ಕೊಪ್ಪಳ : ಸಣ್ಣ ನೀರಾವರಿ ಇಲಾಖೆ ಅವ್ಯವಹಾರದ ತನಿಖೆ ಎಸಿಬಿಗೆ
ಕೊಪ್ಪಳ, ಸೆಪ್ಟೆಂಬರ್ 08 : ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆದ 13.65 ಕೋಟಿ ರೂ. ಅವ್ಯವಹಾರದ ತನಿಖೆಯನ್ನು ಎಸಿಬಿಗೆ ವಹಿಸಲಾಗಿದೆ. ನಿಯಮಬಾಹಿರವಾಗಿ ಕಾಮಗಾರಿಯನ್ನು ತುಂಡು ಗುತ್ತಿಗೆ ನೀಡಿ, ಅಕ್ರಮವಾಗಿ ಹಣ ಪಾವತಿ ಮಾಡಿದ ಪ್ರಕರಣವಿದಾಗಿದೆ.
ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಸಣ್ಣ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದ್ದರು. ಉಪ ಲೋಕಾಯುಕ್ತ ಎನ್.ಆನಂದ್ ಅವರು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದರು. ಮೂವರು ಇಂಜಿನಿಯರ್ ಈ ಪ್ರಕರಣದಲ್ಲಿ ಆರೋಪಿಗಳು ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಭಾಗದಲ್ಲಿನ ಕಾಮಗಾರಿಯನ್ನು ಅಕ್ರಮವಾಗಿ ತುಂಡು ಗುತ್ತಿಗೆ ನೀಡಲಾಗಿದೆ. ಅಕ್ರಮವಾಗಿ ಹಣವನ್ನು ಪಾವತಿ ಮಾಡಲಾಗಿದೆ. ತುಂಡು ಗುತ್ತಿಗೆ, ಹಣ ಪಾವತಿಯಲ್ಲಿ ಸುಮಾರು 13.65 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ.
ಈ ಅಕ್ರಮದಲ್ಲಿ ಭಾಗಿಯಾಗಿರುವ ಇಂಜಿನಿಯರ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಉಪ ಲೋಕಾಯುಕ್ತರು ಶಿಫಾರಸು ಮಾಡಿದ್ದರು. ಉಪ ಲೋಕಾಯುಕ್ತರ ವರದಿ ಅನ್ವಯ ಸರ್ಕಾರ ಅವ್ಯವಹಾರದ ತನಿಖೆಯನ್ನು ಭ್ರಷ್ಟಾಚಾರ ನಿಗ್ರಹದಳಕ್ಕೆ ವಹಿಸಿ ಆದೇಶ ಹೊರಡಿಸಿದೆ.