ಸೇಲ್ಸ್ ಟ್ಯಾಕ್ಸ್ ತುಂಬದೇ ಇರುವ ವರ್ತಕರಿಗೆ ಸಿಹಿ ಸುದ್ದಿ!
ಬೆಂಗಳೂರು, ಆಗಸ್ಟ್ 10: ನಾನಾ ಕಾರಣಗಳಿಗಾಗಿ ಮಾರಾಟ ತೆರಿಗೆ ಪಾವತಿಸದೇ ಇರುವ ರಾಜ್ಯದ ಲಕ್ಷಾಂತರ ವರ್ತಕರು ಹಾಗೂ ಉದ್ಯಮಿಗಳಿಗಾಗಿ 'ಕರ್ನಾಟಕ ಕರ ಸಮಾಧಾನ ಯೋಜನೆ-2018'ನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.
ಈ ಕುರಿತು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ವರ್ತಕರು ಹಾಗೂ ಉದ್ಯಮಿಗಳು ಒಂದು ವೇಳೆ ಬಾಕಿ ಇರುವ ತೆರಿಗೆಯನ್ನು ಕೂಡಲೇ ಪಾವತಿಸಿದರೆ ಅವರ ಬಡ್ಡಿ ಹಾಗೂ ದಂಡದ ಮೊತ್ತವು ಸಂಪೂರ್ಣವಾಗಿ ಮನ್ನಾ ಆಗಲಿದೆ.
ಒಂದೆಡೆ ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಗಳನ್ನು ನಡೆಸುವ ವರ್ತಕರಿಗೆ ಕರ ಸಮಾಧಾನ ಯೋಜನೆಯಿಂದ ಬಡ್ಡಿ ಮತ್ತು ಸಾಲ ಮನ್ನಾದ ಲಾಭವಾದರೆ ಮತ್ತೊಂದೆಡೆ ರಾಜ್ಯ ಸರ್ಕಾರಕ್ಕೆ ಬರಬೇಕಾಗಿದ್ದ ತೆರಿಗೆಯ ಬಾಕಿ ಮೊತ್ತ ಸರಾಗವಾಗಿ ವಸೂಲಿ ಆಗುತ್ತದೆ ಎಂಬುದು ಸರ್ಕಾರದ ಆಲೋಚನೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ನಲ್ಲಿ ಘೋಷಿಸಿದ್ದ ಕರ್ನಾಟಕ ಕರ ಸಮಾಧಾನ ಯೋಜನೆಗೆ ಆರ್ಥಿಕ ಇಲಾಖೆ ಇದೀಗ ನಿಯಮಾವಳಿಗಳ ಸಮೇತ ಆದೇಶ ಪ್ರಕಟಿಸಿದೆ.

ಏನಿದು ಕರ ಸಮಾಧಾನ ಯೋಜನೆ?
1956ರ ಕೇಂದ್ರ ಮಾರಾಟ ತೆರಿಗೆ ಕಾಯ್ದೆಯಡಿಯಲ್ಲಿ ತೆರಿಗೆ ಬಾಕಿಯನ್ನು ಕಡಿತಗೊಳಿಸಲು 2018ರ ಜೂನ್ 30ರೊಳಗೆ ಪೂರ್ಣಗೊಳಿಸಲಾದ ತೆರಿಗೆ ಹಾಗೂ ಮರು ತೆರಿಗೆ ನಿಗದಿಯಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ವಾಣಿಜ್ಯೋದ್ಯಮಿಗಳು ತಮ್ಮ ಕೇಂದ್ರ ಮಾರಾಟ ತೆರಿಗೆಯ ಬಾಕಿಯನ್ನು ಪೂರ್ತಿಯಾಗಿ ಸರ್ಕಾರಕ್ಕೆ ಭರಿಸಿದರೆ ದಂಡ ಮತ್ತು ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲು ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕರ ಸಮಾಧಾನ ಯಾರಿಗೆ ಅನ್ವಯ ಆಗುತ್ತೆ? ಯಾರಿಗೆ ಆಗಲ್ಲ?
ವರ್ತಕರು ಹಾಗೂ ಉದ್ಯಮಿಗಳು ತಮ್ಮ ಮಾರಾಟ ತೆರಿಗೆ ಭರಿಸುವುದನ್ನು ಬಾಕಿ ಉಳಿಸಿಕೊಂಡಿದ್ದರೆ ಸಂಪೂರ್ಣ ಬಾಕಿ ಪಾವತಿಸಿದರೆ ಮಾತ್ರ ಬಡ್ಡಿ ಮತ್ತು ದಂಡದ ಮೊತ್ತ ಮನ್ನಾ ಆಗಲಿದೆ. ಆದರೆ ಕೇಂದ್ರ ಮಾರಾಟ ತೆರಿಗೆ ಕಾಯ್ದೆಯ ಸೆಕ್ಷನ್ 10-ಎ ಅಡಿಯಲ್ಲಿ ವಿಧಿಸಲಾದ ದಂಡಕ್ಕೆ ಈ ಯೋಜನೆ ಅನ್ವಯ ಆಗುವುದಿಲ್ಲ. ಒಂದು ವೇಳೆ ವರ್ತಕರು ತೆರಿಗೆ ಮೊತ್ತವನ್ನು ಈಗಾಗಲೇ ಸಂಪೂರ್ಣ ಪಾವತಿಸಿದ್ದು, ಕೇವಲ ದಂಡ ಮತ್ತು ಬಡ್ಡಿ ಮೊತ್ತ ಮಾತ್ರ ಬಾಕಿ ಇದ್ದರೆ ಅಂತಹ ದಂಡ ಮತ್ತು ಬಡ್ಡಿ ಮನ್ನಾ ಆಗಲಿದೆ.

ವ್ಯಾಜ್ಯಗಳಿದ್ದರೆ ಏನು ಮಾಡಬೇಕು? ಏನು ಮಾಡಬಾರದು?
ಇನ್ನು ಕೇಂದ್ರ ಮಾರಾಟ ತೆರಿಗೆ ಕಾಯ್ದೆಯಡಿಯಲ್ಲಿ ವಿಧಿಸಿದ ದಂಡ ಮತ್ತು ಬಡ್ಡಿ ಮೊತ್ತದ ವಿರುದ್ಧ ನ್ಯಾಯಾಲಯ ಅಥವಾ ಇನ್ನಾವುದೇ ಮೇಲ್ಮನವಿ ಪ್ರಾಧಿಕಾರಗಳಲ್ಲಿ ಪ್ರಕರಣ ಬಾಕಿ ಇದ್ದರೆ, ಅಂತಹ ಪ್ರಕರಣಗಳನ್ನು ವಾಪಸ್ ಪಡೆದು ಯೋಜನೆಯ ಲಾಭ ಪಡೆಯಲು ಕೂಡ ಉದ್ಯಮಿಗಳು ಹಾಗೂ ವರ್ತಕರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಕುರಿತು ತೆರಿಗೆದಾರರು ಮಾರಾಟ ತೆರಿಗೆ ಇಲಾಖೆಗೆ ಮುಚ್ಚಳಿಕೆ ಪತ್ರ ಬರೆದುಕೊಡಬೇಕಾಗುತ್ತದೆ. ಆದರೆ ಈಗಾಗಲೇ ನ್ಯಾಯಾಲಯ ಅಥವಾ ಪ್ರಾಧಿಕಾರಿಗಳು ಪ್ರಕರಣದಲ್ಲಿ ಆದೇಶ ನೀಡಿ, ನಿಗದಿಪಡಿಸಿದ ದಂಡ ಮತ್ತು ಬಡ್ಡಿ ಪಾವತಿ ಪ್ರಕರಣಕ್ಕೆ ಈ ಯೋಜನೆ ಅನ್ವಯಿಸುವುದಿಲ್ಲ.

ವರ್ತಕರು ಏನು ಮಾಡಬೇಕು? ಯೋಜನೆಯ ಲಾಭ ಪಡೆಯುವುದು ಹೇಗೆ?
ಈ ಯೋಜನೆಯ ಲಾಭಪಡೆಯಲು ಉತ್ಸುಕರಾಗಿರುವ ಉದ್ಯಮಿ ಹಾಗೂ ವರ್ತಕರು ವಾಣಿಜ್ಯ ತೆರಿಗೆ ಇಲಾಖೆಯ ವೆಬ್ಸೈಟ್ ಮೂಲಕ ಆನ್ಲೈನ್ ಅಥವಾ ನೇರವಾಗಿ ಅರ್ಜಿ ಸಲ್ಲಿಸಬೇಕು. ಅಕ್ಟೋಬರ್ 30ರೊಳಗೆ ಸಲ್ಲಿಕೆಯಾದ ಅರ್ಜಿಗಳಿಗೆ ಈ ಯೋಜನೆ ಅನ್ವಯವಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.












Click it and Unblock the Notifications