ಯಾದಗಿರಿಯಲ್ಲಿ ನಿಧಿಯಾಸೆಗೆ ಹೆಣ್ಣುಮಗುವನ್ನು ಕೊಂದರೆ?
ಯಾದಗಿರಿ, ಅಕ್ಟೋಬರ್ 5: ಒಂದೂವರೆ ವರ್ಷದ ಹೆಣ್ಣುಮಗುವೊಂದರ ಶವ ಬಾವಿಯಲ್ಲಿ ದೊರೆತಿದ್ದು, ನಿಧಿಯಾಸೆಗಾಗಿ ವಾಮಾಚಾರ ಮಾಡಿ, ಬಲಿ ನೀಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಜಿಲ್ಲೆಯ ಶಹಾಪುರ ತಾಲೂಕಿನ ಬೂದಿನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಬಸಯ್ಯಸ್ವಾಮಿ ಎಂಬುವರ ಮಗಳು ಅಮೃತಾ ಮೃತ ಬಾಲಕಿ.
ಮಗುವಿನ ಶವವು ಮನೆಯ ಹಿಂಭಾಗದ ಬಾವಿಯಲ್ಲಿ ಪತ್ತೆಯಾಗಿದ್ದು, ಬಳಿಯಲ್ಲೇ ವಾಮಾಚಾರಕ್ಕೆ ಬಳಸಿದ ವಸ್ತುಗಳು ಪತ್ತೆಯಾಗಿವೆ. ನಿಧಿಯಾಸೆಗೆ ಮಗಳನ್ನು ಬಲಿ ನೀಡಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು. ಆ ಪೈಕಿ ಅಮೃತಾ ಎರಡನೆಯವಳು.[ವಿಧಾನಸೌಧದ ಮುಂದೆ ಎಚ್ ಡಿ ರೇವಣ್ಣ 'ಅಮವಾಸ್ಯೆ' ಪ್ರವಚನ]

ಮನೆಯಲ್ಲಿ ತಾಯಿಯ ಪಕ್ಕ ಮಲಗಿದ್ದ ಅಮೃತಾ ನಾಪತ್ತೆಯಾಗಿದ್ದಳು. ಬೆಳಗಿನ ಜಾವ ಆಕೆಯ ತಾಯಿಗೆ ಎಚ್ಚರವಾಗಿದೆ. ಆ ವೇಳೆಗೆ ಮಗು ಇಲ್ಲದಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಕುಟುಂಬದವರೆಲ್ಲರೂ ಹುಡುಕಲು ಆರಂಭಿಸಿದ್ದಾರೆ. ಮನೆಯ ಹಿಂಭಾಗದಲ್ಲಿರುವ ಪಾಳು ಬಾವಿಯಲ್ಲಿ ಅಮೃತಾಳ ಶವ ಪತ್ತೆಯಾಯಿತು ಎಂದು ತಿಳಿಸಲಾಗಿದೆ.
ಮಗುವನ್ನು ಪೋಷಕರು ಹುಡುಕುವ ವೇಳೆಯಲ್ಲಿ ಮನೆ ಹಿಂಭಾಗ ಅರಶಿನ, ಕುಂಕುಮ, ಅಕ್ಕಿ ಇತರೆ ಪುಜಾ ಸಾಮಗ್ರಿಗಳು, ವಾಮಾಚಾರಕ್ಕೆ ಬಳಸುವ ಒಂದಿಷ್ಟು ವಸ್ತುಗಳೂ ಸಿಕ್ಕಿವೆ. ನಿಧಿಯಾಸೆಗೆ ಅಮೃತಾಳನ್ನು ಬಲಿ ಕೊಟ್ಟಿರಬಹುದು ಎಂದು ಆ ಮಗುವಿನ ಅಜ್ಜ ರಾಚಯ್ಯ ಆರೋಪಿಸಿದ್ದಾರೆ.[ಮಡಿಕೇರಿಯಲ್ಲಿ ನಿಧಿಗಾಗಿ ಮಹಿಳೆ ಕೊಂದ ಇಕ್ಬಾಲ್ ಸ್ವಾಮೀಜಿ?]
ಮನೆಯ ಹಿಂಭಾಗ ರಾತ್ರಿಯೇ ವಾಮಾಚಾರಕ್ಕೆ ಬಳಸುವ ವಸ್ತುಗಳು ಬಿದ್ದಿದ್ದವು. ಬೆಳಗ್ಗೆ ತೆಗೆದು ಹಾಕಿದರಾಯಿತು ಅಂದುಕೊಂಡು ಸುಮ್ಮನಾಗಿದ್ದೆವು. ಅಷ್ಟರಲ್ಲಿ ಹೀಗಾಗಿದೆ ಎಂದು ಮಗುವಿನ ಸಂಬಂಧಿಯೊಬ್ಬರು ಹೇಳಿದ್ದಾರೆ. ಎಸ್ ಪಿ ವಿನಾಯಕ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. 'ಮೇಲ್ನೋಟಕ್ಕೆ ವಾಮಾಚಾರ ಎನ್ನಲಾಗುತ್ತಿದೆ. ಪರಿಶೀಲನೆ ಬಳಿಕ ನಿರ್ಧಾರಕ್ಕೆ ಬರಲಾಗುವುದು' ಎಂದರು.
ಇನ್ನು ತಾಯಿ ಜತೆಗೆ ಮಲಗಿದ್ದ ಮಗು ಕಾಣೆಯಾಗಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮನೆಯಲ್ಲಿ ಆರು ಮಂದಿ ಮಲಗಿದ್ದರು. ಹೀಗಿದ್ದರೂ ಮಗು ಹೊರಗೆ ಹೋಗಿದೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications