9 ಅನರ್ಹ ಶಾಸಕರಿಂದ ಸುಪ್ರೀಂಗೆ ಅರ್ಜಿ ಸಲ್ಲಿಕೆ
ಬೆಂಗಳೂರು, ಆಗಸ್ಟ್ 01 : ಶಾಸಕ ಸ್ಥಾನದಿಂದ ಅನರ್ಹಗೊಂಡ 9 ಜನರು ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ. ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಜುಲೈ 28ರಂದು ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು.
ರಮೇಶ್ ಕುಮಾರ್ ನೀಡಿರುವ ಆದೇಶವನ್ನು ಗುರುವಾರ 9 ಶಾಸಕರು ಸುಪ್ರೀಂನಲ್ಲಿ ಪ್ರಶ್ನೆ ಮಾಡಿದ್ದಾರೆ. ಇವರಲ್ಲಿ 6 ಜನ ಕಾಂಗ್ರೆಸ್ನವರು, 3 ಜನ ಜೆಡಿಎಸ್ಗೆ ಸೇರಿದವರು. ಶಾಸಕ ಸ್ಥಾನದಿಂದ ಅನರ್ಹಗೊಂಡ ಎಲ್ಲರನ್ನೂ ಪಕ್ಷದಿಂದ ಈಗಾಗಲೇ ಉಚ್ಛಾಟನೆ ಮಾಡಲಾಗಿದೆ.

ಕೆ. ಆರ್. ರಮೇಶ್ ಕುಮಾರ್, ಎಚ್. ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ಉಳಿದ ಶಾಸಕರು ಸಹ ಅರ್ಜಿಗಳನ್ನು ಸಲ್ಲಿಸಿದ್ದು, ನ್ಯಾಯಾಲಯ ಎಂದು ಅರ್ಜಿಯ ವಿಚಾರಣೆ ನಡೆಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಅರ್ಜಿ ಸಲ್ಲಿಸಿರುವ ಶಾಸಕರು : ಪ್ರತಾಪ್ ಗೌಡ ಪಾಟೀಲ, ಬಿ. ಸಿ. ಪಾಟೀಲ, ಶಿವರಾಮ್ ಹೆಬ್ಬಾರ್, ಎಸ್. ಟಿ. ಸೋಮಶೇಖರ್, ಬಿ. ಎ.ಬಸವರಾಜ, ಮುನಿರತ್ನ, ಎಚ್. ವಿಶ್ವನಾಥ್, ಕೆ. ಗೋಪಾಲಯ್ಯ, ಕೆ. ಸಿ.ನಾರಾಯಣ ಗೌಡ.
ಅರ್ಜಿಯಲ್ಲಿ ನಮ್ಮನ್ನು ಅನರ್ಹಗೊಳಿಸಲು ಸ್ಪೀಕರ್ ಅನುಸರಿಸಿದ ಎಲ್ಲಾ ಅಗತ್ಯ ಕ್ರಮಗಳ ಬಗ್ಗೆ ಲಭ್ಯವಿರುವ ದಾಖಲೆಗಳನ್ನು ಅವಲೋಕಿಸಬೇಕು. ಅನರ್ಹತೆ ಆದೇಶವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ರಾಜೀನಾಮೆ ನೀಡಿರುವ ಪತ್ರವನ್ನು ತಿರಸ್ಕಾರ ಮಾಡಿರುವ ಸ್ಪೀಕರ್ ಕ್ರಮವನ್ನು ರದ್ದುಗೊಳಿಸಬೇಕು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾದ ಆದೇಶವನ್ನು ಈಗಲೂ ಅನ್ವಯಿಸಿ ಆದೇಶ ನೀಡಬೇಕು ಎಂದು ಕೋರಲಾಗಿದೆ.












Click it and Unblock the Notifications