ದೇಶದ ಸುಮಾರು 54 ಕೋಟಿ ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ: ಕಟೀಲ್!
ಬೆಂಗಳೂರು, ಆ. 15: "ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅವರು ಮಾಡಿದ ಕೆಲಸಗಳಿಂದಾಗಿ ಜಗತ್ತು ಈಗ ಭಾರತದತ್ತ ತಿರುಗಿ ನೋಡುವಂತಾಗಿದೆ. ಹಾವಾಡಿಗರ ದೇಶ ಎನ್ನುತ್ತಿದ್ದ ದೇಶ ಇಂದು ಬಹಳ ಎತ್ತರಕ್ಕೆ ಬೆಳೆದಿದೆ" ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣದ ನಂತರ ಮಾತನಾಡಿದ್ದಾರೆ.
"ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಎರಡು ರೀತಿಯ ಹೋರಾಟ ನಡೆಯಿತು. ಅಹಿಂಸೆ ಮತ್ತು ಹೋರಾಟ. ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡು ಕ್ರಾಂತಿಕಾರಕ ಹೋರಾಟ ಮಾಡಿದ್ದರು. ಇನ್ನು ಕೆಲವರು ಶಾಂತಿಯುತವಾಗಿ ಹೋರಾಟ ಮಾಡಿದ್ದರು. ತಮ್ಮ ಯೌವ್ವನವನ್ನು ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟದ್ದರು. ಭಾರತ ಸ್ವಾತಂತ್ರ್ಯ ನಂತರ ರಾಮರಾಜ್ಯ ಆಗಬೇಕು ಎಂಬ ಆಶಯವಿತ್ತು. ಗಾಂಧೀಜಿ ಹೇಳಿದ ರಾಮರಾಜ್ಯ ಹಾಗೂ ವಿವೇಕಾನಂದರ ಭಾರತ ನಿರ್ಮಾಣ ಅನ್ನೋ ಪರಿಕಲ್ಪನೆ ಎರಡೂ ಒಂದೇ ಆಗಿತ್ತು. ಎಲ್ಲರ ಕನಸು ಸ್ವಾತಂತ್ರ್ಯ ಪಡೆದು 75 ವರ್ಷ ತಲುಪಿದಾಗ ಯಶಸ್ವಿಯಾಗಿದೆ ಅನಿಸುತ್ತಿದೆ. ವಿಶ್ವ ಭದ್ರತಾ ಮಂಡಳಿ ಅಧ್ಯಕ್ಷರ ನೇಮಕ ಮಾಡುವಷ್ಟು ಎತ್ತರಕ್ಕೆ ಭಾರತ ಈಗ ಬೆಳೆದಿದೆ" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಸೇರಿದಂತೆ ಹಲವರು ಭಾಗವಹಿಸಿದ್ದರು.
ಹಲವು ರಾಷ್ಟ್ರಗಳಿಗೆ ಲಸಿಕೆ ಕೊಡುತ್ತಿರುವ ಏಕೈಕ ದೇಶ ಭಾರತ
ವಿಶ್ವಯೋಗ ದಿನ ಇಡೀ ರಾಷ್ಟ್ರ ಆಚರಿಸುತ್ತಿದೆ. ಅದರೆ ಅದಕ್ಕೆ ನರೇಂದ್ರ ಮೋದಿ ಕೊಡುಗೆ ಇದೆ. ಈಗ ಕೊರೊನಾ ಸೋಂಕು ಪ್ರಪಂಚದಾದ್ಯಂತ ಇದೆ. ಹಲವು ಬೇರೆ ರಾಷ್ಟ್ರಗಳಿಗೆ ಲಸಿಕೆ ಕೊಡುತ್ತಿರುವ ಏಕೈಕ ರಾಷ್ಟ್ರ ಭಾರತವಾಗಿದೆ. ನಮ್ಮ ದೇಶ ಕೊರೊನಾ ನಿರ್ವಹಣೆಯಲ್ಲಿ ಬಹು ದೊಡ್ಡ ಯಶಸ್ವಿಯಾಗಿದೆ. ಕೋಟ್ಯಾಂತರ ಜನರಿಗೆ ಲಸಿಕೆ ನೀಡಿ, ಸೋಂಕು ಹರಡದಂತೆ ಕೆಲಸ ಮಾಡಲಾಗಿದೆ. ಜೊತೆಗೆ ದೇಶದ ರೈತರನ್ನು ಸ್ವಾವಲಂಬಿ ಮಾಡಲು ಕಿಸಾನ್ ಸಮಾನ್ ಯೋಜನೆ ಜಾರಿಗೆ ತರಲಾಗಿದೆ. ರೈತರ ಖಾತೆಗೆ ನೇರವಾಗಿ ಹಣ ಹಾಕಲಾಗುತ್ತಿದೆ. ಆ ಮೂಲಕ ರೈತರ ಆದಾಯ ದ್ವಿಗುಣ ಮಾಡುವ ಕೆಲಸ ಆಗುತ್ತಿದೆ. ಪಿಪಿಇ ಕಿಟ್, ಮಾಸ್ಕ್ಗಳನ್ನ ಹೊರ ದೇಶಗಳಿಗೆ ರವಾನೆ ಮಾಡಿರೋ ದೇಶ ನಮ್ಮದು ಎಂಬ ಹೆಮ್ಮೆ ಇದೆ. ಎರಡನೇ ಅಲೆ ಬಂದಾಗ ವೆಂಟಿಲೇಟರ್, ಐಸಿಯು ಕೊರತೆ ನೀಗಿಸೋ ಕೆಲಸ ಮಾಡಲಾಗಿದೆ. ಬಡವರಿಗೆ ಉಚಿತವಾಗಿ ವ್ಯಾಕ್ಸಿನ್ ನೀಡೋ ಕೆಲಸ ಮಾಡಲಾಗುತ್ತಿದೆ. ಇಂದು ಭಾರತ ಸಶಕ್ತ ಮತ್ತು ಸ್ವಾವಲಂಬಿ ದೇಶವಾಗಿ ಹೊರ ಹೊಮ್ಮಿದೆ" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ದೇಶದ ಅರ್ಧದಷ್ಟು ಜನರಿಗೆ ಲಸಿಕೆ ಹಾಕಲಾಗಿದೆ!
"ನಮ್ಮ ದೇಶದ ಅರ್ಧದಷ್ಟು ಅಂದರೆ ಸುಮಾರು 54 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕಳೆದ ಏಳು ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಬಡವರ ಏಳಿಗೆಗೆ ಹಾಕಿಕೊಂಡ ಕಾರ್ಯಕ್ರಮಗಳ ಮೂಲಕ 139 ಕೋಟಿ ಜನರ ಹೃದಯಗಳನ್ನು ಗೆದ್ದಿದ್ದಾರೆ. ಭಾರತವು ಕೋವಿಡ್ ಮೊದಲನೇ ಅಲೆ, ಎರಡನೇ ಅಲೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಅಲ್ಲದೆ ಕೋವಿಡ್ ನಿಯಂತ್ರಣದಲ್ಲಿದ್ದು ಶಾಲೆ-ಕಾಲೇಜು ತೆರೆಯುವಂಥ ಸ್ಥಿತಿ ಬಂದಿದೆ" ಎಂದು ನಳಿನ್ ಕುಮಾರ್ ಕಟೀಲ್ ವಿಹೇಳಿದರು.
"ರೈತರನ್ನು ಸ್ವಾವಲಂಬಿ ಮಾಡುವ ನಿಟ್ಟಿನಲ್ಲಿ ಕೇಂದ್ರದ ಬಿಜೆಪಿ ಸರಕಾರವು ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಬಿಮಾ ಯೋಜನೆಗಳನ್ನು ಜಾರಿಗೊಳಿಸಿದೆ. ಈಚೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ಸುಮಾರು 51 ಲಕ್ಷಕ್ಕೂ ಹೆಚ್ಚು ರೈತರಿಗೆ 1,023 ಕೋಟಿ ರೂಪಾಯಿ ನೆರವು ಲಭಿಸಿದೆ" ಎಂದು ಕಟೀಲ್ ತಿಳಿಸಿದರು.
ಕರ್ನಾಟಕದಲ್ಲಿ ನ್ಯಾನೋ ಯೂರಿಯಾ ಉತ್ಪಾದನಾ ಘಟಕ
"ದೇಶವು ಯೂರಿಯಾ ರಸಗೊಬ್ಬರದ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸುತ್ತಿದೆ. ಕರ್ನಾಟಕದಲ್ಲೂ ನ್ಯಾನೋ ಯೂರಿಯಾ ಉತ್ಪಾದನಾ ಘಟಕವನ್ನು ಇಫ್ಕೋ ಸಂಸ್ಥೆ ಸ್ಥಾಪಿಸಲಿದೆ. ರೈತರ ಸ್ವಾವಲಂಬಿತನ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಇವೆಲ್ಲವೂ ಮಹತ್ವದ ಹೆಜ್ಜೆಗಳಾಗಿವೆ. ಕೇಂದ್ರ ಸರಕಾರದ ತೀರ್ಮಾನಗಳು ರೈತಪರವಾಗಿವೆ. ಜೊತೆಗೆ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಕೆಲಸವನ್ನೂ ಕೇಂದ್ರ ಸರಕಾರ ಮಾಡಿದೆ. ಸಂಕಷ್ಟದಲ್ಲಿರುವ ಜನರಿಗೆ ಪರಿಹಾರಧನವನ್ನೂ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ವಿದ್ಯುತ್ ಸಂಪರ್ಕ ಇಲ್ಲದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸೌಕರ್ಯ ಕಲ್ಪಿಸಲಾಗಿದೆ. ಹಳ್ಳಿ ಹಳ್ಳಿಗೆ ಇಂಟರ್ನೆಟ್ ಸಂಪರ್ಕ ಕೊಡಲಾಗಿದೆ. ರೈತರಿಗೆ ಕ್ರೆಡಿಟ್ ಕಾರ್ಡ್, ಸೋಲಾರ್ ಪವರ್ ಸೌಕರ್ಯ ಕೊಡಲಾಗಿದೆ. ಕಿಸಾನ್ ರೈಲುಗಳ ಮೂಲಕ ರೈತರ ಉತ್ಪನ್ನ ಸಾಗಾಟದಿಂದ ರೈತರ ಆದಾಯ ಹೆಚ್ಚಾಗಿದೆ" ಎಂದು ಕಟೀಲ್ ವಿವರಿಸಿದರು.
Recommended Video
ಪ್ರಧಾನಿ ಮೋದಿ ಕನಸು ಸಾಕಾರಗೊಳಿಸಲು ನಾವು ಶ್ರಮಿಸಬೇಕು
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, "ಸ್ವಾತಂತ್ರ್ಯದ ನೂರನೇ ವರ್ಷಾಚರಣೆ ಸಂದರ್ಭದಲ್ಲಿ ಜಗತ್ತಿನ ನಂಬರ್ ಒನ್ ರಾಷ್ಟ್ರವಾಗಿ ಭಾರತ ಇರಬೇಕೆಂಬ ಪ್ರಧಾನಿ ಮೋದಿ ಅವರ ಕನಸನ್ನು ಸಾಕಾರಗೊಳಿಸಲು ನಾವೆಲ್ಲರೂ ಶ್ರಮಿಸಬೇಕು. ಭಾರತ ಮತ್ತು ಇಲ್ಲಿನ ಜನರು ಸವಾಲುಗಳನ್ನು ಅವಕಾಶವಾಗಿ ಮಾರ್ಪಡಿಸಿಕೊಳ್ಳಬೇಕು ಎಂಬ ಚಿಂತನೆ ಪ್ರಧಾನಿ ಮೋದಿ ಅವರದ್ದು. ದೇಶವು ಸ್ವಾವಲಂಬಿ ರಾಷ್ಟ್ರವಾಗಲು ನಾವು ನಡೆದುಬಂದ ದಾರಿಯನ್ನು ಅವಲೋಕನ ಮಾಡಬೇಕು. ನಡೆಯುತ್ತಿರುವ ದಾರಿಯಲ್ಲಿ ಅಡ್ಡ ಇರುವ ಸಣ್ಣಪುಟ್ಟ ಅಡ್ಡಿಗಳನ್ನು ಸರಿಪಡಿಸಿಕೊಳ್ಳಬೇಕು. ದೇಶದಲ್ಲಿ ಕಳೆದ ಏಳು ವರ್ಷಗಳಲ್ಲಿ ಸರ್ವಸ್ಪರ್ಶಿ, ಸರ್ವವೇದ್ಯ ಅಭಿವೃದ್ಧಿ ಕಾರ್ಯಗಳು ನಡೆದಿವೆ" ಎಂದರು.