ವಿಪಕ್ಷಗಳ ವಿರೋಧ: ಸಭೆಯ ಸ್ಥಳ ಬದಲಾಯಿಸಿದ ಸಿಎಂ ಬಿಎಸ್ವೈ
ಬೆಂಗಳೂರು, ಆ 4: ಮುಂಗಾರು ವೈಫಲ್ಯ ಮತ್ತು ಕೇಂದ್ರದಿಂದ ಬರಬೇಕಾಗಿರುವ ಅನುದಾನದ ಬಗ್ಗೆ ರಾಜ್ಯ ಸರ್ವಪಕ್ಷಗಳ ಸಂಸದರ ಸಭೆಯನ್ನು ಕರೆದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷಗಳ ವಿರೋಧದಿಂದಾಗಿ ಸಭೆಯ ಸ್ಥಳವನ್ನು ಬದಲಾಯಿಸಿದ್ದಾರೆ.
ಇದೇ ಮಂಗಳವಾರ, ಆಗಸ್ಟ್ ಆರರಂದು ದೆಹಲಿಯ ಚಾಣಕ್ಯಪುರಿಯಲ್ಲಿರುವ ಐಷಾರಾಮಿ, ಪಂಚತಾರಾ ಹೊಟೇಲ್, ದಿ ಲೀಲಾ ಪ್ಯಾಲೇಸ್ ನಲ್ಲಿ ಯಡಿಯೂರಪ್ಪ ಸಭೆಯನ್ನು ಕರೆದಿದ್ದರು. ಅನಗತ್ಯ ಖರ್ಚಿನ ಬಗ್ಗೆ ವಿರೋಧ ಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು.

ಹಾಗಾಗಿ, ಸಭೆಯ ಸ್ಥಳವನ್ನು ಲೀಲಾ ಪ್ಯಾಲೇಸ್ ನಿಂದ, ಅದೇ ಭಾಗದಲ್ಲಿರುವ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನದಲ್ಲಿ (ಕಾವೇರಿ) ಆಗಸ್ಟ್ ಆರರಂದು ಸಂಜೆ ಏಳು ಗಂಟೆಗೆ ಯಡಿಯೂರಪ್ಪ ಆಯೋಜಿಸಿದ್ದಾರೆ.
ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳು, ಹಲವು ಜಿಲ್ಲೆಗಳಲ್ಲಿನ ಅತಿವೃಷ್ಠಿ, ಅನಾವೃಷ್ಟಿಯ ಬಗ್ಗೆ, ಸರ್ವಪಕ್ಷಗಳ ಮುಖಂಡರೊಂದಿಗೆ, 'ಡಿನ್ನರ್' ಜೊತೆ ಯಡಿಯೂರಪ್ಪ ಸಮಾಲೋಚನೆ ನಡೆಸಲಿದ್ದಾರೆ.

'ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎಂದು ಖುದ್ದು ಮುಖ್ಯಮಂತ್ರಿಗಳೇ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಐಷಾರಾಮಿ ಹೊಟೇಲ್ ನಲ್ಲಿ ಸಭೆ ಆಯೋಜಿಸಿರುವುದು ಸರಿಯಲ್ಲ' ಎಂದು ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಲೋಕಸಭೆಯ 28, ರಾಜ್ಯಸಭೆಯ 12 ಸಂಸದರು ಮತ್ತು ಇವರುಗಳ ಆಪ್ತ ಸಹಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications