ಆ ವಿಚಾರಕ್ಕೆ ಸಿದ್ದರಾಮಯ್ಯ, ಡಿಕೆಶಿಗೆ ಖರ್ಗೆ ಖಡಕ್ ವಾರ್ನಿಂಗ್!
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಒಳಜಗಳಗಳ ಬಗ್ಗೆಯೂ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಡೆದ ಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ರಾಜ್ಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಕೆಲ ಕಿವಿಮಾತುಗಳನ್ನೂ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಆಂತರಿಕ ಕಿತ್ತಾಟಕ್ಕೆ ಖರ್ಗೆ ಬಹಿರಂಗವಾಗಿಯೇ ಅಸಮಾಧಾನ ತೋರಿದ್ದಾರೆ.

ರಾಜ್ಯ ನಾಯಕರ ಮುಂದೆ ಒಗ್ಗಟ್ಟಿನ ಮಂತ್ರ ಪಠಿಸಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ಎಲ್ಲರೂ ಒಗ್ಗಟ್ಟಿನಿಂದ ಇರಿ. ಕಿತ್ತಾಡಬೇಡಿ, ಸಮಸ್ಯೆಗಳ ತಗೊಂಡು ಬರಬೇಡಿ ಎಂದು ಕಾರ್ಯಕರ್ತರ ಎದುರಲ್ಲೇ ಕ್ಲಾಸ್ ಕೂಡ ಮಾಡಿದ್ದಾರೆ.
ನಾನು ರಾಜ್ಯ ರಾಜಕಾರಣದ ಬಗ್ಗೆ ತಲೆ ಹಾಕುವುದಿಲ್ಲ. ನೀವೆಲ್ಲ ಬುದ್ಧಿವಂತರಿದ್ದೀರಿ ಎನ್ನುವ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಸೂಕ್ಷ್ಮವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಲ್ಲದೆ ಬೆಲ್ಲ ಇರುವವರೆಗೆ ಇರುವೆ ಕೂಡ ಇರುತ್ತೆ ಎಂದು ಮಾರ್ಮಿಕವಾಗಿ ಮಾತನಾಡಿರುವ ಖರ್ಗೆ ಅವರು ಕಿವಿ ಕಚ್ಚುವರರ ಬಗ್ಗೆ ಎಚ್ಚರದಿಂದಿರಿ ಎಂದೂ ಸಲಹೆ ನೀಡಿದ್ದಾರೆ. ಈ ಮಾತುಗಳಿಂದ ಹೊಸ ಚರ್ಚೆಗಳು ಹುಟ್ಟಿಕೊಂಡಿವೆ.
ವಿಘ್ನ ಹಾಗೂ ಸಂತೋಷ ಯಾವುದೂ ಶಾಶ್ವತ ಅಲ್ಲ, ನಿಮ್ಮ ಒಗ್ಗಟ್ಟಿನಲ್ಲೇ ನಿಜವಾದ ಬಲವಿದೆ. ಸಂತೋಷವೂ ಇದೆ. ಒಬ್ಬ ನಾಯಕನಿಗೆ ಪಕ್ಷದಲ್ಲಿ ಯಾವುದೇ ಸಮಸ್ಯೆಯಾದರೆ ಬೇರೆ ನಾಯಕರು ಸಂತೋಷ ಪಟ್ಟರೆ, ಒಗ್ಗಟ್ಟನ್ನು ಮುರಿಯಲು ಹೊರಗಿನವರ ಅಗತ್ಯವೇ ಇಲ್ಲ ಎಂದೂ ಖರ್ಗೆ ಕಿವಿಹಿಂಡಿದ್ದಾರೆ ಎನ್ನಲಾಗಿದೆ.

ಇನ್ನು ಗ್ಯಾರಂಟಿ ಯೋಜನೆ ಬಗ್ಗೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆಯೂ ಖರ್ಗೆ ಅಸಮಾಧಾನ ಹೊರಹಾಕಿದರು. ನಿನ್ನೆ ಎಲ್ಲರ ಸಮ್ಮುಖದಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಬೇಸರ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ರಾಜ್ಯದಲ್ಲಿ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳನ್ನು ಬೇರೆ ಕಡೆಯೂ ಜಾರಿ ಮಾಡಬೇಕು ಎಂಬ ಯೋಜನೆಯಲ್ಲಿದ್ದೇವೆ. ಹೀಗಿರುವಾಗ ಇಂತಹ ಹೇಳಿಕೆಗಳು ಸೂಕ್ತವಲ್ಲ ಎಂದಿದ್ದಾರೆ.
ಶಕ್ತಿ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಗ್ಯಾರಂಟಿ ಯೋಜನೆಯನ್ನು ಪರಿಷ್ಕರಣೆ ಮಾಡುವ ಬಗ್ಗೆ ನೀವು (ಡಿಕೆಶಿ) ಹೇಳಿಕೆ ನೀಡಿರಬಹುದು. ಆದರೆ, ನಿಮ್ಮ ಮಾತುಗಳಿಂದ ಜನರಿಗೆ ಗೊಂದಲ ಮೂಡಿದೆ. ಅಲ್ಲದೆ ವಿರೋಧಿಗಳಿಗೂ ಅಸ್ತ್ರವನ್ನು ನೀಡಿ, ನಮ್ಮನ್ನು ಮುಜುಗರಕ್ಕೆ ಸಿಲುಕಿಸಬೇಡಿ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಜೆಟ್ ಮಂಡನೆ ಬಗ್ಗೆ ಬೇಸರ: ಇನ್ನು ಸಿದ್ದರಾಮಯ್ಯ ಅವರು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಆದರೆ, ಬಜೆಟ್ ಬಗ್ಗೆಯೂ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ. ನಾವು ಯಾವುದೇ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡುವ ಮುನ್ನ ರಾಜ್ಯದ ಬಜೆಟ್ ಗಾತ್ರವೇನು ಎಂಬುದರ ಮಾಹಿತಿ ಇರಬೇಕು ಎಂದು ಹೇಳಿದ್ದಾರೆ.
ಸುಖಾಸುಮ್ಮನೆ ಗ್ಯಾರಂಟಿಗಳನ್ನು ಜಾರಿ ಮಾಡಿದರೆ, ರೋಡಿಗೆ ಡಾಂಬರು ಹಾಕಲೂ ಹಣ ಇರುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಗೂ ರಾಜ್ಯ ನಾಯಕರ ಬಗ್ಗೆ ಪರೋಕ್ಷವಾಗಿಯೂ ತಿವಿದಿದ್ದಾರೆ.












Click it and Unblock the Notifications