'ಅಭಿನೇತ್ರಿ' ಪೂಜಾ ಗಾಂಧಿ ಮತ್ತೆ ರಾಜಕೀಯಕ್ಕೆ ಎಂಟ್ರಿ!
ಬೆಂಗಳೂರು, ಫೆ.4: ಕೇಳ್ರಪ್ಪೋ ಕೇಳಿ..ಕನ್ನಡ ಚಿತ್ರರಂಗದ ಆಮದು 'ಅಭಿನೇತ್ರಿ' ಪೂಜಾಗಾಂಧಿ ಅವರು ಮತ್ತೊಮ್ಮೆ ರಾಜಕೀಯ ರಂಗಕ್ಕೆ ಇಳಿಯುತ್ತಾರಂತೆ. ಅಸಲಿ, ಅನುಭವಿ ರಾಜಕಾರಣಿಗಳು ನಾಚುವಂತೆ ಪಕ್ಷದಿಂದ ಪಕ್ಷಕ್ಕೆ ಹಾರುವ ಮೂಲಕ ರಾಜಕೀಯ ವಲಯದಲ್ಲಿ ಸುದ್ದಿಗೆ ಗ್ರಾಸವಾಗಿದ್ದ 'ಮಳೆ ಹುಡುಗಿ' ಪೂಜಾ ಗಾಂಧಿ ಅವರೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
2013ರ ಮಾರ್ಚ್ 3 ರಂದು ಅಧಿಕೃತವಾಗಿ ಬಡವರ ಶ್ರಮಿಕರ ರೈತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಪೂಜಾಗಾಂಧಿ ಅವರು ಬಿಸಿಲನಾಡು ರಾಯಚೂರಿಗೆ ತಂಪು ನೀಡಲು ಹೋಗಿ ಶಾಕ್ ಹೊಡೆಸಿಕೊಂಡು ಮತ್ತೆ ಚಿತ್ರರಂಗಕ್ಕೆ ಮರಳಿದ್ದರು. ವಿವಾದಗಳನ್ನು ಮೈಮೇಲೆ ಹೊತ್ತುಕೊಂಡು ಸ್ಥೂಲಕಾಯರಾಗಿ 'ಅಭಿನೇತ್ರಿ' ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪೂಜಾಗಾಂಧಿ ನಾಲ್ಕನೇ ಸ್ಥಾನ ಗಳಿಸಿದರೆ ಅವರ ಪ್ರತಿಸ್ಪರ್ಧಿಗಳಾದ ಜೆಡಿಎಸ್ ನ ಡಾ.ಎಸ್.ಶಿವರಾಜ್ ಪಾಟೀಲ್ ಮತಗಳು 17, 759 ಪಡೆದು ಜಯಭೇರಿ ಬಾರಿಸಿದ್ದರು. ಸೋತು ಸುಣ್ಣವಾದ ಮೇಲೆ ಮತ್ತೆ ಬಣ್ಣ ಹಚ್ಚಿ ಬೆಳ್ಳಿತೆರೆಯತ್ತ ತಿರುಗಿದ ಪೂಜಾ ಅವರಿಗೆ ಈಗ ಮತ್ತೊಮ್ಮೆ ರಾಜಕೀಯ ರಂಗ ಕೈ ಬೀಸಿ ಕರೆಯುತ್ತಿದೆಯಂತೆ.

ಪೂಜಾ ಗಾಂಧಿ ರಾಜಕೀಯ ಹಿನ್ನೋಟ
ಜೆಡಿಎಸ್ ತೊರೆದು ಕೆಜೆಪಿ ಸೇರಿದ್ದ ಪೂಜಾಗಾಂಧಿ ಕೇವಲ ಮೂರೇ ತಿಂಗಳಲ್ಲೇ ಮೂರು ಪಕ್ಷಕ್ಕೆ ಹಾರಿದ್ದರು. ನಂತರ ಆಗ ಬಿಎಸ್ ಆರ್ ಕಾಂಗ್ರೆಸ್ ನಲ್ಲಿದ್ದ ರಕ್ಷಿತಾ ಪ್ರೇಮ್ ಅವರ ಕೋರಿಕೆಗೆ ಮಣಿದು ಬಿ.ಶ್ರೀರಾಮುಲು ಅವರ ಬಡವರ ಶ್ರಮಿಕರ ಕಾಂಗ್ರೆಸ್ ಪಕ್ಷ ಸೇರಿದ್ದರು. ಈಗ ಪೂಜಾ ಗಾಂಧಿ 'ಕೈ' ಯಾವ ಪಕ್ಷ ಹಿಡಿಯುತ್ತದೋ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಬಗ್ಗೆ ಇನ್ನೊಂದು ತಿಂಗಳಲ್ಲಿ ಪ್ರಕಟಿಸುವುದಾಗಿ ಪೂಜಾ ಗಾಂಧಿ ಹೇಳಿದ್ದಾರೆ.

ರಾಜಕೀಯ ರಂಗದಲ್ಲಿ ಪೂಜಾ ಕೊನೆ ಡೈಲಾಗ್
ನಾನು ಬಂದಿರೋದು ಸೋಷಲ್ ಬ್ಯಾಕ್ ಗ್ರೌಂಡ್ ನಿಂದ. ನಾನು ಪಾಸ್ಟ್ ಬಗ್ಗೆ ಮಾತನಾಡಲು ಇಷ್ಟಪಡಲು, ಕೆಜೆಪಿಯಲ್ಲಿ ಆಫರ್ ಸಿಗಲಿಲ್ಲ. ಸುಮ್ಮನೆ ಒಂದು ತಿಂಗಳು ಕುಳಿತಿದ್ದೆ. ಗ್ರಾಸ್ ರೂಟ್ ಲೆವೆಲ್ ನಲ್ಲಿ ಕೆಲಸ ಮಾಡುವ ವ್ಯಕ್ತಿ.
ನನಗೆ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವ ಆಸೆಯಿದೆ. ನಾನು ನಟಿಯಾಗಿ ಪಕ್ಷಗಳನ್ನು ಸೇರುತ್ತಿಲ್ಲ. ನಾನು ಸಾಮಾಜಿಕ ಕಾರ್ಯಕರ್ತೆ. ದಯವಿಟ್ಟು ಈ ಬಗ್ಗೆ ನೀವೆಲ್ಲ ತಿಳಿದುಕೊಳ್ಳಬೇಕು ಎಂದು ಆಂಗ್ಲ ಮಿಶ್ರಿತ ಕನ್ನಡ ಭಾಷೆಯಲ್ಲಿ ಪೂಜಾ ಗಾಂಧಿ ಅವರು ಹೇಳಿದ್ದರು.

ಪೂಜಾ ಗಾಂಧಿ ಅಭಿನೇತ್ರಿ ಪ್ರಚಾರ ಟೂರ್
ಬೆಂಗಳೂರಿನ ಅಪರ್ಣ ಚಿತ್ರಮಂದಿರ ಸೇರಿದಂತೆ ಕರ್ನಾಟಕದ 170 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮೊದಲ ವಾರದ ಪ್ರದರ್ಶನ ಪರ್ವಾಗಿಲ್ಲ ಎನ್ನುವ ಮಟ್ಟಿಗೆ ಚೇತರಿಕೆ ಕಂಡಿದೆ. ಈಗ ಚಿತ್ರದ ಪ್ರಚಾರ ಕಾರ್ಯದಲ್ಲಿ ಪೂಜಾ ನಿರತರಾಗಿದ್ದು ಊರೂರು ತಿರುಗಿ ಚಿತ್ರ ನೋಡಿ ಎಂದು ಜನರಿಗೆ ಹೇಳುತ್ತಿದ್ದಾರೆ. ನಿಧಾನವಾಗಿ ಈ ಮಹಿಳಾ ಪ್ರಧಾನ ಚಿತ್ರಕ್ಕೆ ಜನಮೆಚ್ಚುಗೆ ಸಿಗುತ್ತಿದೆ.[ಚಿತ್ರ ವಿಮರ್ಶೆ: ಫಲಿಸಿತು 'ಅಭಿನೇತ್ರಿ' ಪೂಜಾಫಲ ]

ರಾಜಕೀಯ ಪ್ರವೇಶ ಸಾಧ್ಯವೇ? ಅಗತ್ಯವಿದೆಯೆ?
ಈಗಾಗಲೇ ಪಕ್ಷದಿಂದ ಪಕ್ಷಕ್ಕೆ ಹಾರುವ ಮೂಲಕ ರಾಜಕೀಯ ರಂಗದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಪೂಜಾ ಗಾಂಧಿ ಅವರಿಗೆ ಚಿತ್ರರಂಗದಲ್ಲೇ ಸಾಕಷ್ಟು ಕೆಲಸಗಳಿರುವಾಗ ಮತ್ತೆ ರಾಜಕೀಯ ರಂಗಕ್ಕೆ ಎಂಟ್ರಿ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ.
ನಿರ್ಮಾಪಕಿಯಾಗಿ ಕೂಡಾ ಪೂಜಾಗಾಂಧಿ ಗುರುತಿಸಿಕೊಂಡಿದ್ದು ಎಚ್ಚರಿಕೆಯಿಂದ ಚಿತ್ರರಂಗದಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಈ ಸಮಯದಲ್ಲಿ ಪೂಜಾ ಗಾಂಧಿ ಅವರು ಅನಗತ್ಯವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರಾ? ಎಂಬ ಪ್ರಶ್ನೆಗೆ ಆಕೆಯೇ ಉತ್ತರಿಸಬೇಕು.












Click it and Unblock the Notifications