ಈ ವಿದೇಶಿಗನ "ಕನ್ನಡ" ಕೇಳಿಸಿಕೊಂಡ್ರೆ ನೀವು ಕಳೆದು ಹೋಗ್ತೀರ..!
ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಹತ್ತಾರು ವರ್ಷ ಕಳೆದು ಇಲ್ಲೇ ಸೆಟಲ್ ಆದರೂ ಕನ್ನಡವನ್ನೇ ಕಲಿಯದ ಮಹನೀಯರಿದ್ದಾರೆ. ಕೊನೇ ಪಕ್ಷ ಕನ್ನಡಕ್ಕೆ, ಕನ್ನಡಿಗರಿಗಾದರೂ ಮರ್ಯಾದೆ ಕೊಡಿ ಅಂದ್ರೆ, ಅದನ್ನಂತೂ ಕೇಳಲೇಬೇಡಿ. ನಾವ್ ಕನ್ನಡ ಕಲಿಯಲ್ಲ, ನೀವೇ ನಮ್ ಭಾಷೆಲಿ ಮಾತಾಡಿ ಎಂದು ಅವರ ಭಾಷೆಗಳನ್ನು ನಮ್ಮ ಹೇರುವವರೇ ಜಾಸ್ತಿ. ಇದೇ ವಿಚಾರಕ್ಕೆ ಬೆಂಗಳೂರಿನಲ್ಲಿ ಆಗಾಗ ಬೀದಿಜಗಳ, ಗಲಾಟೆಗಳು ನಡೆದು ಪೊಲೀಸ್ ಠಾಣೆಯ ಮೆಟ್ಟಿಲೇರುವ ಪ್ರಸಂಗಗಳೂ ನಡೆದಿವೆ.
ಭಾಷಾ ವಿಚಾರವಾಗಿ ನಡೆಯುತ್ತಿರುವ ಗಲಾಟೆಗಳು ಒಂದೆರಡಲ್ಲ. ಕನ್ನಡ ಕಲಿಯಬೇಕು ಎನ್ನುವವರಿಗಿಂತ ನಮ್ಮ ಭಾಷೆಯನ್ನು ಹೇರೋಣ ಎಂದು ದರ್ಪ ಇರುವವರೇ ಸದ್ಯ ಬೆಂಗಳೂರನ್ನು ತುಂಬಿಕೊಂಡಿರುವುದು ನಮ್ಮೆಲ್ಲರ ದುರ್ದೈವ. ಇಂತಹವರ ನಡುವೆ ದೂರದ ವಿದೇಶದಿಂದ ಬಂದಿರುವ ಪ್ರವಾಸಿಗರೊಬ್ಬರು ಕನ್ನಡದವರೇ ಎನ್ನುವಂತೆ ಚೊಕ್ಕವಾಗಿ ಕನ್ನಡದಲ್ಲೇ ಮಾತನಾಡುವ ಮೂಲಕ ಕರ್ನಾಟಕದ ಮನಗೆದ್ದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.

ಅಮೇರಿಕಾದ ಟೆಕ್ಸಾಸ್ನಿಂದ ಕರ್ನಾಟಕಕ್ಕೆ ಬಂದಿರುವ ಈ ಪ್ರವಾಸಿಗನ ಹೆಸರು ರಿಚಿ. ಇಲ್ಲಿ ಆಟೋ ಹತ್ತಿರುವ ಇವರು ಚಾಲಕನೊಂದಿಗೆ ಶುದ್ಧ ಕನ್ನಡದಲ್ಲೇ ಮಾತನಾಡಿ ಬೆರಗು ಮೂಡಿಸಿದ್ದಾರೆ. ಇಬ್ಬರೂ ಆಟೋದಲ್ಲಿ ಪ್ರಯಾಣಿಸುತ್ತಾ ಒಬ್ಬರನ್ನೊಬ್ಬರು ಆತ್ಮೀಯವಾಗಿ ಪರಿಚಯಿಸಿಕೊಂಡಿದ್ದಾರೆ.
ʼನನ್ನ ಹೆಸರು ರಿಚಿ, ನಿಮ್ಮ ಹೆಸರೇನು? ನಿಮ್ಮ ವಯಸ್ಸು ಎಷ್ಟು?ʼ ಎಂದು ಚಾಲಕನನ್ನು ಕೇಳಿದ್ದಾರೆ. ʼನಿಮಗೆ ಹಂಡತಿ, ಮಕ್ಕಳು ಇದ್ದಾರಾ?ʼ ಎಂದೂ ಅವರ ಕುಟುಂಬದ ಬಗ್ಗೆಯೂ ಕನ್ನಡದಲ್ಲೇ ಮಾತನಾಡಿದ್ದಾರೆ.
ದೂರದ ವಿದೇಶದಿಂದ ಬಂದ ವಿದೇಶಿಯರು ಕನ್ನಡ ಕಲಿತು ಕನ್ನಡ ಮಾತಾಡುತ್ತಾರೆ 💛❤️
— ಕನ್ನಡಿಗ ದೇವರಾಜ್ (@sgowda79) September 7, 2024
ಒಕ್ಕೂಟ ಭಾರತದ ಬೇರೆ ರಾಜ್ಯದಿಂದ ಬಂದ ವಲಸಿಗರು ಕನ್ನಡ ಕಲಿಯದೇ ಗಾಂಚಲಿ ಮಾಡುತ್ತಾರೆ pic.twitter.com/JiWl4PKBy3
ಅಚ್ಚರಿ ಎಂದರೆ ಚಾಲಕರಿಗೆ ನಾವೆಲ್ಲ ಪ್ರಯಾಣಿಸುವಾಗ, ʼಅಣ್ಣ ಮುಂದೆ ರೈಟ್ ತಗೊಳ್ಳಿ, ಲೆಫ್ಟ್ ತಗೊಳ್ಳಿʼ ಅಂತ ದಾರಿ ಹೇಳುತ್ತೇವೆ. ಆದರೆ, ರಿಚಿ ಅದನ್ನೂ ಕನ್ನಡದಲ್ಲೇ ಹೇಳುವ ಮೂಲಕ ಆಟೋ ಚಾಲಕನಿಗೆ ಶಾಕ್ ಕೂಡ ನೀಡಿದ್ದಾರೆ. ʼಮುಂದೆ ಎಡಕ್ಕೆ ಹೋಗಿ...ʼ ಎಂದು ರಿಚಿ ಹೇಳಿದ್ದಾರೆ.

ಇನ್ನು ರಿಚಿಯ ಕನ್ನಡಾಭಿಮಾನಿಕ್ಕೆ ಆಟೋ ಚಾಲಕ ಫುಲ್ ಫಿದಾ ಆಗಿದ್ದು, ನಿಮ್ಮ ಕನ್ನಡ ಚೆನ್ನಾಗಿದೆ ಎಂದು ಹೊಗಳಿದ್ದಾರೆ. ಇದಕ್ಕೂ ರಿಚಿ ಕನ್ನಡದಲ್ಲೇ ಉತ್ತರಿಸಿದ್ದು, ʼಧನ್ಯವಾದಗಳುʼ ಎಂದು ಹೇಳುತ್ತಾ ನಗೆಬೀರಿದ್ದಾರೆ.
ಇನ್ನು ಈ ವಿಡಿಯೋ ಹಂಚಿಕೊಂಡಿರುವ ಹಲವರು, ದೂರದ ವಿದೇಶದಿಂದ ಬಂದ ವಿದೇಶಿಯರು ಕನ್ನಡ ಕಲಿತು ಕನ್ನಡ ಮಾತನಾಡುತ್ತಾರೆ. ಒಕ್ಕೂಟ ಭಾರತದ ಬೇರೆ ರಾಜ್ಯದಿಂದ ಬಂದ ವಲಸಿಗರು ಕನ್ನಡ ಕಲಿಯದೇ ಗಾಂಚಲಿ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಇವರು ಬೆಂಗಳೂರಿನಲ್ಲಿ ಗಾಂಚಾಲಿ ತೋರಿಸುತ್ತಿರುವ ವಲಸಿಗರು ಅದರಲ್ಲೂ ಹಿಂದಿಯವರಿಗೆ ಮಾದರಿ. ದೇಶದಲ್ಲೇ ಹುಟ್ಟಿರುವ ಅವರು ಈ ನೆಲದ ಭಾಷೆಯನ್ನೇ ಗೌರವಿಸುತ್ತಿಲ್ಲ. ಇವರು ದೂರದ ಅಮೇರಿಕಾದಲ್ಲಿ ಹುಟ್ಟಿದ್ದರೂ ಕನ್ನಡದ ಬಗ್ಗೆ ಎಷ್ಟೆಲ್ಲ ಅಭಿಮಾನವಿದೆ ಎಂದು ಕೊಂಡಾಡಿದ್ದಾರೆ. ಇನ್ನು ಈ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಇಂತಹವರನ್ನು ಕರೆಯಿಸಿ, ಅದ್ಧೂರಿಯಾಗಿ ಸನ್ಮಾನಿಸಬೇಕು ಎಂದೂ ಕೇಳಿಕೊಂಡಿದ್ದಾರೆ.
ಇತ್ತೀಚೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕರೊಬ್ಬರು ಪ್ರಯಾಣಿಕರೊಂದಿಗೆ ಕನ್ನಡದಲ್ಲೇ ಮಾತನಾಡಿದ್ದರು. ಇದು ಗಲಾಟೆಗೂ ಕಾರಣವಾಗಿತ್ತು. ಇನ್ನು ಕೆಲವರು ನಾವ್ ಕನ್ನಡ ಮಾತನಾಡಲ್ಲ ಎಂದೆಲ್ಲ ಕನ್ನಡಿಗರ ಮೇಲೆ ಜೋರು ಮಾಡಿದ ಘಟನೆಗಳೂ ನಡೆದಿವೆ.












Click it and Unblock the Notifications