ಎಸಿಬಿ ರದ್ದು: ಹೈಕೋರ್ಟ್ ಆದೇಶ ಸ್ವಾಗತಿಸಿದ ಎಎಪಿಯ ಪೃಥ್ವಿರೆಡ್ಡಿ
ಬೆಂಗಳೂರು ಆಗಸ್ಟ್ 11: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಪಡಿಸುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಆಮ್ ಆದ್ಮಿ ಪಾರ್ಟಿ ಸ್ವಾಗತಿಸುತ್ತದೆ. ಈ ಆದೇಶದ ಮೂಲಕ ಆರು ವರ್ಷಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ಯಶಸ್ಸು ದೊರೆತಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಹರ್ಷ ವ್ಯಕ್ತಪಡಿಸಿದರು.
ಗುರುವಾರ ಹೈಕೋರ್ಟ್ ಆದೇಶದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಅವರು, "ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 2016ರಲ್ಲಿ ಲೋಕಾಯುಕ್ತದ ಅಧಿಕಾರವನ್ನು ಮೊಟಕುಗೊಳಿಸಿ ಎಸಿಬಿಯನ್ನು ರಚಿಸಿತು. ಆಗ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಾರ್ಟಿ ನಾಯಕರು ಎಲ್ಲರೂ ಸೇರಿ ಸುಮಾರು ಎಂಟು ದಿನಗಳ ಉಪವಾಸ ಸತ್ಯಾಗ್ರಹ ಮಾಡಿದ್ದೆವು. ನಂತರ ಸಿದ್ದರಾಮಯ್ಯ ಜೊತೆ ಎಎಪಿ ನಿಯೋಗವು ಚರ್ಚಿಸಿದ್ದರೂ ಎಸಿಬಿ ರದ್ದು ಕುರಿತು ಮಾತುಕತೆ ಫಲಪ್ರದವಾಗಿರಲಿಲ್ಲ" ಎಂದು ಸ್ಮರಿಸಿದರು.
"ಕಳೆದ ಆರು ವರ್ಷಗಳಲ್ಲಿ ಎಸಿಬಿ ರದ್ದು ಪಡಿಸಬೇಕೆಂದು ಆಗ್ರಹಿಸಿ ಎಎಪಿ ಅನೇಕ ರೀತಿಯಲ್ಲಿ ಹೋರಾಟ ಮಾಡಿದೆ. ಈಗ ಹೈಕೋರ್ಟ್ ಮಧ್ಯ ಪ್ರವೇಶಿಸಿ ಎಸಿಬಿಯನ್ನು ವಜಾ ಮಾಡಿ, ಅಲ್ಲಿನ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿ ಆದೇಶ ಮಾಡಿರುವುದು ಸಂತಸ ಮೂಡಿಸಿದೆ" ಎಂದರು.

ಲೋಕಾಯುಕ್ತಕ್ಕೆ ಪರಮಾಧಿಕಾರ ಮರಳಬೇಕಿದೆ; "ಕೇವಲ ಎಸಿಬಿಯನ್ನು ವಜಾ ಮಾಡಿದರೆ ಸಾಲದು. ಲೋಕಾಯುಕ್ತ ಸಂಸ್ಥೆಗೆ ಹಿಂದೆ ಇದ್ದಂತಹ ಪರಮಾಧಿಕಾರ ಮರಳಿ ಸಿಗಬೇಕು. ಆದರೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವು ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುತ್ತದೇ ಎಂಬುದನ್ನು ನಿರೀಕ್ಷಿಸುವುದು ಕನಸಿನ ಮಾತು. ಅಧಿಕಾರ ಸಿಕ್ಕರೆ ಮೊದಲ ಸಚಿವ ಸಂಪುಟದಲ್ಲೇ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದ ಬಿಜೆಪಿಯು ಮೂರು ವರ್ಷವಾದರೂ ಈ ಕುರಿತು ಕ್ರಮ ಕೈಗೊಂಡಿಲ್ಲ. ಲೋಕಾಯುಕ್ತವು ಸರ್ಕಾರದ ಕೈಗೊಂಬೆಯಾಗಿರಬೇಕೆಂದು ಬಿಜೆಪಿ ಸರ್ಕಾರ ಬಯಸುತ್ತಿದೆ" ಎಂದು ಪೃಥ್ವಿರೆಡ್ಡಿ ದೂರಿದರು.
"ರಾಜ್ಯ ಸರ್ಕಾರವು ಯಾವತ್ತೋ ಮಾಡಬೇಕಿದ್ದ ಕೆಲಸವನ್ನು ಹೈಕೋರ್ಟ್ ಇಂದು ಮಾಡಿದೆ. ಭ್ರಷ್ಟಾಚಾರ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಭ್ರಷ್ಟಾಚಾರವನ್ನು ಪೋಷಿಸುತ್ತವೆಯೇ ಹೊರತು ಪ್ರಾಮಾಣಿಕ ಆಡಳಿತ ನೀಡಬೇಕೆಂಬ ಬದ್ಧತೆ ಕಾಂಗ್ರೆಸ್ ಬಿಜೆಪಿಯಲ್ಲಿ ಪಕ್ಷಗಳಿಗೆ ಇಲ್ಲ" ಎಂದು ಕಿಡಿ ಕಾರಿದರು.

"ಹೈಕೋರ್ಟ್ ಆದೇಶದ ನಂತರವಾದರೂ ಲೋಕಾಯುಕ್ತ ಸಂಸ್ಥೆಯು ಬಲಗೊಂಡು ಭ್ರಷ್ಟ ಜನಪ್ರತಿನಿಧಿಗಳು ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆಯಾಗುವಂತಹ ವ್ಯವಸ್ಥೆ ಜಾರಿಗೆ ಬರಬೇಕು" ಎಂದು ಅವರು ಆಗ್ರಹಿಸಿದರು.












Click it and Unblock the Notifications