Anna Bhagya: ಪಡಿತರಿಗೆ ಸಿಹಿ ಸುದ್ದಿ: ರಾಜ್ಯಕ್ಕೆ ಅಕ್ಕಿ ನೀಡಲು 3 ಸಂಸ್ಥೆಗಳ ತಾತ್ವಿಕ ಒಪ್ಪಿಗೆ: 1 ವಾರದಲ್ಲಿ ಸ್ಪಷ್ಟ ಚಿತ್ರಣ
ಬೆಂಗಳೂರು, ಜೂನ್ 25: ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಕ್ಕಿ ಭಾಗ್ಯ ಗ್ಯಾರಂಟಿ ಘೋಷಿಸಿದಾಗಿನಿಂದಲೂ ಒಂದಲ್ಲ ಒಂದು ಟೀಕೆ ಎದುರಿಸಿತ್ತು. ಈ ಮಧ್ಯೆ ಎಷ್ಟೇ ಮನವಿ ಮಾಡಿದರೂ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿತು. ಈ ಮಧ್ಯೆ ಬೇರೆ ಬೇರೆ ರಾಜ್ಯಗಳನ್ನು ಸಂಪರ್ಕಿಸಿರುವ ರಾಜ್ಯ ಸರ್ಕಾರ ಇನ್ನೊಂದು ವಾರದಲ್ಲಿ ಜನತೆಗೆ ಸಿಹಿ ಸುದ್ದಿ ನೀಡಲಿದೆ.
ಕಾಂಗ್ರೆಸ್ ಪಕ್ಷ ಹೇಳಿದಂತೆ ಜುಲೈ 1ರಿಂದಲೇ ಅಕ್ಕಿ ವಿತರಿಸಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ. ಇತ್ತ ಕೇಂದ್ರ ಸರ್ಕಾರ ಅಕ್ಕಿ ವಿತರಿಸದೇ ಮಾತು ತಪ್ಪಿದೆ. ಬೇಕು ಅಂತಲೇ ಅಕ್ಕಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಮಹತ್ವಾಕಾಂಕ್ಷೆಯ 'ಅನ್ನಭಾಗ್ಯ' ಯೋಜನೆ ಜಾರಿ ಮಾಡಿಯೇ ತೀರುತ್ತೇವೆ ಎಂದಿರುವ ಸರ್ಕಾರಕ್ಕೆ ಕೇಂದ್ರೀಯ ವ್ಯಾಪ್ತಿಯ ಮೂರು ಸಂಸ್ಥೆಗಳು ಅಕ್ಕಿ ವಿತರಣೆಗೆ ತಾತ್ವಿಕ ಒಪ್ಪಿಗೆ ನೀಡಿವೆ.

ಅರ್ಹ ಪಡಿತರ ಕುಟುಂಬಗಳ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸುವ ಯೋಜನೆ ಈ 'ಅನ್ನಭಾಗ್ಯ' ಆಗಿದೆ. ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವಿನಿಂದ ರಾಜ್ಯ ಕಂಗಾಲಾಗಿದೆ. ಜನರಿಗೆ ನೀಡಿದ ಭರವಸೆಯಂತೆ ನಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಚಿಂತೆಗೀಡಾಗಿದೆ. ಸದ್ಯದ ಬೆಳವಣಿಗೆ ನೋಡಿದರೆ, ಅಕ್ಕಿ ವಿತರಣೆ ಖಚಿತ ಎನ್ನಲಾಗುತ್ತಿದೆ. ಆದರೆ ಜುಲೈ 1ರಿಂದಲೋ ಅಥವಾ ಇನ್ನೂ ತಡವಾಗಿಯೋ ಎಂಬ ಬಗ್ಗೆ ನಿಖರತೆ ಇಲ್ಲ. ಈ ಕುರಿತ ಗೊಂದಲಗಳಿಗೆ ಜುಲೈ ಮೊದಲ ವಾರ ತೆರೆ ಬೀಳುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರದ ಎಫ್ಸಿಐ ಕಡಿಮೆ ಬೆಲೆಯಲ್ಲಿ ಅಕ್ಕಿ ವಿತರಿಸುತ್ತದೆ. ಅಂತೆಯೇ ರಾಜ್ಯ ಸರ್ಕಾರದ ನಿರಂತರ ಪ್ರಯತ್ನ, ನೆರೆ ರಾಜ್ಯ ಸರ್ಕಾರಗಳ ಜೊತೆಗಿನ ಮನವಿ ಮೇರೆಗೆ ಕೇಂದ್ರೀಯ ಸ್ವಾಮ್ಯದ 03 ಸಂಸ್ಥೆಗಳಿಂದ ಅಕ್ಕಿ ಖರೀದಿಸಲು ಕಾಂಗ್ರೆಸ್ ಮುಂದಾಗಿದೆ. ಈ ಬಗ್ಗೆ ಸದ್ಯ ತಾತ್ವಿಕ ಒಪ್ಪಿಗೆಯಂತೂ ಸಿಕ್ಕಿದೆ. ಆದರೆ ಮೂರು ಏಜೆನ್ಸಿಗಳ ಅಕ್ಕಿಯ ದರ ಎಫ್ಸಿಐ ಗಿಂತ ಅತ್ಯಧಿಕ ಎನ್ನಲಾಗುತ್ತಿದೆ.
ಸಂಸ್ಥೆಗಳ ದರ ನಿಗದಿ ಬಳಿಕ ಸರ್ಕಾರ ನಿರ್ಧಾರ
ಲಭ್ಯ ಮಾಹಿತಿಗಳ ಪ್ರಕಾರ, ಈ ಮೂರು ಸಂಸ್ಥೆಗಳಿಗೆ ಪ್ರತಿ ಕೆಜಿ ಅಕ್ಕಿಗೆ 40 ರೂಪಾಯಿಗೆ ಹೆಚ್ಚು ಖರ್ಚಾಗಲಿದೆ. ಇದು ಎಫ್ಸಿಐ ನೀಡುವ ಅಕ್ಕಿಯ ಬೆಲೆಗಿಂತ ಅಧಿಕವಾಗಿದೆ. ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ನೀಡಲು 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಈ ಸಂಬಂಧ ರಾಜ್ಯ ಆಹಾರ ಇಲಾಖೆ ಅಧಿಕಾರಿಗಳು ಅಕ್ಕಿ ಪ್ರತಿ ಕೇಜಿ ಬೆಲೆ ಮತ್ತು ಸಾಗಾಣೆ ಖರ್ಚಿನ ಬಗ್ಗೆ ಲೆಕ್ಕಾಚಾರ ನಡೆಸಿದೆ. ಜೊತೆಗೆ ಪ್ರತಿ ಕೆ.ಜಿ. ಅಕ್ಕಿ ಮೇಲೆ ನೀವೆ ದರ ನಿಗದಿ (Rate Fix) ಮಾಡಲು ತಿಳಿಸಿದೆ. ಸಂಸ್ಥೆಗಳು ಹೇಳಿದ ಬಳಿಕ ರಾಜ್ಯ ಸರ್ಕಾರ ಬಗ್ಗೆ ಅಂತಿಮ ನೀರ್ಧಾರ ಕೈಗೊಳ್ಳಲಿದೆ.

ಈ ಎಲ್ಲ ಪ್ರಕ್ರಿಯೆ ಮುಗಿಯಲು ಇನ್ನೋ ಒಂದು ವಾರದ ಬೇಕಾಗಬಹುದು. ಅದಾದ ಬಳಿಕವೇ ಅನ್ನಭಾಗ್ಯ ಯೋಜನೆ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ. ನಂತರವೇ ಯೋಜನೆ ಜಾರಿಯ ದಿನಾಂಕ ಘೋಷಣೆ ಆಗಲಿದೆ.












Click it and Unblock the Notifications