ಬಳ್ಳಾರಿಯಲ್ಲಿ ರೆಡ್ಡಿ ಬ್ರದರ್ಸ್ ಓಲೈಕೆ ಬಿಜೆಪಿಗೆ ಅನಿವಾರ್ಯವೇ?!
Recommended Video

ಬಳ್ಳಾರಿ, ಏಪ್ರಿಲ್ 06: "ಜನಾರ್ದನ ರೆಡ್ಡಿ ಬಿಜೆಪಿ ಜೊತೆಗಿಲ್ಲ" ಎಂದು ಇತ್ತೀಚೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳುತ್ತಿದ್ದಂತೆಯೇ ಬಳ್ಳಾರಿ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಿದೆ!
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಬಳ್ಳಾರಿ ರಾಜಕೀಯದೊಂದಿಗೆ ಅವಿನಾಭಾವ ನಂಟು ಹೊಂದಿರುವ ಗಾಲಿ ಜನಾರ್ದನ ರೆಡ್ಡಿ ಅವರಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದುಬಿಟ್ಟರೆ ಗಣಿಧೂಳಲ್ಲಿ ಬಿಜೆಪಿ ಮಕಾಡೆ ಮಲಗಿಬಿಡುವುದು ಖಂಡಿತ! ಈ ವಿಷಯ ಗೊತ್ತಿದ್ದರೂ ಶಾ ಇಂಥ ಹೇಳಿಕೆ ನೀಡಿದ್ದು ಸರಿಯೇ..? ಹಾಗಂತ ರಾಜಕೀಯ ತಜ್ಞರು ಪ್ರಶ್ನಿಸುತ್ತಿದ್ದಾರೆ.
ಬಳ್ಳಾರಿಯಲ್ಲಿ ಬಿಜೆಪಿ ಗೆಲ್ಲುವುದಕ್ಕೆ ರೆಡ್ಡಿ ಕುಟುಂಬದ ನೆರವು ಬೇಕೇ ಬೇಕು. ಅದು ಶಾ ಗೆ ಗೊತ್ತಿಲ್ಲದ ವಿಷಯವೇನಲ್ಲ. ಬಹಿರಂಗವಾಗಿ ಗಾಲಿ ರೆಡ್ಡಿಗೂ ನಮಗೂ ಸಂಬಂಧವಿಲ್ಲ, ಅವರೀಗ ಬಿಜೆಪಿ ಜೊತೆಗಿಲ್ಲ ಎಂದರೂ ರೆಡ್ಡಿ ಸಹೋದರರಿಗೆ ಬಿಜೆಪಿ ಟಿಕೇಟ್ ನೀಡದೆ ರಾಜಕೀಯವಾಗಿ 'ತಪ್ಪುನಡೆ' ಇಡುವ ಸಂಭವ ತೀರಾ ಕಡಿಮೆ. ಆ ವಿಶ್ವಾಸ ರೆಡ್ಡಿ ಸಹೋದರರಿಗೂ ಇಲ್ಲದಿಲ್ಲ.

ರೆಡ್ಡಿ ಬ್ರದರ್ಸ್ ಅಸಮಾಧಾನ
ಅಮಿತ್ ಶಾ ಅವರ ಹೇಳಿಕೆ ರೆಡ್ಡಿ ಸಹೋದರರಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಕರ್ನಾಟಕದಲ್ಲಿ ಮೇ 12 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ಈಗಾಗಲೇ ಅಭ್ಯರ್ಥಿಗಳ ಆಯ್ಕೆಯಲ್ಲಿ ಬ್ಯುಸಿಯಾಗಿದೆ. ಈ ಹೊತ್ತಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನೀಡುವ ಇಂಥ ಹೇಳಿಕೆಗಳು ಪಕ್ಷದ ಮೇಲೆ ಸಾಕಷ್ಟು ಪರಿಣಾಮ ಬೀರುವುದು ಖಂಡಿತ. ಶಾ ಅವರ ಹೇಳಲಿಕೆ ಸ್ವತಃ ಜನಾರ್ದನ ರೆಡ್ಡಿ ಅವರಿಗೆ ಮಾತ್ರವಲ್ಲ, ಅವರ ಆಪ್ತ, ಸಂಸದ ಶ್ರೀರಾಮುಲು ಅವರಿಗೂ ಸಾಕಷ್ಟು ನೋವನ್ನುಂಟು ಮಾಡಿದೆ. ಪಕ್ಷಕ್ಕಾಗಿ ಇಷ್ಟು ವರ್ಷ ದುಡಿದವರಿಗೆ ಈಗ ಹೀಗೆ ಹೇಳುವುದು ಸರಿಯೇ ಎಂಬುದು ಅವರ ಪ್ರಶ್ನೆ.

ಕಳಂಕಿತರಿಗೆ ಟಿಕೇಟ್ ಇಲ್ಲ!
ಇತ್ತೀಚೆಗೆ ಟಿಕೇಟ್ ಹಂಚಿಕೆ ಕುರಿತು ಮಾತನಾಡುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಬಿ ಎಸ್ ಯಡಿಯೂರಪ್ಪ,'ಕಳಂಕಿತರಿಗೆ ಯಾವುದೇ ಕಾರಣಕ್ಕೂ ಟಿಕೇಟ್ ನೀಡುವುದಿಲ್ಲ' ಎಂದಿದ್ದಾರೆ. ಯಾರಿಗೆ ಟಿಕೇಟ್ ನೀಡಬೇಕು, ಬಿಡಬೇಕು ಎಂಬ ಬಗ್ಗೆ ಪಕ್ಷದ ರಾಷ್ಟ್ರೀಯ ಮುಖಂಡರೊಂದಿಗೆ ಚರ್ಚಿಸುವುದಾಗಿ ಅವರು ಹೇಳಿದ್ದಾರೆ. ಆದರೆ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ ಸೋಮಶೇಖರ ರೆಡ್ಡಿ ಅಕಸ್ಮಾತ್ ಬಿಜೆಪಿ ಟಿಕೇಟ್ ಸಿಗದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿಯಾದರೂ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರಿಂದ ಎಚ್ಚೆತ್ತ ಬಿಜೆಪಿ ರೆಡ್ಡಿ ಸಹೋದರರನ್ನು ಓಲೈಸಲು ಪ್ರಯತ್ನಿಸುತ್ತಿದೆ ಎಂದೂ ಹೇಳಲಾಗುತ್ತಿದೆ.

ಬಳ್ಳಾರಿ ಸುತ್ತ ಮುತ್ತ ರೆಡ್ಡಿ ಹವಾ
ಬಳ್ಳಾರಿ ಸುತ್ತಮುತ್ತ ರೆಡ್ಡಿಗಳದ್ದೇ ಹವಾ. ಬಳ್ಳಾರಿ-ಚಿತ್ರದುರ್ಗ ಸುತ್ತಮುತ್ತಲ ಜಾಗಗಳಲ್ಲಿ ರೆಡ್ಡಿಗಳ ಪ್ರಭಾವ ಸಾಕಷ್ಟಿದೆ. ಇಲ್ಲಿ ಬೇರೆ ಅಭ್ಯರ್ಥಿಗಳು ನಿಂತರೂ ರೆಡ್ಡಿ ಸಹೋದರರ ಕೃಪಾಕಟಾಕ್ಷವಿಲ್ಲದೆ ರಾಜಕೀಯವಾಗಿ ಉಳಿದುಕೊಳ್ಳುವುದು ಸುಲಭವಲ್ಲ. ಈ ಭಾಗದಲ್ಲಿ ಸ್ಪರ್ಧಿಸುವ ಬಿಜೆಪಿಯ ಇನ್ನಿತರ ಅಭ್ಯರ್ಥಿಗಳು, 'ತಮಗೆ ರೆಡ್ಡಿ ಸಹೋದರರ ನೆರವು ಅತ್ಯಗತ್ಯ ಮತ್ತು ಅನಿವಾರ್ಯ' ಎಂದು ನೇರವಾಗಿಯೇ ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಅಧಿಕಾರ ಹಿಂಪಡೆವ ಯತ್ನ
ಜನಾರ್ದನ ರೆಡ್ಡಿ ಅವರ ಆಪ್ತರು ಅಥವಾ ಅವರಿಗೆ ವಿಧೇಯವಾಗಿರುವವರೇ ಬಳ್ಳಾರಿಯಲ್ಲಿ ಗೆದ್ದುಬಂದರೆ ಕೆಲವು ವರ್ಷಗಳಿಂದ ಈ ಭಾಗದಲ್ಲಿ ತಮ್ಮ ಹಿಡಿತ ಕಳೆದುಕೊಂಡ ಜನಾರ್ದನ ರೆಡ್ಡಿ ಮತ್ತೆ ಅದನ್ನು ಹಿಂಪಡೆಯಲು ಸಾಧ್ಯ. ಆದ್ದರಿಂದಲೇ ಟಿಕೇಟ್ ಹಂಚಿಕೆ ಬಿಜೆಪಿಗೆ ಕಸರತ್ತಾಗಿ ಪರಿಣಮಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದ್ದು, ಈ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳು ಯಾರ್ಯಾರು ಎಂಬುದು ತಿಳಿಯಲಿದೆ.












Click it and Unblock the Notifications