8 ಪರಿಷತ್ ಸದಸ್ಯರಿಂದ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ
ಬೆಂಗಳೂರು, ಆಗಸ್ಟ್ 30 : ಸಚಿವ ಸ್ಥಾನ ಪಡೆಯಲಿರುವ ಆರ್.ಬಿ.ತಿಮ್ಮಾಪುರ ಸೇರಿದಂತೆ ಎಂಟು ವಿಧಾನಪರಿಷತ್ ಸದಸ್ಯರಿಗೆ ಹೊಸ ಸಂಕಷ್ಟ ಎದುರಾಗಿದೆ. ಎಲ್ಲರೂ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬುದು ಬಿಬಿಎಂಪಿ ಆಯುಕ್ತರ ವರದಿಯಲ್ಲಿ ಸಾಬೀತಾಗಿದೆ.
ಎಂಟು ವಿಧಾನಪರಿಷತ್ ಸದಸ್ಯರು ಬಿಬಿಎಂಪಿ ಮೇಯರ್ ಆಯ್ಕೆಯ ಚುನಾವಣೆಯಲ್ಲಿ ಮತ ಚಲಾಯಿಸಲು ಬೆಂಗಳೂರು ನಗರದ ಮತದಾರರ ಪಟ್ಟಿಗೆ ಸೇರಿದ್ದರು. ಆದರೆ, ಇವರು ಹಿಂದಿನ ವಿಳಾಸವನ್ನು ಕೊಟ್ಟು ಪರಿಷತ್ ಸದಸ್ಯರ ಭತ್ಯೆಯನ್ನು ಪಡೆದಿದ್ದಾರೆ.
ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್, ಸಂಪುಟ ಸೇರುವವರು ಯಾರು?
ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಚುನಾವಣಾ ಆಯೋಗಕ್ಕೆ ಈ ಕುರಿತು ದೂರು ನೀಡಿದ್ದರು. ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರಿಗೆ ತನಿಖೆ ನಡೆಸುವಂತೆ ಆಯೋಗ ಸೂಚನೆ ನೀಡಿತ್ತು. ಆಯುಕ್ತರು ತನಿಖೆ ನಡೆಸಿ, ಮಂಗಳವಾರ ಆಯೋಗಕ್ಕೆ ವರದಿ ನೀಡಿದ್ದಾರೆ.
ಪರಿಷತ್ ಸದಸ್ಯರಾಗಿ ಸಿ.ಎಂ.ಇಬ್ರಾಹಿಂ ಅವಿರೋಧ ಆಯ್ಕೆ
ಸದಸ್ಯರ ಮನವಿಯಂತೆ ಅವರನ್ನು ಬೆಂಗಳೂರಿನ ಮತದಾರರು ಎಂದು ಪ್ರಮಾಣಿಕರಿಸಲಾಗಿದೆ. ಆದರೆ, ಅವರು ತಪ್ಪು ಮಾಹಿತಿ ನೀಡಿ ಭತ್ಯೆ ಪಡೆದಿದ್ದಾರೆ. ಈ ಅಪರಾಧಕ್ಕೆ ಒಂದು ವರ್ಷದ ತನಕ ಜೈಲು ಶಿಕ್ಷೆ ವಿಧಿಸಬಹುದಾಗಿದೆ. 'ಇದು ಮುಂದಿನ ಕ್ರಮ ಜರುಗಿಸಬಹುದಾದ ಪ್ರಕರಣ' ಎಂದು ಮಂಜುನಾಥ ಪ್ರಸಾದ್ ವರದಿಯಲ್ಲಿ ತಿಳಿಸಿದ್ದಾರೆ.
ಸದಸ್ಯರು ಯಾರು? : ಆರ್.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ರಾಘು ಆಚಾರ್, ಎನ್.ಎಸ್.ಬೋಸರಾಜು, ಎಸ್.ರವಿ, ಸಿ.ಆರ್.ಮನೋಹರ್ (ಜೆಡಿಎಸ್), ಅಪ್ಪಾಜಿ ಗೌಡ (ಜೆಡಿಎಸ್), ಎಂ.ಡಿ.ಲಕ್ಷ್ಮೀ ನಾರಾಯಣ (ಪಕ್ಷೇತರ) ಬೆಂಗಳೂರು ಮತದಾರರ ಪಟ್ಟಿಗೆ ಸೇರ್ಪಡೆ ಗೊಂಡಿದ್ದಾರೆ.
ಬೆಂಗಳೂರಿನ ಮತದಾರರಾದ ಆರ್.ಬಿ.ತಿಮ್ಮಾಪುರ ಬಾಗಲಕೋಟೆ ವಿಳಾಸ ನೀಡಿ ಪರಿಷತ್ ಪ್ರಯಾಣ, ತುಟ್ಟಿ ಭತ್ಯೆ ಪಡೆದಿದ್ದಾರೆ. ಅಲ್ಲಂ ವೀರಭದ್ರಪ್ಪ ಬಳ್ಳಾರಿ, ಮನೋಹರ್ ಕೋಲಾರ, ಬೋಸರಾಜು ರಾಯಚೂರು, ಅಪ್ಪಾಜಿ ಗೌಡ ಮಂಡ್ಯ, ಎಸ್.ರವಿ ರಾಮನಗರ, ರಾಘು ಆಚಾರ್ ಚಿತ್ರದುರ್ಗದ ವಿಳಾಸ ನೀಡಿ ಭತ್ಯೆ ಪಡೆದಿದ್ದಾರೆ.
ಬಿಬಿಎಂಪಿ ಆಯುಕ್ತ ವರದಿ ಪರಿಗಣಿಸಿ ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಆರ್.ಬಿ.ತಿಮ್ಮಾಪುರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಸೇರಲಿದ್ದು, ಸೆ.1ರಂದು ಪ್ರಮಾಣ ವಚನ ಸಮಾರಂಭ ನಡೆಯಲಿದೆ.