ಮಡಿಕೇರಿಯಲ್ಲಿ ಲಾರಿ-ಕಾರು ಡಿಕ್ಕಿ, ಮಂಗಳೂರು ವ್ಯಕ್ತಿ ಸಾವು
ಮಡಿಕೇರಿ,ಫೆಬ್ರವರಿ,25: ಟಿಪ್ಪರ್ ಲಾರಿಯು ಮಡಿಕೇರಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿ, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಸಮೀಪದ ಕಾಟಕೇರಿ ಗ್ರಾಮದಲ್ಲಿ ನಡೆದಿದೆ.
ಮಂಗಳೂರು ಸಮೀಪದ ಬಿ.ಸಿ ರಸ್ತೆಯ ಪರಂಗಿಪೇಟೆಯ ನಿವಾಸಿ ಸಫೀಕ್ (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಅದೇ ಊರಿನ ಸಮೀರ್, ಅಸ್ವಾನ್, ಇರ್ಫಾನ್ ಮತ್ತು ನೌಫಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸಲಾಗಿದೆ.[ಕರಾಳ ಶುಕ್ರವಾರ, ಅಪಘಾತಕ್ಕೆ 18 ಜನರು ಬಲಿ]
ಘಟನೆಯ ವಿವರ:
ಸಫೀಕ್, ಸಮೀರ್, ಅಸ್ವಾನ್, ಇರ್ಫಾನ್ ಮತ್ತು ನೌಫಲ್ ಇವರು ಕುಶಾಲನಗರದಲ್ಲಿರುವ ಗೆಳೆಯನನ್ನು ಭೇಟಿಯಾಗಲು ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಟಿಪ್ಪರ್ ಲಾರಿಯು ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.[ಅಪಘಾತದಲ್ಲಿ ಮೃತಪಟ್ಟ ಟೆಕ್ಕಿ ದೇಹ ಆಸ್ಪತ್ರೆಗೆ ದಾನ]
ರಸ್ತೆ ಅಪಘಾತದಿಂದಾಗಿ ಮಂಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಮಡಿಕೇರಿ ಗ್ರಾಮಾಂತರ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.[ವೇಗಯುತ ದ್ವಿಚಕ್ರ ವಾಹನಗಳಿಗೆ ಬ್ರೇಕ್ ಹಾಕುತ್ತಾ ಸರ್ಕಾರ?]
ಅಪಘಾತವಾದ ಸ್ಥಳದಲ್ಲಿ ಈ ಹಿಂದೆಯೂ ಹಲವಾರು ಬಾರಿ ಅಪಘಾತಗಳು ಸಂಭವಿಸಿ ಪ್ರಾಣಹಾನಿಯೂ ಆಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿ ವಾಹನಗಳ ವೇಗಯುತ ಚಾಲನೆಗೆ ಕಡಿವಾಣ ಹಾಕಲಾಗಿತ್ತು. ಇತ್ತೀಚೆಗೆ ಹೆದ್ದಾರಿ ದುರಸ್ತಿ ಕಾರ್ಯ ನಡೆದ ಸಂದರ್ಭ ಉಬ್ಬನ್ನು ತೆರವುಗೊಳಿಸಿದ್ದು ಇದರಿಂದ ಅಪಘಾತ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.