ಯಡಿಯೂರಪ್ಪ-ಈಶ್ವರಪ್ಪಗೆ ಅಮಿತ್ ಶಾರಿಂದ ಬುಲಾವ್
ಯಡಿಯೂರಪ್ಪ ಹಾಗೂ ಈಶ್ವರಪ್ಪ ಇಬ್ಬರು ನಾಯಕರಿಗೂ ದೆಹಲಿಯಿಂದ ಬುಲಾವ್ ಬಂದಿದ್ದು, ಶುಕ್ರವಾರ ಸಂಜೆ ವೇಳೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆ 'ಚಾಯ್ ಪೇ ಚರ್ಚಾ' ನಡೆಸಲಿದ್ದಾರೆ.
ಬೆಂಗಳೂರು, ಜನವರಿ 26: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ನಡುವಿನ ಪ್ರತಿಷ್ಠೆಯ ಕಿತ್ತಾಟಕ್ಕೆ ಇತಿಶ್ರೀ ಹಾಡಲು ಹೈಕಮಾಂಡ್ ನಿರ್ಧರಿಸಿದೆ.
ಇಬ್ಬರು ನಾಯಕರಿಗೂ ದೆಹಲಿಯಿಂದ ಬುಲಾವ್ ಬಂದಿದ್ದು, ಶುಕ್ರವಾರ ಸಂಜೆ ವೇಳೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆ 'ಚಾಯ್ ಪೇ ಚರ್ಚಾ' ನಡೆಸಲಿದ್ದಾರೆ. ಈ ಸಭೆ, ಈಶ್ವರಪ್ಪ ಅವರನ್ನು ಹೊರಹಾಕಲು ಕರೆದಿರುವ ಸಭೆಯಲ್ಲ, ಸಂಧಾನ ಸಭೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದಿದೆ.
ಬಿಜೆಪಿಯಿಂದ ಈಶ್ವರಪ್ಪರನ್ನು ತೆಗೆದು ಹಾಕ್ತಾರಂತೆ? ಯಡಿಯೂರಪ್ಪ ಕಡೆಯವರು ಸಹಿ ಸಂಗ್ರಹ ಮಾಡುತ್ತಿದ್ದಾರಂತೆ? ಕುರುಬ ಜನಾಂಗವನ್ನು ಕಡೆಗಣಿಸಲು ಸಾಧ್ಯವೇ? ಎಂಬ ಅನೇಕ ಪ್ರಶ್ನೆಗಳು ಸುದ್ದಿಗಳು ಹರಿದಾಡುತ್ತಿರುವ ಸಂದರ್ಭದಲ್ಲೇ ದೆಹಲಿಯಿಂದ ಇಬ್ಬರಿಗೂ ಕರೆ ಬಂದಿರುವುದು ಕುತೂಹಲ ಕೆರಳಿಸಿದೆ. [ರೆಬೆಲ್ ಸ್ಟಾರ್ ಈಶ್ವರಪ್ಪ ಬಿಜೆಪಿಯಿಂದ ಕಿಕ್ ಔಟ್?]
ಈ ಮುಂಚೆ ಪರಿಸ್ಥಿತಿಯ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದ ಬಿಜೆಪಿ ಹೈಕಮಾಂಡ್ ಗೆ ಈಗ ಪರಿಸ್ಥಿತಿ ಕೈ ಮೀರುವ ಹಂತ ತಲುಪಿರುವ ಮುನ್ಸೂಚನೆ ಸಿಕ್ಕಿದೆ.
ಕಲಬುರಗಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಇಬ್ಬರು ನಾಯಕರು ಮುನಿಸಿಕೊಂಡು ನೀಡುತ್ತಿದ್ದ ಹೇಳಿಕೆಗಳು ದೆಹಲಿಗೆ ರವಾನೆಯಾಗಿದ್ದು, ಅಮಿತ್ ಶಾ ಅವರ ಮನೆಯಲ್ಲಿ ಇಬ್ಬರು ನಾಯಕರು ತಮ್ಮ ವಾದ-ಪ್ರತಿವಾದ ಮಂಡಿಸಲಿದ್ದಾರೆ..

ಸಂಧಾನದತ್ತ ಇಬ್ಬರಿಗೂ ಒಲವು
ಅಮಿತ್ ಶಾ ಅವರ ಕರೆಯ ಮೇರೆಗೆ ದೆಹಲಿಗೆ ತೆರಳಿ ಮಾತಕತೆಗೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದು ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ನಡುವೆ ಬಾಗಲಕೋಟೆಯ ಕೂಡಲಸಂಗಮದಲ್ಲಿರುವ ಈಶ್ವರಪ್ಪ ಅವರು ಕೂಡಾ ಹೈಕಮಾಂಡ್ ಮುಂದೆ ತಮ್ಮ ವಾದ ಮಂಡಿಸುವುದಾಗಿ ಹೇಳಿದ್ದಾರೆ. ಇಬ್ಬರಿಗೂ ಸಂಧಾನದತ್ತ ಒಲವಿದೆ. ಬಿಜೆಪಿ ಹೈಕಮಾಂಡ್ ಗೂ ಇದು ಅನಿವಾರ್ಯವಾಗಿದೆ.

ಅಮಿತ್ ಶಾ ಅವರು ಗೊಂದಲ ಬಗೆಹರಿಸಲಿದ್ದಾರೆ
'ಈಶ್ವರಪ್ಪ ವಿರುದ್ಧ ಸಹಿ ಸಂಗ್ರಹದ ಅಗತ್ಯ ಇಲ್ಲ. ಅಮಿತ್ ಶಾ ಅವರು ಗೊಂದಲ ಬಗೆಹರಿಸಲಿದ್ದಾರೆ ಎಂಬ ವಿಶ್ವಾಸವಿದೆ. ಈಶ್ವರಪ್ಪ ಅವರ ಟೀಕೆಗಳಿಗೂ ಪ್ರತಿಕ್ರಿಯಿಸುವುದಿಲ್ಲ. ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸದಂತೆ ಪಕ್ಷದ ನಾಯಕರಿಗೆ ಸೂಚಿಸಿದ್ದೇನೆ' ಎಂದು ಯಡಿಯೂರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು

ಅಮಿತ್ ಶಾ ಬಳಿ ಇದೆ ರಿಪೋರ್ಟ್ ಕಾರ್ಡ್
ರಾಜ್ಯದ ಉಸ್ತುವಾರಿ ವಹಿಸಿರುವ ಮುರಳೀಧರರಾವ್ ಅವರು ರಾಯಣ್ಣ ಬ್ರಿಗೇಡ್ ಚಟುವಟಿಕೆ, ಬಿಎಸ್ ಯಡಿಯೂರಪ್ಪ ಪರ ಬೆಂಬಲಿಗರ ಸಹಿ ಸಂಗ್ರಹ, ಬಿಎಸ್ ವೈ ಬ್ರಿಗೇಡ್ ನಿರ್ಮಾಣ ಚಿಂತನೆ, ಜಾತಿವಾರು ಲೆಕ್ಕಾಚಾರ, ಕಲಬುರಗಿಯಲ್ಲಿ ನಡೆದ ಘಟನಾವಳಿಗಳು ಸೇರಿದಂತೆ ಸಮಗ್ರ ವರದಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮುಂದಿಟ್ಟಿದ್ದಾರೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ಭೇಟಿಗೂ ಮುನ್ನ ಶಾ ಅವರು ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ.

ಅಮಿತ್ ಶಾ ಸಂಧಾನ ಸಭೆ
ಯಡಿಯೂರಪ್ಪ, ಈಶ್ವರಪ್ಪ ಅಲ್ಲದೆ, ಪಕ್ಷದ ಮುಖಂಡರಾದ ಸಂತೋಷ್, ರಾಮ್ಲಾಲ್, ಮುಕುಂದ, ಮುರಳೀಧರರಾವ್ ಅವರನ್ನೂ ಆಹ್ವಾನಿಸಲಾಗಿದೆ. ಜತೆಗೆ ಜಗದೀಶ್ ಶೆಟ್ಟರ್, ಕೇಂದ್ರ ಮಂತ್ರಿಗಳಾದ ಅನಂತ್ ಕುಮಾರ್. ಡಿ.ವಿ ಸದಾನಂದ ಗೌಡ, ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಭಾಗವಹಿಸಲಿದ್ದಾರೆ ಎಂಬ ಸುದ್ದಿಯಿದೆ. ಇದು ಈಶ್ವರಪ್ಪ ಅವರನ್ನು ಹೊರಹಾಕಲು ಕರೆದಿರುವ ಸಭೆಯಲ್ಲ, ಸಂಧಾನ ಸಭೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ತಿಳಿದಿದೆ.












Click it and Unblock the Notifications