ನೆರೆ ಹಾನಿಗೆ ಪರಿಹಾರ ಕೊಡಿ, ಸಿಎಂಗೆ ಎಚ್ಡಿಕೆ ಪತ್ರ
ಬೆಂಗಳೂರು, ಸೆ. 18 : ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸರ್ಕಾರ 5000 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಬೆಳೆಹಾನಿ ಸೇರಿದಂತೆ ನಷ್ಟದ ಕುರಿತು ನಿಖರ ವರದಿ ತಯಾರಿಸದ ಅಧಿಕಾರಿಗಳ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ, ಕೊಪ್ಪಳ, ಬಾಗಲಕೋಟೆ, ಬಿಜಾಪುರ, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಬೆಳೆ, ಮನೆ, ರಸ್ತೆಗಳು ಹಾಳಾಗಿವೆ. ಆದ್ದರಿಂದ ಈ ಭಾಗಕ್ಕೆ ಐದು ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ. [ಮಳೆ ಹಾನಿ ಪರಿಹಾರಕ್ಕೆ ಕೇಂದ್ರಕ್ಕೆ ಮೊರೆ : ಸಿಎಂ]

ಮಳೆಯಿಂದಾಗಿ ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಹಾನಿ ಉಂಟಾಗಿಲ್ಲ, ನಗರ ಪ್ರದೇಶದಲ್ಲಿಯೂ ಮನೆಗಳು ಕುಸಿದಿವೆ. ಆದ್ದರಿಂದ ಆಗಿರುವ ನಷ್ಟದ ಬಗ್ಗೆ ಸರಿಯಾದ ವರದಿ ತಯಾರಿಸಿ ಪರಿಹಾರ ನೀಡಬೇಕು. ರೈತರಿಗೆ ಮತ್ತು ಬಡವರಿಗೆ ಸರ್ಕಾರ ಅನ್ಯಾಯ ಮಾಡಬಾರದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.[ಕೇಂದ್ರ ಸಚಿವರಿಂದ ಮಳೆ ಹಾನಿ ಅಧ್ಯಯನ]
ಬೆಳೆ ಮತ್ತು ಮನೆ ಹಾನಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾರ್ಗಸೂಚಿಯಂತೆ ನೀಡುವ ಪರಿಹಾರ ಅತ್ಯಲ್ಪವಾಗಿದೆ. ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರ ಪ್ರತಿ ಎಕರೆಗೆ ಕನಿಷ್ಟ 20,000 ರೂ, ಮನೆ ಕಳೆದುಕೊಂಡವರಿಗೆ 50,000 ರೂ. ಪರಿಹಾರ ನೀಡಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಿ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು. ನೆರೆ ಹಾವಳಿಯಿಂದ ಹಾನಿಗೊಳಾದ ಜಿಲ್ಲೆಗಳಿಗೆ 5000 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications