ಮುಖ್ಯಮಂತ್ರಿ ಎದುರೇ ಡಬಲ್ ಎಂಜಿನ್ ಸರ್ಕಾರಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ತರಾಟೆ, ಎಚ್ಚರಿಕೆ ಏಕೆ?
ಹಾವೇರಿ, ಡಿಸೆಂಬರ್ 07: ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಿನ್ನೆ (ಶುಕ್ರವಾರ) ಅದ್ದೂರಿ ಸ್ವಾಗತ ದೊರೆತಿದೆ. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆಯನ್ನು ಕೊಂಡಾಡಿದರು. ಸಮಗ್ರ ಭಾಷಾ ಅಭಿವೃದ್ದಿಗೆ ಕಾನೂನು ಸ್ವರೂಪ ನೀಡಲಾಗುವುದು. ಆ ಮೂಲಕ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಮಹಾರಾಷ್ಟ್ರದ ಗಡಿ ಭಾಗದಲ್ಲಿ ವಾಸಿಸುವ ಕನ್ನಡಿಗರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಗಡಿ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಸಾಹಿತಿ ದೊಡ್ಡರಂಗೇಗೌಡರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಮ್ಮೇಳನಾಧ್ಯಕ್ಷ
ಕನ್ನಡ ಭಾಷೆ ವಿಚಾರವಾಗಿ ಸರ್ಕಾರ ನಡೆದುಕೊಂಡ ರೀತಿಯನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡರು ಖಂಡಿಸಿದರು. ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿರುವ ಅವರು ಡಬಲ್ ಎಂಜಿನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ 'ಡಬಲ್ ಎಂಜಿನ್ ಸರ್ಕಾರದ' ಅನುಕೂಲತೆಗಳ ಬಗ್ಗೆ ಪದೇಪದೆ ಹೇಳುತ್ತಲೇ ಇರುತ್ತದೆ. ಆದರೆ ಈ ಸರ್ಕಾರ ಕನ್ನಡ ಭಾಷೆಗೆ ಏನು ಮಾಡಿದೆ ಎಂದು ಪ್ರಶ್ನಿಸಿದರು.

ಕನ್ನಡ ಅಭಿವೃದ್ದಿಗೆ ಸಾಕಷ್ಟು ಅನುದಾನ ಬಂದಿಲ್ಲ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕನ್ನಡ ಭಾಷಾ ಅಭಿವೃದ್ದಿಗೆ ಸಾಕಷ್ಟು ಹಣ ನೀಡಿಲ್ಲ. ಕನ್ನಡ ಶಾಸ್ತ್ರೀಯ ಭಾಷೆಯಾಗಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ದೊಡ್ಡರಂಗೇಗೌಡರು ಹರಿಹಾಯ್ದರು. 'ತಮಿಳು ಹಾಗೂ ಸಂಸ್ಕೃತ ಭಾಷೆಗಳ ಅಭಿವೃದ್ದಿಗೆ ಸಾಕಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು ₹40-50 ಕೋಟಿ ಹಣ ನೀಡಲಾಗಿದೆ. ಕನ್ನಡಕ್ಕೆ ಕನಿಷ್ಟ ಮಟ್ಟದ ಹಣವನ್ನೂ ನೀಡಿಲ್ಲ. ಕೇವಲ ನಾಲ್ಕಾರು ಕೋಟಿ ಹಣ ನೀಡಿ ಕೈತೊಳೆದುಕೊಂಡಿದೆ. ಕನ್ನಡ ಶಾಸ್ತ್ರೀಯ ಭಾಷೆಯ ಅಧ್ಯಯನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿಯೂ ಸರ್ಕಾರ ವಿಪಲವಾಗಿದೆ. ಇದು ನಮ್ಮ ಜಡತ್ವದ ಕುರುಹು ಅಲ್ಲವೇ' ಎಂದು ಪ್ರಶ್ನಿಸಿದರು.

ಬೆಳಗಾವಿಯ ಒಂದಿಂಚು ಜಾಗವನ್ನೂ ಬಿಡಲ್ಲ
ಗಡಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಪದೇಪದೇ ತಂಟೆ ತೆಗೆಯುತ್ತಲೇ ಇರುತ್ತದೆ. ಬೆಳಗಾವಿಯ ಒಂದಿಂಚು ಜಾಗವನ್ನೂ ಬಿಟ್ಟು ಕೊಡಲಾರೆವು ಎಂದು ದೊಡ್ಡರಂಗೇಗೌಡ ಗುಡುಗಿದರು. ನಾವೀಗ ಸಂಯಮಯುತವಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮಹಾರಾಷ್ಟ್ರದವರು ಸೊಲ್ಲೆತ್ತದಂತೆ ಮಾಡಬೇಕು ಎಂದರು. ವೇದಿಕೆಯಲ್ಲಿ ಈ ಇಬ್ಬರು ನಾಯಕರು ಉಪಸ್ಥಿತರಿದ್ದರು.

ಕಾಸರಗೋಡಿನಲ್ಲಿ ಕನ್ನಡ ಶಾಲೆಗಳನ್ನು ಆರಂಭಿಸಿ
ಕನ್ನಡ, ಕನ್ನಡಿಗ ಹಾಗೂ ಕರ್ನಾಟಕ ಪಂದೇ ತಂತಿಯಲ್ಲಿರಬೇಕು. ಈ ತಂತಿಗಳು ಮೂರಾಗದಂತೆ ನಾವೆಲ್ಲ ಶ್ರಮಿಸಬೇಕಿದೆ. ಕಾಸರಗೋಡಿನ ಕನ್ನಡಿಗರ ಮಕ್ಕಳ ಮಲಯಾಳಂ ಕಲಿಯುವ ಅನಿವಾರ್ಯತೆ ಇದೆ. ಅಲ್ಲಿ ಕರ್ನಾಟಕ ಸರ್ಕಾರ ಕನ್ನಡ ಶಾಲೆಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು. ಕರ್ನಾಟಕದಲ್ಲಿ ಮುಚ್ಚಿ ಹೋಗಿರುವ ಶಾಲೆಗಳನ್ನು ಮತ್ತೆ ತೆರೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜನಪ್ರತಿನಿಧಿಗಳು ಮೂರು ಶಾಲೆಗಳನ್ನು ದತ್ತಕ್ಕೆ ಪಡೆದರೂ ಈ ಕೆಲಸ ಸುಲಭವಾಗುತ್ತದೆ ಎಂದು ಅವರು ಒತ್ತಾಯಿಸಿದರು.

ಕನ್ನಡಪರ ಹೋರಾಟಗಾರರ ಪರ ನಿಂತ ದೊಡ್ಡರಂಗೇಗೌಡ
ಕನ್ನಡಪರ ಹೋರಾಟಗಾರರ ಬಗ್ಗೆ ಸರ್ಕಾರಕ್ಕೆ ಕರಣೆ ಇರಬೇಕು. ಅವರನ್ನು ಜೈಲಿಗಟ್ಟುವ ಕೆಲಸವನ್ನು ಬಿಡಬೇಕು. ಅವರೇನು ಭಯೋತ್ಪಾದಕರಲ್ಲ. ಕನ್ನಡಮ್ಮನ ಹಿತಕ್ಕಾಗಿ, ತಾಯಿ ಭುವನೇಶ್ವರಿಯ ಕಾಳಜಿಗಾಗಿ ದುಡಿಯುವವರು. ಅವರು ಕನ್ನಡದ ಬಗೆಗಿನ ಅಭಿಮಾನದಿಂದ ವ್ಯಗ್ರರಾದವರು. ಅವರು ಕುರಿತು ಕರುಣೆ ಇರಲಿ. ಅವರ ಮೇಲಿನ ಪ್ರಕರಣಗಳನ್ನು ವಾಪಸು ಪಡೆಯಿರಿ ಎಂದು ಮುಖ್ಯಮಂತ್ರಿ ಬೊಮ್ಮಾಯಿಗೆ ಒತ್ತಾಯಿಸಿದರು.












Click it and Unblock the Notifications