ಆದ್ರೂ.. ರಾಜ್ಯ ಕಾಂಗ್ರೆಸ್ ಭಿನ್ನಮತ ಬಿಜೆಪಿಯಷ್ಟು ಬೀದಿಗೆ ಬಂದಿಲ್ಲಾ ಬಿಡಿ!
ಬಿಜೆಪಿ, ಕಾಂಗ್ರೆಸ್ ನಡುವಿರುವ ಭಿನ್ನಮತಕ್ಕಿರುವ ಅಂತರ, ಕಾಂಗ್ರೆಸ್ಸಿನದ್ದು 4ಗೋಡೆಯೊಳಗೆ, ಬಿಜೆಪಿಯದ್ದು 4ಗೋಡೆಯ ಹೊರಗಿನ ಭಿನ್ನಮತ. ಅಷ್ಟರಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಭಿನ್ನಮತ ಹದ್ದುಬಸ್ತಿನಲ್ಲಿಡಲು ಯಶಸ್ವಿಯಾಗಿದೆ.
ಒಂದು ರಾಷ್ಟ್ರೀಯ ಪಕ್ಷ, ಅದಕ್ಕೆ ಕೋಟ್ಯಾಂತರ ಜನ ಸದಸ್ಯರು ಎಂದ ಮೇಲೆ ಜಗಳ, ಮನಸ್ತಾಪ ಇದ್ದಿದ್ದೇ.. ಅಲ್ಲಿ ಕಾಲು ಎಳೆಯುವವರೂ ಇರ್ತಾರೆ, ಬಿಟ್ರೆ ಕಾಲು ತೊಳೆಯುವವರೂ ಬರ್ತಾರೆ. ರಾಜ್ಯ ಬಿಜೆಪಿ ಘಟಕದ ಭಿನ್ನಮತದ ನಂತರ ಈಗ ಕಾಂಗ್ರೆಸ್ಸಿನ ಸರದಿ.
ಮೇಲ್ನೋಟಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿರುವ ಭಿನ್ನಮತಕ್ಕೆ ಅಂತರ ಏನಂದರೆ, ಕಾಂಗ್ರೆಸ್ಸಿನದ್ದು ನಾಲ್ಕು ಗೋಡೆಯೊಳಗೆ, ಬಿಜೆಪಿಯದ್ದು ನಾಲ್ಕು ಗೋಡೆಯ ಹೊರಗಿನ ಭಿನ್ನಮತ. ಅಷ್ಟರಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಪಕ್ಷದಲ್ಲಿರುವ ಭಿನ್ನಮತ ಹೊರಬೀಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆ, ಸಚಿವ ಸ್ಥಾನ, ಸಿದ್ದರಾಮಯ್ಯ, ನಿಗಮ ಮಂಡಳಿ ಮುಂತಾದ ಪಕ್ಷದ ಜ್ವಲಂತ ಸಮಸ್ಯೆಗಳು ನಾಲ್ಕು ವರ್ಷದ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ನಕ್ಷತ್ರಿಕನ ರೀತಿಯಲ್ಲಿ ಪಕ್ಷವನ್ನು ಹಿಂಬಾಲಿಸಿಕೊಂಡೂ ಬರುತ್ತಲೇ ಇದೆ. ದಿಗ್ವಿಜಯ್ ಸಿಂಗ್ ಉಸ್ತುವಾರಿಯಾಗಿದ್ದಗಲೂ ಇದೇ ಕಥೆ, ವೇಣುಗೋಪಾಲ್ ಬಂದರೂ ಅದೇ ವ್ಯಥೆ.
ಆದರೆ ಚುನಾವಣೆ ಸಮೀಪಿಸುತ್ತಿರುವುದರಿಂದ ಪಕ್ಷದೊಳಗಿನ ಭಿನ್ನಮತಕ್ಕೆ ತೇಪೆ ಹಾಕದಿದ್ದರೆ ಕಷ್ಟ ಎಂದರಿತ ಹೈಕಮಾಂಡ್, ಸಿದ್ದು ಪಕ್ಷಪಾತಿ ಎಂದು ಹೆಸರಾಗಿರುವ ದಿಗ್ವಿಜಯ್ ಸಿಂಗ್ ಅವರನ್ನು ಎತ್ತಂಗಡಿ ಮಾಡಿ ರಾಹುಲ್ ಆಪ್ತ ವೇಣುಗೋಪಾಲ್ ಅವರನ್ನು ಉಸ್ತುವಾರಿ ಸ್ಥಾನಕ್ಕೆ ತಂದು ಕೂರಿಸಿದೆ.
ಹಾಗಾಗಿ, ಸಿದ್ದರಾಮಯ್ಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿರುವವರು, ಪರಮೇಶ್ವರ್ ಅವರಿಗೆ ಯಾಕೆ ಎರಡೆರಡು ಹುದ್ದೆ ಎಂದು ಜರಿಯುವವರು ವೇಣುಗೋಪಾಲ್ ವಾಸ್ತವ್ಯ ಹೂಡಿರುವ ಕುಮಾರಕೃಪಾ ಅತಿಥಿಗೃಹ ಬಾಗಿಲನ್ನು ಒಸಿ ಜಾಸ್ತಿಯೇ ತಟ್ಟುತ್ತಿದ್ದಾರೆ. ಮುಂದೆ ಓದಿ..
ಉಸ್ತುವಾರಿ ಮುಂದೆ ದುಗುಡು, ದುಮ್ಮಾನ
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪರಮೇಶ್ವರ್ ಅವರೇ ಮುಂದುವರಿಯಲಿ ಎನ್ನುವವರು, ಡಿ ಕೆ ಶಿವಕುಮಾರ್ ಪರವಿರೋಧ ಇರುವವರು, ಲಿಂಗಾಯಿತರಿಗೆ ಆ ಹುದ್ದೆ ನೀಡಬೇಕು ಎಂದು ಲಾಬಿ ಮಾಡುವವರು. ಹೀಗೆ ಹತ್ತು ಹಲವು ಸಮಸ್ಯೆಗಳನ್ನಿಟ್ಟುಕೊಂಡು ಕಾಂಗ್ರೆಸ್ ಮುಖಂಡರು ಉಸ್ತುವಾರಿಯನ್ನು ಭೇಟಿಯಾದರೂ ಎಲ್ಲೂ ಬೀದಿರಂಪವಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಉಸ್ತುವಾರಿಗೆ ಸುದೀರ್ಘ ವಿವರಣೆ ನೀಡಿದ ವಿಶ್ವನಾಥ್
ವೇಣುಗೋಪಾಲ್ ಅವರನ್ನು ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಹೊರತು ಪಡಿಸಿ ರಾಜ್ಯದ ಎಲ್ಲಾ ಸಂಸದರು ಭೇಟಿಯಾಗಿದ್ದಾರೆ. ಜೊತೆಗೆ, ಸಿದ್ದರಾಮಯ್ಯ ಜೊತೆ ಮುನಿಸಿಕೊಂಡಿರುವ ಎಚ್ ವಿಶ್ವನಾಥ್ ಕೂಡಾ ಭೇಟಿಯಾದರು. ಮೂರು ಪುಟಗಳ ಸುದೀರ್ಘ ನೋವಿನ ವಿವರಣೆಯನ್ನು ವಿಶ್ವನಾಥ್ ಉಸ್ತುವಾರಿಗೆ ನೀಡಿದ್ದಾಗಿದೆ.
ವೀರಶೈವ ಮುಖಂಡರು ಕೆಪಿಸಿಸಿ ಅಧ್ಯಕ್ಷರಾಗಲಿ
ಪಕ್ಷದಲ್ಲಿನ ಸಾಮರಸ್ಯತೆಯ ಬಗ್ಗೆ ಮಾಲೀಕಯ್ಯ ಗುತ್ತೇದಾರ್ ಮಾತ್ರ ಮಾಧ್ಯಮದವರ ಮುಂದೆ ಮಾತನಾಡಿದ್ದನ್ನು ಬಿಟ್ಟರೆ ಬೇರಾರೂ ತಮ್ಮ ಸಮಸ್ಯೆಗಳನ್ನು ಹೊರಗಡೆ ತೋಡಿಕೊಂಡಿಲ್ಲ. ಹಿರಿಯ ಮುಖಂಡರಾದ ಶಾಮನೂರು ಶಿವಶಂಕರಪ್ಪ, ವೇಣುಗೋಪಾಲ್ ಅವರನ್ನು ಭೇಟಿಯಾಗಿ ವೀರಶೈವ ಮುಖಂಡರೊಬ್ಬರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪರಿಗಣಿಸಬೇಕೆಂದು ಮನವಿ ಮಾಡಿದರೂ ದೊಡ್ದ ಸುದ್ದಿಯಾಗಲಿಲ್ಲ, ಕಾರ್ಯಕರ್ತರಲ್ಲಿ ತಪ್ಪು ಸಂದೇಶ ರವಾನೆಯಾಗಲಿಲ್ಲ.
ಇತ್ತ ಬಿಜೆಪಿಯದ್ದು ವಿಭಿನ್ನ ಕಥೆ
ಆದರೆ ಇತ್ತ ಬಿಜೆಪಿಯದ್ದು ಬೇರೆಯೇ ಕಥೆ, ನಾಲ್ಕುಗೋಡೆಯೊಳಗೆ ಇತ್ಯರ್ಥ, ಚರ್ಚೆಯಾಗಬೇಕಾದ ವಿಷಯಗಳು ಬೀದಿರಂಪವಾದವು. ಪಕ್ಷದ ಕಾರ್ಯಕಾರಿಣಿಯಲ್ಲೇ ಭಿನ್ನಮತ ಬಹಿರಂಗಗೊಂಡಿತು. ಕಾರ್ಯಕರ್ತರ ಅಸಮಾಧಾನ ಸಭೆಯಲ್ಲೇ ಸ್ಪೋಟಗೊಂಡಿತು. ಪಕ್ಷ ಮುನ್ನಡೆಸಬೇಕಾದ ಹಿರಿಯ ಮುಖಂಡರಿಬ್ಬರು ವೇದಿಕೆಯಲ್ಲಿ ಮುಖಮುಖ ನೋಡದೇ ಕಾರ್ಯಕರ್ತರನ್ನು ಮತ್ತಷ್ಟು ಗೊಂದಲಕ್ಕೆ ದೂಡಿದರು.
ಉಸ್ತುವಾರಿಯ ಪತ್ರಿಕಾಗೋಷ್ಠಿ
ಒಂದೆಡೆ ಬಿಜೆಪಿ ಅತೃಪ್ತ ಬಣದವರು ಬಹಿರಂಗವಾಗಿ ಯಡಿಯೂರಪ್ಪನವರನ್ನು ದೂರುತ್ತಿದ್ದರೆ, ಬಿಎಸ್ವೈ ಸಂಘಟನೆಯ ಸಂತೋಷ್ ಅವರತ್ತ ಬೊಟ್ಟುಮಾಡಿದರು. ಬಿಜೆಪಿ ಉಸ್ತುವಾರಿ ಮುಖಂಡರ ಎಚ್ಚರಿಕೆಯ ನಡುವೆಯೂ ಭಿನ್ನಮತ ಮುಂದುವರಿಯುತ್ತಲೇ ಇದೆ. ಆದರೆ, ಕಳೆದೆರಡು ದಿನದಿಂದ ಪಕ್ಷದ ಮುಖಂಡರನ್ನು ಭೇಟಿಯಾಗುತ್ತಿರುವ ವೇಣುಗೋಪಾಲ್, ತಾವೇ ಖುದ್ದಾಗಿ ಪತ್ರಿಕಾಗೋಷ್ಠಿ ನಡೆಸಿ ವಿವರಿಸಲಿದ್ದಾರೆ.