ಅಭಿಷೇಕ್ ಅಂಬರೀಷ್ ಬಿಜೆಪಿಗೆ ಸೇರಲಿದ್ದಾರೆ: ನಾರಾಯಣಗೌಡ
ಅಭಿಷೇಕ್ ರಾಜಕೀಯಕ್ಕೆ ಬರುತ್ತಾರೆ ಎಂಬ ನಂಬಿಕೆ ಇದ್ದು, ಈ ನಿಟ್ಟಿನಲ್ಲಿ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಬಿಜೆಪಿಯನ್ನು ಅಪ್ಪಿಕೊಂಡರೆ ಪಕ್ಷಕ್ಕೆ ಲಾಭವಾಗಲಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.
ಮಂಡ್ಯ, ಜನವರಿ 26: ನಟ, ರಾಜಕಾರಣಿ ದಿವಂಗತ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಂಬರೀಶ್ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ ಸಿ ನಾರಾಯಣ ಗೌಡ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಅಭಿಷೇಕ್ ರಾಜಕೀಯಕ್ಕೆ ಬರುತ್ತಾರೆ ಎಂಬ ನಂಬಿಕೆ ಇದ್ದು, ಈ ನಿಟ್ಟಿನಲ್ಲಿ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಬಿಜೆಪಿಯನ್ನು ಅಪ್ಪಿಕೊಂಡರೆ ಪಕ್ಷಕ್ಕೆ ಲಾಭವಾಗಲಿದೆ, ಮಂಡ್ಯ ಸಂಸದೆ ಸುಮಲತಾ, ತಾಯಿ ಜತೆ ಚರ್ಚೆ ನಡೆಸಿದ್ದೇವೆ. ಬಿಜೆಪಿ ಸೇರುವ ಕುರಿತು ಮಂಡ್ಯದಲ್ಲಿ ಅಭಿಷೇಕ್ ಜತೆ ಚರ್ಚೆ ನಡೆಸಿದ್ದು, ಎರಡು ದಿನಗಳಲ್ಲಿ ಫಲಿತಾಂಶ ಪ್ರಕಟಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಸುಮಲತಾ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಸಿ.ಪಿ. ಯೋಗೇಶ್ವರ್ ಹೇಳಿದ್ದೇನು?, ಇಲ್ಲಿದೆ ವಿವರ
ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆಯನ್ನು ಪ್ರತಿನಿಧಿಸುವ ಸಚಿವ ನಾರಾಯಣ ಗೌಡ, ಅಂಬರೀಶ್ ಅವರು ಮಂಡ್ಯದವರಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭಿಷೇಕ್ ಅವರು ಬಿಜೆಪಿ ಟಿಕೆಟ್ನಲ್ಲಿ ಅಲ್ಲಿಂದ ಸ್ಪರ್ಧಿಸಿದರೆ ಪಕ್ಷಕ್ಕೆ ಒಳ್ಳೆಯದು ಎಂದರು.
ಕಳೆದ ವರ್ಷ ಜುಲೈನಲ್ಲಿ ರಾಜಕೀಯ ಪ್ರವೇಶಿಸುವ ಬಗ್ಗೆ ಅಭಿಷೇಕ್ ಅಂಬರೀಷ್ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಿಮ್ಮೆಲ್ಲರನ್ನು ಉದ್ದೇಶಿಸಿ ಮಾತನಾಡಿ ತೆಗೆದುಕೊಳ್ಳುತ್ತೇನೆ. ಯಾರಿಗೂ ಹೇಳಿದೆ ತೆಗೆದುಕೊಳ್ಳುವುದಿಲ್ಲ. ಸದ್ಯಕ್ಕೆ ನನ್ನ ಗಮನ ಚಿತ್ರರಂಗದ ಕಡೆಗೆ. ರಾಜಕೀಯಕ್ಕೆ ಸೇರುವ ಸಂದರ್ಭ ಬಂದಾಗ ಎಲ್ಲರಿಗೂ ಹೇಳಿಯೇ ತೆಗೆದುಕೊಳ್ಳುತ್ತೇನೆ. ಅದಕ್ಕೆಲ್ಲಾ ಸಮಯ ಸಂದರ್ಭ ಬರಬೇಕು ಎಂದು ಹೇಳಿದ್ದರು.
ಆದರೆ ಅವರ ತಾಯಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು, ಬಿಜೆಪಿ ಕಾರ್ಯಕರ್ತರು ನನ್ನ ಪರ ಕೆಲಸ ಮಾಡಿದ್ದಾರೆ. ಬಿಜೆಪಿ ನನಗೆ ಬೆಂಬಲ ನೀಡಿದ್ದಾರೆ, ನನಗೆ ಬಿಜೆಪಿ ಯಾವುದೇ ಷರತ್ತು ಹಾಕಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಾಯಕರು ನನ್ನೊಂದಿಗೆ ಚರ್ಚೆ ನಡೆಸಿದ್ದಾರೆ. ನನ್ನ ಜೊತೆ ನನ್ನ ಮಗ ಅಭಿಷೇಕ್ಗೂ ಟಿಕೆಟ್ ನೀಡುವುದಾಗಿ ಎರಡೂ ಪಕ್ಷಗಳು ಆಫರ್ ನೀಡಿವೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾನಂತೂ ಯಾವುದೇ ಬೇಡಿಕೆ ಇಟ್ಟಿಲ್ಲ. ನಾನು ಟಿಕೆಟ್ಗಾಗಿ ಆಸೆಯೂ ಪಟ್ಟಿಲ್ಲ. ನನ್ನ ಮಗನಿಗೂ ಈ ಆಸೆ ಇಲ್ಲ. ಎಲ್ಲವೂ ಸಮಯ ಸಂದರ್ಭ ನಿರ್ಧರಿಸಲಿದೆ. ಆ ಸಮಯ ಬಂದಾಗ ನಿರ್ಧಾರಿಸುತ್ತೇನೆ ಎಂದು ಹೇಳಿದ್ದರು.
ನಾನು ಯಾವ ಪಕ್ಷಕ್ಕೆ ಹೋಗುವದೆಂದು ತೀರ್ಮಾನಿಸಿಲ್ಲ. ಗೌರವವಿಲ್ಲದ ಕಡೆಗೆ ನಾನು ಹೋಗುವುದೂ ಇಲ್ಲ. ಗೌರವ ನೀಡದ ಪಕ್ಷಗಳನ್ನು ನಾನು ಸೇರುವುದೂ ಇಲ್ಲ. ಪಕ್ಷಗಳನ್ನು ಸೇರುವುದರಿಂದ ನನಗೆ ಒಳ್ಳೆಯದಾಗಬಹುದು. ಆದರೆ, ನಾನು ನನಗಷ್ಟೇ ಒಳ್ಳೆಯದಾಗಬೇಕೆಂದು ಭಾವಿಸಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು.