ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
ಬೆಂಗಳೂರು, ಮಾರ್ಚ್ 28: 2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ರಣಕಣ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ನ ಹಾಲಿ ಸಂಸದ ಡಿಕೆ ಸುರೇಶ್ ಎದುರು ಹೃದಯ ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕಿಳಿಯುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದ ಸುಮಲತಾ ಅಂಬರೀಶ್ ಅವರ ವಿರುದ್ಧ ಹಲವು ಸುಮಲತಾ ಅವರು ಸ್ಪರ್ಧಿಸಿರುವ ತಂತ್ರಗಾರಿಕೆ ಇದೀಗ ಬೆಂಗಳೂರು ಗ್ರಾಮಾಂತರಕ್ಕೆ ಬಂತಾ ಎಂಬ ಪ್ರಶ್ನೆಯೂ ಮೂಡಿದೆ.
ಬೆಂಗಳೂರು ಗ್ರಾಮಾಂಕರ ಲೋಕಸಭಾ ಕ್ಷೇತ್ರ ಡಿ ಕೆ ಬ್ರದರ್ಸ್ ಗೆ ಪ್ರತಿಷ್ಠೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಎದುರು ಬಹುಜನ ಭಾರತ್ ಪಾರ್ಟಿಯಿಂದ ಡಾ ಸಿಎನ್ ಮಂಜುನಾಥ್ ಎನ್ನುವವರು ಬೆಂಗಳೂರು ಗ್ರಾಮಾಂತರದಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಈಗಾಗಲೇ ನಾನು ಕೂಡ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಘೋಷಿಸಿರುವ ಬಿಬಿಪಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ದಲಿತ ಮತಗಳೇ ನಿರ್ಣಾಯಕ ಪಾತ್ರ ವಹಿಸಲಿದ್ದು, ಸಮಾಜದಲ್ಲಿ ಶೋಷಣೆಗೊಳಗಾದ ನಮ್ಮ ಸಮುದಾಯವನ್ನು ಎಚ್ಚರಗೊಳಿಸಲು ಮತ್ತು ಸಂಘಟಿಸಲು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಬಹುಜನ ಭಾರತ್ ಪಾರ್ಟಿಯ ಡಾ ಸಿಎನ್ ಮಂಜುನಾಥ್ ಹೇಳಿದ್ದಾರೆ.

ಡಾ ಬಿಆರ್ ಅಂಬೇಡ್ಕರ್ರವರು ನೀಡಿದ ಮತದಾನದ ಹಕ್ಕನ್ನು ಹೇಗೆ ಚಲಾಯಿಸಬೇಕೆಂದು ನಮ್ಮ ದಲಿತರು ತಿಳಿದುಕೊಂಡು ಮತದಾನ ಮಾಡಬೇಕು ಎಂದು ಇದೇ ವೇಳೆ ಬಹುಜನ ಭಾರತ್ ಪಾರ್ಟಿ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಮನವಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಈ ಬಾರಿ ಇಬ್ಬರು ಡಾ.ಸಿ ಎನ್ ಮಂಜುನಾಥ್ ಅವರು ಸ್ಪರ್ಧಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಇಬ್ಬರು ಅಭ್ಯರ್ಥಿಗಳ ಹೆಸರು ಒಂದೇ ಆಗಿದ್ದು, ತಂದೆಯ ಹೆಸರು ಕೂಡ ಒಂದೇ ಆಗಿದೆ. ಒಂದೇ ಜಿಲ್ಲೆ, ಒಂದೇ ತಾಲೂಕಿನವರಾಗಿದ್ದು, ಇಬ್ಬರಿಗೂ ಗೌರವ ಡಾಕ್ಟರೇಟ್ ದೊರೆತಿದೆ. ಹೀಗಾಗಿ ಈ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಎದುರು ಮೂರು ಜನ ಸುಮಲತಾ ಎನ್ನುವವರು ಚುನಾವಣಾ ಕಣದಲ್ಲಿದ್ರು. ಸುಮಲತಾ ಅಂಬರೀಶ್ ಅವರನ್ನು ಸೋಲಿಸಲು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರೇ ಸುಮಲತಾ ಹೆಸರಿನ ವಿವಿಧ ಮಹಿಳೆಯರನ್ನು ಕಣಕ್ಕಿಳಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದೀಗ ಮಂಡ್ಯ ಮಾದರಿಯಲ್ಲಿಯೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ ಸಿಎನ್ ಮಂಜುನಾಥ್ ಎದುರು ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕಿಳಿದಿರುವುದು ತೀವ್ರ ಕುತೂಹಲ ಮೂಡಿಸಿದೆ.












Click it and Unblock the Notifications