ಆಹಾರ ನಿಗಮದ ಕಮಿಟ್ಮೆಂಟ್ ಪತ್ರ ಹಂಚಿಕೊಂಡ ಸಿದ್ದರಾಮಯ್ಯ: ಸಿಟಿ ರವಿಗೆ ಸಿಎಂ ತಿರುಗೇಟು
ಬೆಂಗಳೂರು, ಜೂನ್ 16: ರಾಜ್ಯದಲ್ಲಿ ಅನ್ನಭಾಗ್ಯ ವಿವಾದ ಭುಗಿಲೆದ್ದಿದೆ. ಅಕ್ಕಿ ನೀಡುವ ವಿಚಾರದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ರಾಜ್ಯಕ್ಕೆ ನೀಡಬೇಕಿರುವ ಅಕ್ಕಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು ಕಾಂಗ್ರೆಸ್ ಆರೋಪ ಸುಳ್ಳು ಎಂದು ಹೇಳಿಕೆ ನೀಡುತ್ತಿದ್ದಾರೆ.
ಈ ವಿಚಾರವಾಗಿ ಶುಕ್ರವಾರ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಭಾರತೀಯ ಆಹಾರ ನಿಗಮ (ಎಫ್ಸಿಐ) ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಎಂದು ಹೇಳಿರುವ ಕಮಿಟ್ಮೆಂಟ್ ಪತ್ರ ತೋರಿಸಲಿ ಎಂದು ಬಿಜೆಪಿ ನಾಯಕ ಸಿಟಿ ರವಿ ಸವಾಲು ಹಾಕಿದ್ದರು. ಇಲ್ಲಿದೆ ಎಫ್.ಸಿ.ಐ ಕಮಿಟ್ಮೆಂಟ್ ಪತ್ರ' ಎಂದು ತಿಳಿಸಿದ್ದಾರೆ. ಈ ಟ್ವೀಟ್ನೊಂದಿಗೆ ಪತ್ರವನ್ನೂ ಅಂಟಿಸಿದ್ದಾರೆ.

'ಇಂತಹ ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಯ ಇಂತಹ ನಾಯಕರನ್ನು ಸೋಲಿಸಿ ಮನೆಗೆ ಕಳಿಸಿರುವುದು' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
'ಸಿ.ಟಿ.ರವಿ ಮತ್ತಿತರ ಬಿಜೆಪಿ ನಾಯಕರು ಮೊದಲು ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿ ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿ ಪೂರೈಸುವಂತೆ ಮಾಡಬೇಕೇ ಹೊರತು, ಬಡವರ ಹೊಟ್ಟೆಗೆ ಹೊಡೆಯುವ ಕೇಂದ್ರ ಸರ್ಕಾರದ ಜನವಿರೋಧಿ ನಿಲುವನ್ನು ಬೆಂಬಲಿಸುವುದಲ್ಲ' ಎಂದೂ ಅವರು ಹೇಳಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ಟ್ವೀಟ್
'#BJP ಗೆ ಓಟು ಹಾಕದಿದ್ರೆ ಕೇಂದ್ರದ ಯೋಜನೆ ಕಡಿತ' ಎಂದು ಜೆಪಿ ನಡ್ಡಾ ಚುನಾವಣಾ ಪೂರ್ವದಲ್ಲಿ ರಾಜ್ಯದ ಜನರಿಗೆ ಬೆದರಿಕೆ ಹಾಕಿದ್ದರು. ಅದರೂ ರಾಜ್ಯದ ಜನ ನಡ್ಡಾ ಬೆದರಿಕೆಗೆ ಜಗ್ಗದೆ BJP ಸೋಲಿಸಿದ್ದರು. ಕೇಂದ್ರ ಈಗ ರಾಜ್ಯಕ್ಕೆ ಅಕ್ಕಿ ಮಾರಾಟ ಸ್ಥಗಿತ ಮಾಡಿರುವುದು ಆ ಬೆದರಿಕೆಯ ಭಾಗವೇ? ಅಥವಾ ರಾಜ್ಯದ ಜನರ ಮೇಲೆ ಸೋಲಿನ ಪ್ರತಿಕಾರವೇ?' ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
'ಡಬಲ್ ಇಂಜೀನ್ ಸರ್ಕಾರವಿದ್ದಾಗಲೇ ಕೇಂದ್ರ ರಾಜ್ಯಕ್ಕೆ ಅನ್ಯಾಯ ಎಸಗಿದೆ. ಆಗ ನೆರೆ ಪರಿಹಾರಕ್ಕೂ ಸತಾಯಿಸಿದೆ, ಬರ ಪರಿಹಾರಕ್ಕೂ ಸತಾಯಿಸಿದೆ. GSTಯಲ್ಲಿ ಮೋಸ ಮಾಡಿದರು, ಬಾಕಿ ಕೊಡಲಿಲ್ಲ, ಪರಿಹಾರವನ್ನೂ ಕೊಡಲಿಲ್ಲ. ಈಗ ಡಬಲ್ ಇಂಜೀನ್ ಸರ್ಕಾರವಿಲ್ಲ. ಹೀಗಿರುವಾಗ ಕೇಂದ್ರಕ್ಕೆ ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸದಿರುತ್ತದೆಯೇ?' ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications