7th Pay Commission: ಹಳೆ ಪಿಂಚಣಿ ಯೋಜನೆ ಜಾರಿ ಬಗ್ಗೆ ಆತಂಕ ಬೇಡ: ಸಿಎಸ್.ಷಡಾಕ್ಷರಿ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 30: ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಶೀಘ್ರವೇ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವ ವಿಶ್ವಾಸ ಇದೆ. ಆದ್ದರಿಂದ ಸರ್ಕಾರಿ ನೌಕರರು ಈ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ತಿಳಿಸಿದ್ದಾರೆ. ರಾಜ್ಯಾಧ್ಯಕ್ಷರ ಹೇಳಿಕೆಯಿಂದ ನೌಕರರಲ್ಲಿದ್ದ ಒಂದಷ್ಟು ಗೊಂದಲ, ಚಿಂತೆ ದೂರವಾಗಲಿವೆ.
ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಹೊಸ ಪಿಂಚಣಿ ಯೋಜನೆ ಜಾರಿಗೆ ನೌಕರರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಹಿಂದಿದ್ದ ಸರ್ಕಾರಗಳು ಅಗತ್ಯ ಕ್ರಮದ ಭರವಸೆ ನೀಡಿದ್ದವು.

ಇಂದಿನ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಅಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರಿದ್ದ ಸರ್ಕಾರಗಳು ತಲಾ ಒಂದೊಂದು ಸಮಿತಿ ರಚನೆ ಮಾಡಿದ್ದವು. ನಂತರ ಸರ್ಕಾರಗಳು ಅಂತ್ಯಗೊಂಡಂತೆ ಈ ಹಳೆ ಪಿಂಚಣಿ ಯೋಜನೆ ಜಾರಿ ವಿಚಾರವು ಕೊನೆಗೊಂಡಿತ್ತು.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಲ್ಲಿದೆ. ಮುಖ್ಯಮಂತ್ರಿಗಳೂ ಐದು ಸದಸ್ಯರು ಇರುವ ಸಮಿತಿಯೊಂದನ್ನು ಪಿಂಚಣಿ ಯೋಜನೆಗಾಗಿಯೇ ರಚಿಸಿದ್ದಾರೆ. ಈ ಸಮಿತಿ ಸದಸ್ಯರು ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿಕೊಂಡು ಬಂದಿದ್ದಾರೆ.

ಸಮಿತಿಯ ಅಧ್ಯಯನ ನಡೆಸಿ ವರದಿ ನೀಡಲಿದೆ. ಈ ವೇಳೆ ಸರ್ಕಾರ ಹೊಸ ಪಿಂಚಣಿ ಯೋಜನೆಗೆ ಬದಲಾಗಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವ ವಿಶ್ವಾಸ ಇದೆ. ಆಗ ನೌಕರರ ಸಂಘವು ನಾವೆಲ್ಲರೂ ಕೂಡಿಕೊಂಡು ಮತ್ತೆ ಒತ್ತಾಯಿಸೋಣ ಎಂದು ಅವರು ಕರೆ ನೀಡಿದರು.
ನೌಕರರ ಸಮಸ್ಯೆಗಳ ಪರಿಹಾದತ್ತ ಆದ್ಯತೆ
ರಾಜ್ಯದಲ್ಲಿ ಕೆಲವರು ಹೊಸ ಪಿಂಚಣಿ ಯೋಜನೆಯನ್ನು ಜಾರಿಯನ್ನೇ ಜೀವಂತವಾಗಿಟ್ಟಿದ್ದಾರೆ. ಆದರೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಮಾಡಲು ಆದ್ಯತೆ ನೀಡುತ್ತದೆ. ಕೆಲವರು ಹೋರಾಟದ ಹೆಸರಿನಲ್ಲಿ ದೇಣಿಗೆ ಎತ್ತಬೇಕೆಂಬ ಮನಸ್ಥಿತಿ ಹೊಂದಿದ್ದಾರೆ. ಆದರೆ ನಾವು ಯಾವುದೇ ದೇಣಿಗೆ ಪಡೆದಿಲ್ಲ. ಒಂದು ವೇಳೆ ನಮ್ಮ ಹೋರಾಟದಿಂದ ನಾವು ಒಂದೇ ಒಂದು ರೂಪಾಯಿ ದೇಣಿಗೆ ಸಂಗ್ರಹಿಸಿದ್ದೇವೆ ಎಂಬುದು ಸಾಬೀತಾದರೆ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇರುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಲಕ್ಷಾಂತರ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಳನೇ ವೇತನ ಆಯೋಗ ಜಾರಿಗೆ ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಆರ್ಥಿಕವಾಗಿ ನೌಕರರಿಗೆ ಸಹಾಯವಾಗಲಿದೆ. ಹಣದುಬ್ಬರ ಸಂದರ್ಭದಲ್ಲಿ ಸಿಗುವ ವೇತನ ಹೆಚ್ಚಳ, ತುಟ್ಟಿಭತ್ಯೆಯಂತ ನೀರ್ಧಾರಗಳಿಂದ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.












Click it and Unblock the Notifications