ವಿಶ್ವಾಸಮತಕ್ಕೆ 1ದಿನದ ಮುನ್ನ, ನಿರ್ಧಾರ ತಿಳಿಸಿದ ಕೊಳ್ಳೇಗಾಲ ಬಿಎಸ್ಪಿ ಶಾಸಕ
ಬೆಂಗಳೂರು, ಜುಲೈ 17: ಸಮ್ಮಿಶ್ರ ಸರಕಾರ ಮತ್ತು ಬಿಜೆಪಿಗೆ ಒಂದೊಂದು ಶಾಸಕರ ಬೆಂಬಲವೂ ಮುಖ್ಯವಾಗಿರುವ ಈ ಹೊತ್ತಿನಲ್ಲಿ ಕೊಳ್ಲೇಗಾಲ ಕ್ಷೇತ್ರದ ಬಿಎಸ್ಪಿ ಶಾಸಕ ಎನ್ ಮಹೇಶ್ ಕೊನೆಗೂ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗ ಮೈತ್ರಿ ಪಕ್ಷದ ಜೊತೆಗೆ ಗುರುತಿಸಿಕೊಂಡು, ಸಚಿವರೂ ಆಗಿದ್ದ ಎನ್ ಮಹೇಶ್, ಲೋಕಸಭಾ ಚುನಾವಣೆಯ ವೇಳೆ ಸರಕಾರದಿಂದ ಹೊರಬಂದು ರಾಜೀನಾಮೆ ನೀಡಿದ್ದರು.
ಅತೃಪ್ತ ಶಾಸಕರು ಮುಂಬೈಗೆ ತೆರಳಿದ್ದ ವೇಳೆ, ಮಹೇಶ್ ಕೂಡಾ ಬಿಜೆಪಿ ಸೇರಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹರಡಿತ್ತು. ಈಗ, ವಿಶ್ವಾಸಮತಕ್ಕೆ ಒಂದು ದಿನದ ಮುನ್ನ, ಮಹೇಶ್ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು, ಸಮ್ಮಿಶ್ರ ಸರಕಾರಕ್ಕೆ ಬಾಹ್ಯ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ನಮ್ಮದು ಏನಿದ್ದರೂ ವಿಷಯಾಧಾರಿತ ಬೆಂಬಲ, ಪ್ರತ್ಯೇಕ ಆಸನದ ವ್ಯವಸ್ಥೆ ಮಾಡುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ಮಹೇಶ್, ಕನಕಪುರದಲ್ಲಿ ಹೇಳಿದ್ದಾರೆ.
ಮಾಯಾವತಿಯವರ ನಿರ್ದೇಶನದಂತೆ ನಾನು ನಡೆಯುತ್ತೇನೆ, ಬಿಜೆಪಿ ಸೇರುತ್ತಿದ್ದೇನೆ ಎನ್ನುವುದೆಲ್ಲಾ ಸುಳ್ಳು. ನಮ್ಮದು ಏನಿದ್ದರೂ ಬಿಎಸ್ಪಿ ರಕ್ತ ಎಂದು ಎನ್ ಮಹೇಶ್ ಹೇಳುವ ಮೂಲಕ, ಸಮ್ಮಿಶ್ರ ಸರಕಾರದ ಮುಖಂಡರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಅಂತಿಮ ಹಂತದವರೆಗೂ ಎನ್ ಮಹೇಶ್ ತಮ್ಮ ಬೆಂಬಲ ಯಾರಿಗೆನ್ನುವ ನಿರ್ಧಾರವನ್ನು ಗೌಪ್ಯವಾಗಿ ಇಟ್ಟಿದ್ದರು. ಇದು ಸಮ್ಮಿಶ್ರ ಸರಕಾರದ ಮುಖಂಡರನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿತ್ತು. ದೇವೇಗೌಡ್ರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಮಾಯಾವತಿಯವರಲ್ಲಿ ಮಾತನಾಡಿದ್ದಾರೆಂದು ಹೇಳಲಾಗುತ್ತಿದೆ.












Click it and Unblock the Notifications