A Khata and B Khata: ರಾಜ್ಯದ ಎಲ್ಲಾ ಆಸ್ತಿಗಳಿಗೆ ಎ ಖಾತಾ - ಬಿ ಖಾತಾ ಮಾದರಿ ಜಾರಿ, ಏನಿದು ?
ರಾಜ್ಯದಲ್ಲಿನ ವಿವಿಧ ಆಸ್ತಿದಾರರಿಗೆ ರಾಜ್ಯ ಸರ್ಕಾರವು ಹೊಸ ಅಪ್ಡೇಟ್ವೊಂದನ್ನು ಕೊಟ್ಟಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಿಚಾರದಲ್ಲಿ ಉಂಟಾಗಿದ್ದ ಗೊಂದಲಗಳನ್ನು ಪರಿಹರಿಸುವುದಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ನಿಯಮ ಉಲ್ಲಂಘನೆ ಹಾಗೂ ಪರವಾನಿಗೆ ಪಡೆಯದೆ ನಿರ್ಮಾಣ ಮಾಡಲಾಗಿದ್ದ ಕಟ್ಟಡಗಳಿಗೆ ಎ ಖಾತಾ ಹಾಗೂ ಬಿ ಖಾತಾ ಎನ್ನುವ ಹೊಸ ಆಯ್ಕೆಗಳನ್ನು ಪರಿಚಯಿಸಲಾಗಿತ್ತು. ಇದೀಗ ಇದೇ ಮಾದರಿಯನ್ನು ರಾಜ್ಯದಾದ್ಯಂತ ಜಾರಿ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ರಾಜ್ಯದಲ್ಲಿ ಆಸ್ತಿ ಹಾಗೂ ತೆರಿಗೆ ಸಂಗ್ರಹ ಮಾಡುವ ವಿಚಾರದ ರಾಜ್ಯ ಸರ್ಕಾರವು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಆದಾಯ ಸಂಗ್ರಹಕ್ಕೆ ರಾಜ್ಯ ಸರ್ಕಾರವು ಹೆಚ್ಚು ಗಮನ ಕೊಡುತ್ತಿರುವುದು. ಈ ಹಿನ್ನೆಲೆಯಲ್ಲಿ ಇದೀಗ ಎ ಖಾತಾ ಹಾಗೂ ಬಿ ಖಾತಾ ಮಾದರಿಯನ್ನು ಮತ್ತೆ ಜಾರಿ ಮಾಡಲು ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಸೂಕ್ತ ಪರವಾನಗಿ ಪಡೆಯದೆ ಕಟ್ಟಡಗಳನ್ನು ನಿರ್ಮಾಣ ಮಾಡಿರುವವರು ಹಾಗೂ ಕಟ್ಟಡ ನಿರ್ಮಾಣದ ನಿಯಮಗಳನ್ನು ಉಲ್ಲಂಘನೆ ಮಾಡಿದವರಿಗಾಗಿ ಎ ಖಾತಾ ಹಾಗೂ ಬಿ ಖಾತಾ ಮಾದರಿಯನ್ನು ಪರಿಚಯಿಸಲಾಗಿತ್ತು. ಇದೀಗ ಇದೇ ಮಾದರಿಯನ್ನು ರಾಜ್ಯದಾದ್ಯಂತ ಜಾರಿ ಮಾಡಲು ನಿರ್ಧರಿಸಲಾಗಿದೆ. ಈ ರೀತಿ ಜಾರಿ ಮಾಡುವಾಗ ದುಪ್ಪಟ್ಟ ದಂಡ ಸಹ ವಿಧಿಸಲಾಗುತ್ತದೆ. ಹಾಗಾದರೆ ಏನಿದು ಹೊಸ ನಿಯಮ ಎನ್ನುವ ವಿವರ ನೋಡೋಣ..

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆದುಕೊಳ್ಳದೆ ಕಟ್ಟಡ ನಿರ್ಮಾಣ ಮಾಡಿರುವವರಿಗೆ ರಾಜ್ಯ ಸರ್ಕಾರವು ಶಾಕ್ ನೀಡಿದೆ. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆ ಪಡೆದುಕೊಳ್ಳದೆ ಹಾಗೂ ನಿಯಮಗಳನ್ನು ಬೇಕಾಬಿಟ್ಟಿ ಉಲ್ಲಂಘನೆ ಮಾಡಿ ಕಟ್ಟಡಗಳನ್ನು ನಿರ್ಮಿಸಿರುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದು. ದುಪ್ಪಟ್ಟು ಶುಲ್ಕವನ್ನು ವಿಧಿಸುವುದರೊಂದಿಗೆ ಎ ಹಾಗೂ ಬಿ ಖಾತಾ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ರಾಜ್ಯ ಸರ್ಕಾರವು ಈಚೆಗೆ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡಿತ್ತು. ಇದಕ್ಕೆ ಇದೀಗ ರಾಜ್ಯಪಾಲರ ಅನುಮೋದನೆ ಸಹ ಸಿಕ್ಕಿದೆ.
ತೆರಿಗೆ ಸಂಗ್ರಹದಲ್ಲಿ ವ್ಯತ್ಯಾಸ ತಪ್ಪಿಸಲು ಕ್ರಮ
ರಾಜ್ಯದಲ್ಲಿ ಲಕ್ಷಾಂತರ ಆಸ್ತಿಗಳಿಗೆ ಯಾವುದೇ ಖಾತಾ ಇಲ್ಲ. ಬೆಂಗಳೂರಿನಲ್ಲಿಯೇ ಅಂದಾಜು 5 ಲಕ್ಷಕ್ಕೂ ಹೆಚ್ಚು ಆಸ್ತಿಗಳು ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿವೆ. ಈ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದಕ್ಕೆ ಬಿಬಿಎಂಪಿಯು ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
ಇನ್ನು ಇದೇ ರೀತಿ ಕರ್ನಾಟಕದಾದ್ಯಂತ ಸ್ಥಳೀಯ ಸಂಸ್ಥೆಗಳಿಂದ ಪರವಾನಿಗೆ ಪಡೆಯದೆ ನಿರ್ಮಿಸಲಾಗಿರುವ ಲಕ್ಷಾಂತರ ಮನೆ ಹಾಗೂ ವಾಣಿಜ್ಯ ಕಟ್ಟಡಗಳು ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರಿಲ್ಲ. ಈ ಆಸ್ತಿಗಳು ನಗರಸಭೆಯಲ್ಲಿ ನೋಂದಣಿ ಆಗದೆ ಇರುವುದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ. ಅಂದಾಜು ಶೇ 50ಕ್ಕೂ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿಲ್ಲ ಎಂದು ಅಂದಾಜಿಸಲಾಗಿದೆ.
ಸರ್ಕಾರ ಈ ರೀತಿ ಗಂಭೀರ ಕ್ರಮವನ್ನು ತೆಗೆದುಕೊಳ್ಳುತ್ತಿರುವುದರ ಹಿಂದೆ ಆಸ್ತಿ ತೆರಿಗೆ ಸಂಗ್ರಹ ಗುರಿ ಮಾತ್ರವಲ್ಲ. 15ನೇ ಹಣಕಾಸಿನ ವಿಷಯವೂ ಇದೆ. 15ನೇ ಹಣಕಾಸು ಯೋಜನೆಯ ಅಡಿಯಲ್ಲಿ ರಾಜ್ಯಕ್ಕೆ ಪ್ರಯೋಜನಗಳು ಸಿಗಬೇಕಾದರೆ, ಆಸ್ತಿ ತೆರಿಗೆ ವಿಚಾರದಲ್ಲಿ ಶೇ 50ಕ್ಕಿಂತ ಹೆಚ್ಚು ಪ್ರಗತಿ ಆಗಿರಬೇಕು ಎನ್ನುವ ನಿಯಮ ಇದೆ ಎಂದು ಹೇಳಲಾಗಿದೆ.
ಸುವರ್ಣ ಅವಕಾಶ: ಇನ್ನು ರಾಜ್ಯ ಸರ್ಕಾರದ ಈ ಹೊಸ ಆದೇಶವು ಪರವಾನಗಿ ಪಡೆಯದೆ ಹಾಗೂ ವಿನ್ಯಾಸದಲ್ಲಿ ತಪ್ಪುಗಳನ್ನು ಮಾಡಿ ಕಟ್ಟಡ ನಿರ್ಮಾಣ ಮಾಡಿರುವ ಆಸ್ತಿಗಳ ಆಸ್ತಿ ಮಾಲೀಕರಿಗೆ ಲಾಭ ಅಂತಲೇ ಹೇಳಲಾಗುತ್ತಿದೆ. ಯಾಕೆಂದರೆ ಇಲ್ಲಿಯವರೆಗೆ ಈ ರೀತಿ ತಪ್ಪು ಮಾಡಿದವರಿಗೆ ಆತಂಕ ಇದ್ದೇ ಇತ್ತು. ಸರ್ಕಾರ ಯಾವಾಗಬೇಕಾದರೂ ಈ ರೀತಿಯ ಆಸ್ತಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಆತಂಕ ಇತ್ತು. ಈಗ ಅದರಿಂದ ಬಚಾವ್ ಆಗಬಹುದಾಗಿದೆ. ಅಲ್ಲದೆ ಇನ್ಮುಂದೆ ಈ ರೀತಿಯ ಆಸ್ತಿಗಳಿಗೆ ಇ - ಖಾತಾ ಮಾಡಿಸಿಕೊಳ್ಳಲು ಸಹ ಸಹಕಾರಿಯಾಗಿದೆ.












Click it and Unblock the Notifications