ಕರ್ನಾಟಕದಲ್ಲಿ ಜಯಭೇರಿ ಬಾರಿಸಲು ಅಮಿತ್ ಶಾ 23 ಸೂತ್ರ
ಬೆಂಗಳೂರು, ಜನವರಿ 9: ಶತಾಯಗತಾಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ಅದಕ್ಕೆ ಬೇಕಾದ ರಣತಂತ್ರಗಳನ್ನು ಹೆಣೆಯುತ್ತಿದೆ.
ಚುನಾವಣಾ ಸಿದ್ಧತೆ ವಿಚಾರಕ್ಕೆ ಬಂದಾಗ ಸದ್ಯ ಆಡಳಿತರೂಢ ಕಾಂಗ್ರೆಸ್ ಪಕ್ಷ ಪ್ರತಿಪಕ್ಷ ಬಿಜೆಪಿಯಿಂದ ಒಂದು ಹೆಜ್ಜೆ ಮುಂದಿದ್ದು ಕೇಸರಿ ಪಕ್ಷದ ಚುನಾವಣಾ ಚಾಣಾಕ್ಯ ಅಮಿತ್ ಶಾ ತಲೆ ಕೆಡಿಸಿದೆ.
ಅಭ್ಯರ್ಥಿಗಳ ಘೋಷಣೆಗೆ ತಡೆ, ಏನಿದು ಅಮಿತ್ ಶಾ ಲೆಕ್ಕಾಚಾರ?
ಆದರೆ ಸೋಲೊಪ್ಪಿಕೊಳ್ಳಲು ಸಿದ್ದವಿಲ್ಲದ ಅಮಿತ್ ಶಾ ಸ್ವತಃ ಕರ್ನಾಟಕ ಚುನಾವಣೆ ಗೆಲ್ಲಲು 23 ಸೂತ್ರಗಳನ್ನು ಮುಂದಿಟ್ಟಿದ್ದಾರೆ.
ಸುಖ ಸಂಸಾರಕ್ಕೆ 12 ಸೂತ್ರಗಳು ಸಾಕು ಅಂತಾರೆ ಅನುಭವಸ್ಥರು. ಆದರೆ, ಸುಸೂತ್ರವಾಗಿ ಗೆದ್ದು ಸರಕಾರ ರಚಿಸಲು 12 ಸೂತ್ರಗಳು ಸಾಕಾಗುವುದಿಲ್ಲ. ಆ ಕಾರಣಕ್ಕಾಗಿಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು 23 ಸೂತ್ರಗಳನ್ನು ಹಿಡಿದುಕೊಂಡು ಕರ್ನಾಟಕ್ಕೆ ಬಂದಿದ್ದಾರೆ.
ಅವುಗಳು ಹೀಗಿವೆ,
ಮತಗಟ್ಟೆಗಳ ಮೇಲೆ ಕಣ್ಣು
1) ವಾರದಲ್ಲಿ ವಾಸ್ತವ್ಯ ಸಹಿತ ಎರಡು ದಿನ ಪ್ರವಾಸ
2) ಪ್ರತಿ ಮತಗಟ್ಟೆಗೆ ಶಕ್ತಿಕೇಂದ್ರದ ಪ್ರಮುಖರ ನೇಮಕ
3) ಮಂಡಳದ ವಿಸ್ತೃತ ಸಭೆ ನಡೆಸಲು ಸೂಚನೆ
4) ಶಕ್ತಿಕೇಂದ್ರದ ಪ್ರಮುಖರು ಜನವರಿ ಮತ್ತು ಫೆಬ್ರವರಿಯಲ್ಲಿ ಎರಡು ದಿನ ಪ್ರವಾಸ ಕಡ್ಡಾಯ
5) 2008, 2013ರ ವಿಧಾನಸಭೆ ಹಾಗೂ 2014ರ ಲೋಕಸಭಾ ಚುನಾವಣೆ ಆಧಾರದ ಮೇಲೆ ಮತಗಟ್ಟೆಗಳನ್ನ A B C ಎಂದು ವರ್ಗಿಕರಿಸಬೇಕು
ಎಸ್ಸಿ, ಎಸ್ಟಿ, ಓಬಿಸಿ ಮತಗಳ ಮೇಲೆ ಕಣ್ಣು
6) ಮತಗಟ್ಟೆ ಸಶಕ್ತೀಕರಣ ಪೂರ್ಣಗೊಳಿಸಬೇಕು
7) ಎಸ್ಸಿ, ಎಸ್ಟಿ, ಓಬಿಸಿ ಸಮುದಾಯದ ಕನಿಷ್ಠ 10 ಹೊಸ ಸದಸ್ಯತ್ವ ಮಾಡಬೇಕು
8) ಸಹಕಾರಿ ನಿರ್ದೇಶಕರ ಮತ್ತು ಸ್ವಸಹಾಯ ಸಂಘಗಳ ಸದಸ್ಯರ ಪಟ್ಟಿ ಸಿದ್ಧಪಡಿಸಬೇಕು
9) ಮಂದಿರ, ಮಠ, ಸಾಧು-ಸಂತರ ಪಟ್ಟಿ ಸಿದ್ದಪಡಿಸಿ ಚರ್ಚಿಸಬೇಕು
10) ಪಂಚಾಯಿತಿ ಚುನಾವಣೆ ಸೋತವರ ಪಟ್ಟಿ ಸಿದ್ಧಪಡಿಸಬೇಕು. ಪಕ್ಷಕ್ಕೆ ಸೇರಿಸಿಕೊಳ್ಳಬೇಕು
ಸ್ಮಾರ್ಟ್ ಪ್ರಚಾರಕ್ಕೆ ಒತ್ತು
11) ಸ್ಮಾರ್ಟ್ ಪೋನ್ ಇರುವವರ ಪಟ್ಟಿ ತಯಾರಿಸಬೇಕು
12) ಮೋಟರ್ ಬೈಕ್ ಇರುವವರ ಪಟ್ಟಿ ಸಿದ್ಧಪಡಿಸಬೇಕು
13) ಪ್ರತಿ ಮತಗಟ್ಟೆಯಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಎಂಬ ಘೋಷಣೆಯುಳ್ಳ ಗೋಡೆ ಬರಹ 5 ಸ್ಥಳದಲ್ಲಿ ಬರೆಯಬೇಕು
14) ಪ್ರತಿಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ವಿರುದ್ಧ ಚಾರ್ಜ್ ಶೀಟ್ ತಯಾರಿಸಬೇಕು, ಮಾರ್ಚ್ ನಲ್ಲಿ ಬೈಕ್ ರ್ಯಾಲಿ ತೆರಳಿ ಚಾರ್ಜ್ ಶೀಟ್ ಹಂಚಬೇಕು
15) ವಿಧಾನಸಭೆ ಕ್ಷೇತ್ರದಲ್ಲಿ 8-10 ಪ್ರಮುಖರ ಕೋರ್ ಕಮಿಟಿ ರಚನೆ
ವಾಟ್ಸಾಪ್ ಪ್ರಚಾರ
16) ಮತಗಟ್ಟೆಯ ಪ್ರತಿ ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜಾರೋಹಣ
17) ನವಶಕ್ತಿ ಸಮಾವೇಶ ಕಡ್ಡಾಯವಾಗಿ ಆಯೋಜಿಸಬೇಕು
18) ಸಾಮಾಜಿಕ ಜಾಲತಾಣ ಕಾರ್ಯಾಗಾರ ಮಾಡಬೇಕು
19) ಪ್ರಣಾಳಿಕೆ ಮತ್ತು ಚಾರ್ಜ್ ಶೀಟ್ ಕಾರ್ಯಾಗಾರ ಮಾಡಬೇಕು
20) ವಾಟ್ಸ್ ಆಪ್ ಗ್ರೂಪ್ ರಚನೆ
21) ಚುನಾವಣೆ ವಿಸ್ತಾರಕರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಬೇಕು
23) ಹೊರ ರಾಜ್ಯದ ಕ್ಷೇತ್ರ ಸಂಯೋಜಕನ ಜೊತೆ ಕಾರ್ಯ ವಿಭಜನೆ ಮಾಡಿಕೊಳ್ಳಬೇಕು
ಸಿದ್ದರಾಮಯ್ಯನವರನ್ನು ಎದುರಿಸುವುದೇ ಸವಾಲು
ಹೀಗೆ ಅಮಿತ್ ಶಾ 23 ಸೂತ್ರಗಳನ್ನು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಮುಂದಿಟ್ಟಿದ್ದಾರೆ. ಸದ್ಯಕ್ಕೆ ಏನೆಲ್ಲಾ ಕುಸ್ತಿ ಹೊಡೆಯತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಂತ್ರದ ಮುಂದೆ ಮಕಾಡೆ ಮಲಗುತ್ತಿರುವ ಬಿಜೆಪಿ ಈ ಸೂತ್ರಗಳ ಮೂಲಕವಾದರೂ ಬಲಗೊಳ್ಳುತ್ತಾ ಎಂಬುದುನ್ನು ಕಾದು ನೋಡಬೇಕಾಗಿದೆ.