ಉನ್ನತ ಶಿಕ್ಷಣ ಸುಧಾರಣೆಗೆ ಅಮೆರಿಕೆ ಪೆನ್ಸಿಲ್ವೇನಿಯಾ ವಿವಿ ಜೊತೆ ರಾಜ್ಯದ ವಿವಿಗಳ ಒಪ್ಪಂದ: ಅಶ್ವಥ್ ನಾರಾಯಣ
ಬೆಂಗಳೂರು, ಜನವರಿ 09: ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ಇನ್ನಷ್ಟು ಸುಧಾರಣೆ ತರುತ್ತಿದೆ. ಇದಕ್ಕೆ ಪೂರಕವಾಗಿ ಅಮೆರಿಕಾದ ಪೆನ್ಸಿಲ್ವೇನಿಯಾದ ವಿಶ್ವವಿದ್ಯಾಲಯಗಳ ಜೊತೆ ಒಪ್ಪಂದ ಏರ್ಪಡಲಿದೆ.
ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಪೆನ್ಸಿಲ್ವೇನಿಯ ಸ್ಟೇಟ್ ಸಿಸ್ಟಮ್ ಆಫ್ ಹೈಯರ್ ಎಜುಕೇಶನ್ (ಪಿಎಸ್ಎಸ್ಎಚ್ಇ) ನಡುವೆ ಜಾಗತಿಕ ಪಾಲುದಾರಿಕೆ ಒಪ್ಪಂದದ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಆಗುತ್ತಿರುವ ಸುಧಾರಣೆಗಳನ್ನು ಸರ್ಕಾರ ಮತ್ತಷ್ಟು ವಿಸ್ತರಿಸಲಿದೆ. ಅಮೆರಿಕದ ಪೆನ್ಸಿಲ್ವೇನಿಯಾದ ವಿಶ್ವವಿದ್ಯಾಲಯಗಳು ಇದರಲ್ಲಿ ಭಾಗಿಯಾಗಬೇಕಿದೆ. ಮಂಗಳವಾರ ಅಮೆರಿಕ ವಿಶ್ವವಿದ್ಯಾಲಯಗಳ ಜೊತೆಗೆ ಒಪ್ಪಂದ ನಡೆಯಲಿದ್ದು, ರಾಜ್ಯದ ಕೆಲವು ವಿಶ್ವವಿದ್ಯಾಲಯಗಳು ಸಹಿ ಹಾಕಲಿವೆ ಎಂದರು.

ಉನ್ನತ ಶಿಕ್ಷಣ ವ್ಯವಸ್ಥೆಯ ಪ್ರತಿಯೊಂದು ಹಂತಕ್ಕೂ ವಿಕೇಂದ್ರೀಕರಣವನ್ನು ವಿಸ್ತರಿಸಲು ಸರ್ಕಾರ ಒತ್ತು ನೀಡಲಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಆಶಯದಂತೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ದೊರಕುವಂತೆ ಮಾಡಲು ವಿದೇಶಗಳ ಹೆಸರಾಂತ ವಿಶ್ವವಿದ್ಯಾಲಯ ಜೊತೆ ಸಹಭಾಗಿತ್ವ ಮಾಡಿಕೊಳ್ಳಲಿದ್ದೇವೆ.
ವಿದ್ಯಾರ್ಥಿಗಳ ಪ್ರವೇಶಾತಿ ಶೇ.100ರಷ್ಟು ಏರಿಕೆ
ಉನ್ನತ ಶಿಕ್ಷಣ ಇಲಾಖೆ ಡಿಜಿಟಲೀಕರಣಕ್ಕೆ ಪ್ರಾಮುಖ್ಯ ಕೊಡುತ್ತಿದೆ. ಪಾಲಿಟೆಕ್ನಿಕ್ ನಲ್ಲಿ ಜಾರಿಗೊಳಿಸಿದ ಟ್ವಿನ್ನಿಂಗ್ ಕೋರ್ಸ್ ಹಾಗೂ ಮತ್ತಿತರ ಉಪಕ್ರಮಗಳಿಂದಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಮಾಣ ಶೇ. 50ರಿಂದ 100ರಷ್ಟಕ್ಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಪ್ರತಿವರ್ಷ 80 ಸಾವಿರ ವಿದ್ಯಾರ್ಥಿಗಳು ಪಾಲಿಟೆಕ್ನಿಕ್ ಸೇರುತ್ತಿದ್ದಾರೆ ಎಂದು ಅವರು ವಿವರಿಸಿದರು.
ಟ್ವಿನ್ನಿಗ್ ಕೋರ್ಸ್, ಡ್ಯೂಯೆಲ್ ಪದವಿ, ಕೌಶಲ ತರಬೇತಿ, ಇಂಟರ್ನ್ಶಿಪ್ ಇತ್ಯಾದಿಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು. ಬೆಳವಣಿಗೆಯ ದೃಷ್ಟಿಯಿಂದ ಕರ್ನಾಟಕವು ಭರವಸೆಯ ರಾಜ್ಯವಾಗಿದೆ. ಹಾಗೆಯೇ ಬೆಂಗಳೂರು ದೇಶದಲ್ಲೆಡೆಯಿಂದ ಪ್ರತಿಭಾವಂತರನ್ನು ಸೆಳೆಯುತ್ತಿದೆ. ಜಾಗತಿಕ ಮಟ್ಟದ 500 ಅಗ್ರಮಾನ್ಯ ಕಂಪನಿಗಳ ಪೈಕಿ 400 ಕಂಪನಿಗಳು ಬೆಂಗಳೂರಿನಲ್ಲಿ ನೆಲೆಯಾಗಿವೆ ಎಂದು ಹೇಳಿದರು.

ಕುಲಪತಿ ಡಾ.ಪೀಟರ್ ಗಾರ್ಲೆಂಡ್ ಮತ್ತು ಡಾ.ಅನಿತಾ ಮೀಹನ್ ನೇತೃತ್ವದ ಪೆನ್ಸಿಲ್ವೇನಿಯ ವಿ.ವಿ.ಗಳ ನಿಯೋಗವು ರಾಜ್ಯಕ್ಕೆ ಒಂದು ವಾರ ಅವಧಿಯ ಭೇಟಿ ನೀಡಿದೆ. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಹಂತದಲ್ಲಿ ಪರಸ್ಪರ ಸಹಭಾಗಿತ್ವ ಕುರಿತು ಚರ್ಚೆ ಹಾಗೂ ಸಮಾಲೋಚನೆಗಳು ನಡೆಯಲಿವೆ.
ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ಬಿ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಡಾ. ಗೋಪಾಲಕೃಷ್ಣ ಜೋಶಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಆಯುಕ್ತ ಪಿ. ಪ್ರದೀಪ್, ಹಲವು ವಿಶ್ವವಿದ್ಯಾಲಯಗಳ ಕುಲಪತಿಗಳು ಪಾಲ್ಗೊಂಡಿದ್ದರು.












Click it and Unblock the Notifications