ಮಲೆನಾಡಿಗರ ಮನಗೆದ್ದ ಆಷಾಢ ಮಾಸದ ಆಟಿಡೊಂಜಿ ಆಚರಣೆ
ಚಿಕ್ಕಮಗಳೂರು, ಜುಲೈ.22: ಗ್ರಾಮೀಣ ಕಲೆಗಳು ಇತ್ತೀಚೆಗೆ ನಶಿಸುತ್ತಿವೆ. ಅದರಲ್ಲೂ ಮಲೆನಾಡಿನ ರೈತರು ಮಳೆಗಾಲದಲ್ಲಿ ಆಡಿ ಸಂಭ್ರಮಿಸುತ್ತಿದ್ದ ಅದೆಷ್ಟೋ ಕಲೆಗಳು ಇಂದು ಕಣ್ಮರೆಯಾಗಿವೆ.
ಈ ನಿಟ್ಟಿನಲ್ಲಿ ಮಲೆನಾಡಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ದಕ್ಷಿಣ ಕನ್ನಡದ ಪ್ರಸಿದ್ಧ ಸಾಂಸ್ಕೃತಿಕ ಕಲೆಯಾದ ಆಟಿಡೊಂಜಿ ಆಚರಣೆ ಮಾಡಿ ಸೈ ಎನಿಸಿಕೊಂಡಿದೆ. ಹಾಗಾದರೆ ಮಲೆನಾಡಿನಲ್ಲಿ ನಡೆದ ಆಟಿಡೊಂಜಿ ಹೇಗಿತ್ತು ಅಂತೀರಾ? ಈ ಸ್ಟೋರಿ ನೋಡಿ...
ಗ್ರಾಮೀಣ ಕಲೆಗೆ ಉತ್ತೇಜನ
ಒಂದೆಡೆ ಧೋ ಎಂದು ಸುರಿಯುತ್ತಿರುವ ಮಳೆ, ಮತ್ತೊಂದೆಡೆ ಭತ್ತದ ನಾಟಿಗೆ ಸಿದ್ಧವಾದ ಮೊಣಕಾಲುದ್ದ ಕಾಲಿಳಿಯುವ ಕೆಸರುಗದ್ದೆ. ಇನ್ನೊಂದೆಡೆ ಕೆಸರು ಗದ್ದೆಯನ್ನು ಲೆಕ್ಕಿಸದೇ ಮಲೆನಾಡಿಗೆ ಉಡುಗೆ ತೊಟ್ಟು ಗದ್ದೆಯಲ್ಲಿ ನೃತ್ಯ ಮಾಡುತ್ತಿರುವ ಮಹಿಳೆಯರು, ಪುರುಷರು ಹಾಗೂ ಮಕ್ಕಳು.
ಹೌದು, ಈ ಮಳೆಗಾಲದ ಅದ್ಭುತ ಸಾಂಸ್ಕೃತಿಕ ವೈಭವ ಕಂಡು ಬಂದಿದ್ದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಅಂಬಳಿಕ ಗ್ರಾಮದಲ್ಲಿ. ಗ್ರಾಮೀಣ ಸಾಂಸ್ಕೃತಿಕ ಕಲೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಮಲೆನಾಡಿನಲ್ಲಿ ಆಷಾಢ ಮಾಸದ ಆಟಿಡೊಂಜಿ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ.
ಕೆಸರುಗದ್ದೆಯಲ್ಲಿ ಸಂಭ್ರಮ
ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆಸಲಾಯಿತು. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ, ಕೊಪ್ಪ, ಶೃಂಗೇರಿ ತಾಲೂಕಿನ ನೂರಾರು ರೈತರು ಭಾಗಿಯಾಗಿ ಅಪ್ಪಟ ಮಲೆನಾಡಿನ ಉಡುಗೆ ತೊಡುಗೆಗಳನ್ನು ತೊಟ್ಟು ಕೆಸರುಗದ್ದೆಯಲ್ಲಿ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದಕ್ಕೆ ಆಯೋಜಕರು ಸಂತಸ ವ್ಯಕ್ತಪಡಿಸಿದರು.
ಆಷಾಢ ಮಾಸದಲ್ಲಿ ಮಾರಿ ಓಡಿಸಲು ತುಳುನಾಡಿನ ಮನೆ ಮನೆಗೆ ಬರುವ ಆಟಿ ಕಳೆಂಜ
ಸಾಥ್ ಕೊಟ್ಟ ದ.ಕ.ಕಲಾವಿದರು
ಇನ್ನು ಈ ಮಲೆನಾಡಿನ ಆಟಿಡೊಂಜಿಗೆ ದಕ್ಷಿಣಕನ್ನಡದ ಕಲಾವಿದರು ಸಹ ಸಾಥ್ ಕೊಟ್ರು. ಆಟಿಡೊಂಜಿ ಸಾಂಸ್ಕೃತಿಕ ಕಲೆಯ ಜೊತೆಗೆ ಗ್ರಾಮೀಣ ಕ್ರೀಡೆಗಳಾದ ಕೆಸರುಗದ್ದೆ ಓಟ, ಕೆಸರುಗದ್ದೆ ಕಬ್ಬಡ್ಡಿ, ವಾಲಿಬಾಲ್ ಸೇರಿದಂತೆ ಮಹಿಳೆಯರಿಗೂ ವಿಶೇಷ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮಹಿಳೆಯರು ಮಕ್ಕಳು, ಪುರುಷರು ಭಾಗಿಯಾಗಿ ಸಖತ್ ಖುಷಿ ಪಟ್ರು.
ಎಲ್ಲರ ಮನಗೆದ್ದ ಕಾರ್ಯಕ್ರಮ
ಒಟ್ಟಾರೆ ಮಲೆನಾಡಿನ ಸಾಂಸ್ಕತಿಕ ಕಲೆ ಕ್ರೀಡೆಗಳು ನಶಿಸುತ್ತಿರುವ ಈ ಹೊತ್ತಿನಲ್ಲಿ ಧರ್ಮಸ್ಥಳ ಗ್ರಾಮೀಣಭಿವೃದ್ದಿ ಸಂಸ್ಥೆ ಆಯೋಜಿಸಿದ ಈ ಕಾರ್ಯಕ್ರಮ ಎಲ್ಲರ ಮನಗೆದ್ದಿರುವ ಜೊತೆಗೆ ಆಯೋಜಕರಿಗೆ ಮಲೆನಾಡಿನ ರೈತರು ಸಲಾಮ್ ಅಂದ್ರು.