ನೋಟುಗಳಲ್ಲಿ ದೇವತೆಗಳ ಚಿತ್ರಕ್ಕೆ ಕೇಜ್ರಿವಾಲ್ ಮನವಿ: ಗರಂ ಆದ ಬಿಜೆಪಿ
ನವದೆಹಲಿ, ಅಕ್ಟೋಬರ್ 26: ಹೊಸ ಕರೆನ್ಸಿ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಮುದ್ರಿಸುವಂತೆ ಪ್ರಧಾನಿ ಮೋದಿ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಕೇಜ್ರಿವಾಲ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಅರವಿಂದ ಕೇಜ್ರಿವಾಲ್ ಅತಿಯಾಗಿ ಹಿಂದುತ್ವವನ್ನು ಪ್ರತಿಪಾದಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಬಿಜೆಪಿ ಮುಖಂಡ ಸಂಬಿತ್ ಪಾತ್ರ, 'ದೀಪಾವಳಿಯಂದು ಪಟಾಕಿ ಸಿಡಿಸುವುದನ್ನು ದೆಹಲಿ ಸರ್ಕಾರ ನಿಷೇಧಿಸಿದೆ. ಬೆಳಕಿನ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಕೇಜ್ರಿವಾಲ್ ಅವರ ದ್ವಂದ್ವ ನೀತಿ ಬಯಲಾಗಿದೆ' ಎಂದು ಟೀಕಿಸಿದ್ದಾರೆ.
'ಈ ಹಿಂದೆ ಕೇಜ್ರಿವಾಲ್ ಅವರು ಕಾಶ್ಮೀರಿ ಪಂಡಿತರ ಕುರಿತಾದ ಚಿತ್ರವನ್ನು ಲೇವಡಿ ಮಾಡಿದ್ದರು. ಅದರ ಬಗ್ಗೆ ವಿಧಾನ ಸಭೆಯಲ್ಲಿ ವ್ಯಂಗ್ಯವಾಡಿದ್ದರು. ಆದರೆ, ಈಗ ಅವರು ಧಾರ್ಮಿಕರಂತೆ ನಟಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
ಕೇಜ್ರಿವಾಲ್ ಅವರ ಮನವಿ ರಾಜಕೀಯ ಪ್ರೇರಿತವಾಗಿದೆ ಎಂದೂ ಪಾತ್ರ ಹೇಳಿದ್ದಾರೆ.
'ಕೇಜ್ರಿವಾಲ್ ಅವರ ರಾಜಕೀಯ ಈಗ ಯು-ಟರ್ನ್ ತೆಗೆದುಕೊಳ್ಳುತ್ತಿದೆ. ಅಯೋಧ್ಯೆಯ ರಾಮ ಮಂದಿರಕ್ಕೆ ಹೋಗಲು ನಿರಾಕರಿಸಿದ್ದು ಇದೇ ವ್ಯಕ್ತಿ. ಅಲ್ಲಿ ಸಲ್ಲಿಸುವ ಪ್ರಾರ್ಥನೆಗಳನ್ನು ದೇವರು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದೂ ಇದೇ ವ್ಯಕ್ತಿ. ನಗುನಗುತ್ತಲೇ ದೇಶದ್ರೋಹದ ಕರೆ ನೀಡಿದ್ದು ಇದೇ ವ್ಯಕ್ತಿ. ವಿಧಾನಸಭೆಯಲ್ಲಿ ಕಾಶ್ಮೀರಿ ಪಂಡಿತರ ಬಗ್ಗೆ ಸುಳ್ಳು ಹೇಳಿದ್ದು ಇದೇ ವ್ಯಕ್ತಿ' ಎಂದು ಟೀಕಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಹಲವು ಸಚಿವರು ಹಾಗೂ ನಾಯಕರು ಈ ಹಿಂದೆ ಹಿಂದೂ ದೇವರುಗಳನ್ನು ನಿಂದಿಸಿದ್ದಾರೆ. ಅವರು ಇನ್ನೂ ಅದೇ ಪಕ್ಷದಲ್ಲಿದ್ದಾರೆ ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಆರೋಪಿಸಿದ್ದಾರೆ.
'ಗುಜರಾತ್ ಚುನಾವಣೆಯಲ್ಲಿ ಮುಖ ಉಳಿಸಿಕೊಳ್ಳಲು ಅವರು ಹೊಸ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ರಾಮ ಮಂದಿರವನ್ನು ವಿರೋಧಿಸಿದವರು ಹೊಸ ಮುಖವಾಡದೊಂದಿಗೆ ಹೊರ ಬಂದಿದ್ದಾರೆ' ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಸಾಮಾಜಿಕ ಮಾಧ್ಯಮಗಳ ಮುಖ್ಯಸ್ಥ, 'ಕೇಜ್ರಿವಾಲ್ ಹಿಂದೂ ವಿರೋಧಿ. ದೆಹಲಿ ಮತ್ತು ಪಂಜಾಬ್ನಲ್ಲಿ ಅವರ ಆಡಳಿತ ವೈಫಲ್ಯವಾಗಿದೆ. ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶವನ್ನು ಕೇಜ್ರಿವಾಲ್ ಹೊಂದಿದ್ದಾರೆ. ಅವರ ಭರವಸೆ ಹಾಗೂ ಘೋಷಣೆಗಳು ದುರುದ್ದೇಶಗಳಿಂದ ಕೂಡಿವೆ' ಎಂದು ತಿಳಿಸಿದ್ದಾರೆ.
ಕೇಜ್ರಿವಾಲ್ ಮನವಿಗೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬೆಂಬಲ ವ್ಯಕ್ತಪಡಿದ್ದಾರೆ.
'ಜನರ ಏಳಿಗೆಗಾಗಿ ಕರೆನ್ಸಿ ನೋಟುಗಳಲ್ಲಿ ಹಿಂದೂ ದೇವತೆಗಳ ಫೋಟೋಗಳನ್ನು ಮುದ್ರಿಸುವಂತೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ' ಎಂದು ಸಿಸೋಡಿಯಾ ಪ್ರತಿಪಾದಿಸಿದ್ದಾರೆ.
ಕರೆನ್ಸಿ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಮುದ್ರಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಕೇಜ್ರಿವಾಲ್ ಬುಧವಾರ ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, 'ಗಣೇಶ ಹಾಗೂ ಲಕ್ಷ್ಮಿ ಫೋಟೋಗಳನ್ನು ಹೊಸ ಕರೆನ್ಸಿ ನೋಟುಗಳಲ್ಲಿ ಮುದ್ರಿಸಬಹುದು' ಎಂದು ಹೇಳಿದ್ದಾರೆ.
ಹೊಸ ನೋಟುಗಳ ಒಂದು ಬದಿಯಲ್ಲಿ ಮಹಾತ್ಮ ಗಾಂಧಿ, ಇನ್ನೊಂದು ಬದಿಯಲ್ಲಿ ಎರಡು ದೇವತೆಗಳ ಚಿತ್ರಗಳನ್ನು ಮುದ್ರಿಸಬಹುದು. ನಮ್ಮ ಆರ್ಥಿಕತೆಯು ಕಠಿಣ ಸವಾಲುಗಳನ್ನು ಎದುರಿಸುತ್ತಿದೆ. ರಾಕ್ಷಸ ಶಕ್ತಿಗಳು ನಮ್ಮ ವಿರುದ್ಧ ಸಾಲುಗಟ್ಟಿ ನಿಂತಿವೆ ಎಂದು ಅವರು ತಿಳಿಸಿದ್ದಾರೆ.
ದೇವರು ಹಾಗೂ ದೇವತೆಗಳು ನಮ್ಮನ್ನು ಆಶೀರ್ವದಿಸದಿದ್ದರೆ ನಮ್ಮ ಪ್ರಯತ್ನಗಳು ಫಲ ಕೊಡುವುದಿಲ್ಲ. ನಮ್ಮ ನೋಟುಗಳಲ್ಲಿ ಗಣೇಶ ಹಾಗೂ ಲಕ್ಷ್ಮಿ ದೇವತೆಗಳ ಫೋಟೊಗಳನ್ನು ಮುದ್ರಿಸುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
'ನಮ್ಮ ನೋಟುಗಳಲ್ಲಿ ಲಕ್ಷ್ಮಿ-ಗಣೇಶನ ಫೋಟೋ ಇದ್ದರೆ, ನಮ್ಮ ದೇಶವು ಅಭಿವೃದ್ಧಿ ಹೊಂದುತ್ತದೆ. ನಾನು ಈ ಕುರಿತು ಪ್ರಧಾನಿಗೆ ಪತ್ರ ಬರೆಯುತ್ತೇನೆ' ಎಂದು ತಿಳಿಸಿದ್ದಾರೆ.