ಅನ್ನದಾತರ ಬಗ್ಗೆ ಕೃಷಿ ಸಚಿವರ 'ದುರ್ಬಲ' ಹೇಳಿಕೆ: ತಿರುಗಿಬಿದ್ದ ಜೆಡಿಎಸ್
ಮೈಸೂರು/ಮಂಡ್ಯ, ಜ 20: ರೈತರ ಬಗ್ಗೆ ಮತ್ತೆ ವಿವಾದಕಾರಿ ಹೇಳಿಕೆಯನ್ನು ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ದ ಜೆಡಿಎಸ್ ಮುಖಂಡರು ತಿರುಗಿ ಬಿದ್ದಿದ್ದಾರೆ. ಕೃಷಿ ಸಚಿವರು ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇನು ಮೊದಲಲ್ಲ.
ಜೆಡಿಎಸ್ ಶಾಸಕರಾದ ಸಿ.ಎಸ್.ಪುಟ್ಟರಾಜು ಮತ್ತು ಸಾ.ರಾ.ಮಹೇಶ್ ಅವರು ಬಿ.ಸಿ.ಪಾಟೀಲರ ಹೇಳಿಕೆಗೆ ಅಸಮಾಧಾನ ವ್ಯಕ್ತ ಪಡಿಸಿದ್ದು, ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಮೊದಲು ಮಾಡಲು ಕಲಿಯಿರಿ ಎನ್ನುವ ಬುದ್ದಿಮಾತನ್ನು ಹೇಳಿದ್ದಾರೆ.
""ರೈತರ ಆತ್ಮಹತ್ಯೆ ತಡೆಗಟ್ಟಲೆಂದು ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರೈತರು ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರ ಮನೆಗೆ ಹೋಗಿ ಹಾರ ಹಾಕಿ ಸಾಂತ್ವನ ಹೇಳಿದರೆ ಆತ್ಮಹತ್ಯೆ ನಿಲ್ಲುವುದಿಲ್ಲ. ಕೆಲವು ಸಂದರ್ಭದಲ್ಲಿ ರೈತರು ದುರ್ಬಲ ಮನಸ್ಥಿತಿಯವರಾದಾಗ ಆತ್ಮಹತ್ಯೆ ನಿರ್ಧಾರ ಮಾಡುತ್ತಾರೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವಲ್ಲ"ಎನ್ನುವ ಹೇಳಿಕೆಯನ್ನು ಸಚಿವರು ನೀಡಿದ್ದರು.
"ಸಮಸ್ಯೆಗಳಿಗೆ ಸಿಕ್ಕು ಮಾನಸಿಕವಾಗಿ ಕುಗ್ಗಿಹೋದ ರೈತನೇ ಆತ್ಮಹತ್ಯೆ ಮಾಡಿಕೊಳ್ಳುವುದು. ರೈತನ ಈ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದು, ಸಂಕಷ್ಟಗಳಿಂದ ಪಾರು ಮಾಡಬೇಕಾದ್ದು ಜನಪ್ರತಿನಿಧಿಗಳು ಎನಿಸಿಕೊಂಡ, ಅದರಲ್ಲೂ ಕೃಷಿ ಇಲಾಖೆ ನೇತೃತ್ವ ವಹಿಸಿಕೊಂಡವರ ಹೊಣೆ. ಅದು ಬಿಟ್ಟು ಜೀವ ತೊರೆದ ರೈತನನ್ನು ಸಾವಿನ ನಂತರವೂ ಗೇಲಿ ಮಾಡುವುದು ವಿಕೃತಿ"ಎಂದು ಶಾಸಕ ಪುಟ್ಟರಾಜು ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ..

ಕುಸಿದ ರೈತನಿಗೆ ಶಕ್ತಿ ತುಂಬುವುದು ಸಚಿವರ ಕೆಲಸ
"ಕುಸಿದ ರೈತನಿಗೆ ಶಕ್ತಿ ತುಂಬುವುದು ಬಿಟ್ಟು ಅವನನ್ನು 'ಮಾನಸಿಕ ದುರ್ಬಲ' ಎಂದು ಅಣಕಿಸುವುದು ಕೂಡ ದುರ್ಬಲ ಮನಸ್ಸುಗಳ ವರ್ತನೆಯೇ. ಬಿ.ಸಿ. ಪಾಟೀಲರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಕೃಷಿ ರಂಗದ ಅಭಿವೃದ್ಧಿಯತ್ತ ಗಮನಹರಿಸಬೇಕೇ ಹೊರತು, ಸುಪ್ತವಾಗಿರುವ ತಮ್ಮ ಮಾನಸಿಕ ದೌರ್ಬಲ್ಯವನ್ನು ಇನ್ನೊಬ್ಬರ ಮೇಲೆ ಹೊರಿಸುತ್ತಾ ಹೋಗಬಾರದು"ಎಂದು ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

ಪಾಟೀಲ್ ಅವರಿಂದ ಹಿಂದೆಯೂ ರೈತರ ಬಗ್ಗೆ ಇದೇ ರೀತಿಯ ಕ್ಷುಲ್ಲಕ ಹೇಳಿಕೆ
"ಬಿ.ಸಿ. ಪಾಟೀಲ್ ಈ ಹಿಂದೆಯೂ ರೈತರ ಬಗ್ಗೆ ಇದೇ ರೀತಿಯ ಕ್ಷುಲ್ಲಕ ಹೇಳಿಕೆಗಳನ್ನು ನೀಡಿದ್ದರು. ಈಗಲೂ ಹಾಗೇ ಮಾತಾಡಿದ್ದಾರೆ. ರೈತರ ಕುರಿತು ಲಘುವಾಗಿ ಮಾತಾಡುವ, ಅವರ ಕಷ್ಟಗಳನ್ನು ಗೇಲಿ ಮಾಡಿರುವ ಬಿ.ಸಿ. ಪಾಟೀಲ್ ಅವರು ಕೂಡಲೇ ರೈತನ ಕ್ಷಮೆ ಕೇಳಬೇಕು. ಇನ್ನು ಮುಂದೆ ತಮ್ಮ ವರ್ತನೆಗೆ ಕಡಿವಾಣ ಹಾಕಿಕೊಳ್ಳಬೇಕು" - ಸಿ.ಎಸ್.ಪುಟ್ಟರಾಜು.

ಸಾ.ರಾ.ಮಹೇಶ್ ಪ್ರಶ್ನೆ
"ಕೃಷಿ ಇಲಾಖೆಯಲ್ಲಿ ವರ್ಗಾವಣೆ ಹೆಸರಿನಲ್ಲಿ ಸಚಿವರು, ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಇಲಾಖೆ ಸಿಬ್ಬಂದಿಯೇ @CMofKarnataka ಅವರಿಗೆ ಪತ್ರ ಬರೆದಿದ್ದಾರೆ. ಸಮಸ್ಯೆ ಸರಿಪಡಿಸದಿದ್ದರೆ ಸಾಮೂಹಿಕವಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ. ಈ ಭ್ರಷ್ಟಾಚಾರ ಆರೋಪ ಬಂದಿದ್ದು ಹೇಗೆ? ಇದು ಎಂಥ ದೌರ್ಬಲ್ಯ?" ಎಂದು ಶಾಸಕ ಸಾ.ರಾ.ಮಹೇಶ್ ಪ್ರಶ್ನಿಸಿದ್ದಾರೆ.
Recommended Video

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ದುರ್ಬಲ ಮನಸ್ಸಿನವರು
"ಆತ್ಮಹತ್ಯೆ ಮಾಡಿಕೊಳ್ಳುವ ರೈತರು ದುರ್ಬಲ ಮನಸ್ಸಿನವರು ಎನ್ನುವ ಕೃಷಿ ಸಚಿವ ಬಿ.ಸಿ. ಪಾಟೀಲರು ತಮ್ಮ ಹಣದ ದೌರ್ಬಲ್ಯದ ಬಗ್ಗೆ ಏಕೆ ಮಾತಾಡುವುದಿಲ್ಲ? ರೈತನ ಸಂಕಷ್ಟದ ಪರಿಸ್ಥಿತಿಯನ್ನು ಗೇಲಿ ಮಾಡುವ ಬಿ.ಸಿ. ಪಾಟೀಲ್ ವರ್ತನೆಯೇ ದುರ್ಬಲ ಮನಸ್ಸಿನ ಪ್ರತೀಕ. ಅವರ ವರ್ತನೆ ಅಕ್ಷಮ್ಯ. ಕೈಲಾದರೆ ರೈತರಿಗೆ ಒಳ್ಳೆದು ಮಾಡಿ, ಹೀಗೆಲ್ಲ ಮಾತನಾಡಬೇಡಿ".
"ಬಿ.ಸಿ. ಪಾಟೀಲ್ ಮೊದಲು ರೈತರ ಕ್ಷಮೆ ಕೇಳಬೇಕು. ಕೃಷಿ ಇಲಾಖೆಯ ಸಿಬ್ಬಂದಿಯೇ ಮಾಡಿರುವ ಲಂಚದ ಆರೋಪದ ಕುರಿತು ಸ್ಪಷ್ಟನೆ ನೀಡಬೇಕು. ಸರ್ಕಾರ ಈ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು. ಭ್ರಷ್ಟಾಚಾರ ಸಾಬೀತಾದರೆ ಬಿ.ಸಿ. ಪಾಟೀಲ್ ಅವರನ್ನು ಮುಲಾಜಿಲ್ಲದೇ ಮಂತ್ರಿಮಂಡಲದಿಂದ ಹೊರದಬ್ಬಬೇಕು ಎಂದು ಆಗ್ರಹಿಸುತ್ತೇನೆ" ಎಂದು ಸಾ.ರಾ.ಮಹೇಶ್ ಟ್ವೀಟ್.












Click it and Unblock the Notifications