂದಿನ ಸಾರ್ವವತ್ರಿಕ ಚುನಾವಣೆಯ ವರೆಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮುಂದುವರಿಯಲಿದೆ. ಯಾವ ಕ್ಷೇತ್ರವನ್ನು ಯಾರಿಗೆ ಬಿಟ್ಟುಕೊಡಬೇಕು ಎನ್ನುವುದನ್ನು ಚುನಾವಣಾ ಸಂದರ್ಭದಲ್ಲಿ ನಿರ್ಧರಿಸಲಾಗುವುದು.
2. ಆಡಳಿತಾತ್ಮಕವಾಗಿ ಭಿನ್ನಾಭಿಪ್ರಾಯ ತಲೆದೋರದೇ ಇರಲು, ಸಮನ್ವಯ ಸಮಿತಿ ರಚನೆ. ಸಮನ್ವಯ ಸಮಿತಿ ನೀಡುವ ನಿರ್ದೇಶನದಂತೆ ನಿಗಮ ಮಂಡಳಿಗಳಿಗೆ ನೇಮಕ.
3. ಚುನಾವಣೆಯ ವೇಳೆ ಎರಡು ಪಕ್ಷಗಳು ನೀಡಿದ್ದ ಪ್ರಣಾಳಿಕೆಯನ್ನು ಪೂರ್ಣಗೊಳಿಸಲು ಸಾಮಾನ್ಯ ಕಾರ್ಯಸೂಚಿ ಜಾರಿ.

ಮುಂದಿನ ಐದು ವರ್ಷಕ್ಕೂ ಎಚ್ ಡಿ ಕುಮಾರಸ್ವಾಮಿಯೇ ಸಿಎಂ
4. ಮುಂದಿನ ಐದು ವರ್ಷಕ್ಕೂ ಎಚ್ ಡಿ ಕುಮಾರಸ್ವಾಮಿಯೇ ಸಿಎಂ. ಜೊತೆಗೆ, ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ಸಿಗೆ ಸಿಂಹಪಾಲು. 2/3 ಪಾಲು ಕಾಂಗ್ರೆಸ್ಸಿಗೆ, 1/3 ಪಾಲು ಜೆಡಿಎಸ್ಸಿಗೆ.
5. ದೋಸ್ತಿ ಸರಕಾರದ ದೈನಂದಿನ ಮತ್ತು ಪ್ರಮುಖ ವಿಚಾರಗಳ ಮಾಹಿತಿ ನೀಡಲು, ಎರಡೂ ಪಕ್ಷದಿಂದ ವಕ್ತಾರರ ನೇಮಕ.
6. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ 5 ಸದಸ್ಯರ ಸಮನ್ವಯ ಸಮಿತಿ: ಸಮಿತಿಯಲ್ಲಿ ಕುಮಾರಸ್ವಾಮಿ, ಪರಮೇಶ್ವರ್, ವೇಣುಗೋಪಾಲ್ , ಡ್ಯಾನಿಷ್ ಅಲಿ. ಸಮನ್ವಯ ಸಮಿತಿ ಸಭೆ ಪ್ರತಿ ತಿಂಗಳಿಗೊಮ್ಮೆ ಸಭೆ ಸೇರಿ ಚರ್ಚೆ ನಡೆಸುವ ನಿರ್ಧಾರಕ್ಕೆ ಬರಲಾಗಿದೆ.












Click it and Unblock the Notifications