ಸರ್ವಪಕ್ಷಗಳ ಸಭೆಯಲ್ಲಿ 4 ಜೆಡಿಎಸ್ ಮುಖಂಡರು: ಒಬ್ಬೊಬ್ಬರದ್ದು ಒಂದೊಂದು ನಿಲುವು
ಬೆಂಗಳೂರು, ಏಪ್ರಿಲ್ 21: ಕೋವಿಡ್ ನಿಯಂತ್ರಣ ಸಂಬಂಧ, ಏಪ್ರಿಲ್ 20ರಂದು ರಾಜ್ಯಪಾಲರು ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಜಾತ್ಯತೀತ ಜನತಾದಳದ ನಾಲ್ವರು ಮುಖಂಡರು ಭಾಗವಹಿಸಿದ್ದರು.
ಈ ನಾಲ್ವರು ಮುಖಂಡರು ಪಕ್ಷದ ಒಟ್ಟಾರೆ ಅಭಿಪ್ರಾಯವನ್ನು ಸಭೆಯಲ್ಲಿ ಮಂಡಿಸಲು ವಿಫಲರಾದರು. ಒಬ್ಬೊಬ್ಬರು ಒಂದೊಂದು ನಿಲುವನ್ನು ರಾಜ್ಯಪಾಲರ ಮುಂದೆ ತಾಳಿದ್ದರು.
ಪೂರ್ವ ತಯಾರಿ ಇಲ್ಲದೇ ಸಭೆಯಲ್ಲಿ ಭಾಗವಹಿಸಿದಂತೆ, ಲಾಕ್ ಡೌನ್ ವಿಚಾರದಲ್ಲಿ ವಿಭಿನ್ನ ನಿಲುವನ್ನು ಜೆಡಿಎಸ್ ಮುಖಂಡರು ತಾಳಿದ್ದರಿಂದ, ಒಟ್ಟಾರೆಯಾಗಿ ಪಕ್ಷದ ನಿಲುವೇನು ಎನ್ನುವುದು ಅಸ್ಪಷ್ಟವಾಗಿತ್ತು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಹಿರಿಯ ಮುಖಂಡ ಎಚ್.ಡಿ.ರೇವಣ್ಣ ಸಭೆಯಲ್ಲಿ ಭಾಗವಹಿಸಿದ್ದರು.

ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಸಭೆಯಲ್ಲಿ ಭಾಗವಹಿಸಿ, ತಜ್ಞರ ವರದಿಯನ್ನು ಆಧರಿಸಿ ಸರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿ. ಇದಕ್ಕೆ ನಮ್ಮದೇನು ತಕರಾರು ಇಲ್ಲ. ವೀಕೆಂಡ್ ಕರ್ಫ್ಯೂ ಹಾಕಿದರೆ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎನ್ನುವುದಾದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಹೊರಟ್ಟಿ ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡುತ್ತಾ, ಸರಕಾರ ಏನೇ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಿ. ಆದರೆ, ಲಾಕ್ ಡೌನ್ ಮಾತ್ರ ಬೇಡ, ಇದರಿಂದ ಹೊರತಾದ ಯಾವುದೇ ಕಠಿಣ ಕ್ರಮ ಸರಕಾರ ತೆಗೆದುಕೊಳ್ಳಲಿ. ಲಾಕ್ ಡೌನ್ ಮಾಡಿದರೆ ಸಾರ್ವಜನಿಕರು ತುಂಬಾ ತೊಂದರೆ ಎದುರಿಸಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಾ, ಯಾವುದೇ ಮುಲಾಜಿಲ್ಲದೇ ಲಾಕ್ ಡೌನ್ ಜಾರಿಗೆ ತನ್ನಿ. ಆರ್ಥಿಕ ವ್ಯವಸ್ಥೆ ಹದೆಗೆಡುತ್ತದೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ, ಜನರ ಆರೋಗ್ಯ ಇಲ್ಲಿ ಮುಖ್ಯವಾಗುತ್ತದೆ. ಒಂದೆರಡೂ ವಾರ ಲಾಕ್ ಡೌನ್ ಮಾಡಿ ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.
Recommended Video

ಮಾಜಿ ಸಚಿವ ಎಚ್.ಡಿ.ರೇವಣ್ಣ
ಇನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡುತ್ತಾ, ಕೊರೊನಾ ನಿಯಂತ್ರಣಕ್ಕೆ ಸರಕಾರ ಏನೇ ಕ್ರಮ ತೆಗೆದುಕೊಳ್ಳಲಿ. ತಜ್ಞರು ಏನು ಶಿಫಾರಸು ಮಾಡಿದ್ದಾರೋ ಅದನ್ನು ಜಾರಿಗೆ ತರಲಿ, ಆದರೆ, ಸರಕಾರದ ಕ್ರಮದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ರೇವಣ್ಣ ಸಭೆಯಲ್ಲಿ ಹೇಳಿದರು.












Click it and Unblock the Notifications