7th Pay Commission: ಸರ್ಕಾರಿ ನೌಕರರ ನಗರ ಪರಿಹಾರ ಭತ್ಯೆ ಹೆಚ್ಚಳಕ್ಕೆ ಶಿಫಾರಸು
ಬೆಂಗಳೂರು, ಆಗಸ್ಟ್ 31: ಕರ್ನಾಟಕದಲ್ಲಿ ಆಗಸ್ಟ್ ತಿಂಗಳಿನಿಂದಲೇ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿಗೆ ಬರುತ್ತಿದೆ. ಆಯೋಗ ತನ್ನ 558 ಪುಟಗಳ ಸಂಪುಟ-1ರ ವರದಿಯಲ್ಲಿ ವೇತನ, ಭತ್ಯೆಗಳ ಹೆಚ್ಚಳಕ್ಕೆ ರಾಜ್ಯ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ. ಸರ್ಕಾರಿ ನೌಕರರ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಜೊತೆಗೆ ಆಯೋಗ ನಗರ ಪರಿಹಾರ ಭತ್ಯೆ (ಸಿಸಿಎ) ಹೆಚ್ಚಳಕ್ಕೆ ಸಹ ಶಿಫಾರಸುಗಳನ್ನು ಮಾಡಿದೆ.
ನಗರ ಪರಿಹಾರ ಭತ್ಯೆ (ಸಿಸಿಎ) ಈ ಭತ್ಯೆಯನ್ನು ನಿರ್ದಿಷ್ಟ ನಗರಗಳಲ್ಲಿನ ದುಬಾರಿ ಜೀವನ ವೆಚ್ಚಕ್ಕೆ ಪರಿಹಾರವಾಗಿ ಮತ್ತು ವಾಸ ಸ್ಥಳದಿಂದ ಕಛೇರಿಗೆ ಪ್ರಯಾಣಿಸಲು ತಗಲುವ ಹೆಚ್ಚುವರಿ ವೆಚ್ಚವನ್ನು ಭರಿಸಲು ನೀಡಲಾಗುತ್ತದೆ. ಸಾಮಾನ್ಯವಾಗಿ, ಜೀವನ ವೆಚ್ಚದಲ್ಲಿನ ಏರಿಕೆ ಮತ್ತು ವಿಶೇಷವಾಗಿ ಪ್ರಯಾಣ ದರಗಳು ಹೆಚ್ಚಾದಂತೆ ವೇತನ ಶ್ರೇಣಿಗಳ ಪರಿಷ್ಕರಣೆಯ ಜೊತೆಯಲ್ಲಿ ನಗರ ಪರಿಹಾರ ಭತ್ಯೆಯನ್ನು ಸಹ ಪರಿಷ್ಕರಿಸುವ ಅವಶ್ಯಕತೆ ಇರುತ್ತದೆ ಎಂದು ಆಯೋಗ ಹೇಳಿದೆ.

ಪ್ರಸ್ತುತ, ಬಿಬಿಎಂಪಿ ಮತ್ತು ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಪುರಸಭೆಗಳ ಅಧಿಕಾರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು ಹಾಗೂ ಬೆಳಗಾವಿ, ಮಂಗಳೂರು ಮತ್ತು ಮೈಸೂರು ನಗರ ಸಮುಚ್ಚಯ (ನ.ಸ) ಪರಿಮಿತಿಗಳ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವವರೂ ಸಹ ನಗರ ಪರಿಹಾರ ಭತ್ಯೆಗೆ ಅರ್ಹರಾಗುತ್ತಾರೆ.
ಶಿವಮೊಗ್ಗ, ದಾವಣಗೆರೆ, ತುಮಕೂರು, ವಿಜಯಪುರ ಮತ್ತು ಬಳ್ಳಾರಿ ನಗರಗಳನ್ನೂ ಸಹ ನಗರ ಪರಿಹಾರ ಭತ್ಯೆಯ ವ್ಯಾಪ್ತಿಗೆ ತರಬೇಕೆಂಬ ಮನವಿಯನ್ನು ಆಯೋಗಕ್ಕೆ ಮಾಡಲಾಗಿದೆ. ಮನೆ ಬಾಡಿಗೆ ಭತ್ಯೆಯ ವಿಷಯದಲ್ಲಿ ವಿವರಿಸಲಾದ ಕಾರಣಗಳಿಂದ, ಇಲ್ಲಿಯೂ ಸಹ, ಯಾವುದೇ ಬದಲಾವಣೆಯ ಅಗತ್ಯವಿಲ್ಲವೆಂದು ಮತ್ತು ಜಾರಿಯಲ್ಲಿರುವ ವರ್ಗೀಕರಣವನ್ನು ಮುಂದುವರೆಸಲು ಆಯೋಗವು ಶಿಫಾರಸ್ಸು ಮಾಡುತ್ತದೆ ಎಂದು ವರದಿ ಹೇಳಿದೆ.
ಆದಾಗ್ಯೂ, ನಗರದಲ್ಲಿನ ಜೀವನ ವೆಚ್ಚದ ನಿರ್ಧರಣೆಗೆ ಕಾರಣವಾಗುವ ವಿವಿಧ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು, ರಾಜ್ಯದಲ್ಲಿನ ವಿವಿಧ ನಗರಗಳಲ್ಲಿನ ವಿವಿಧ ಪ್ರವರ್ಗಗಳ ನೌಕರರಿಗೆ ಪರಿಷ್ಕೃತ ನಗರ ಪರಿಹಾರ ಭತ್ಯೆಯನ್ನು ಈ ಕೆಳಗಿನ ರೀತಿಯಲ್ಲಿ ಶಿಫಾರಸು ಮಾಡಲಾಗಿದೆ.
* ವರ್ಗ ಎ&ಬಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ). ಜಾರಿಯಲ್ಲಿರುವ ದರ 600 (ಮಾಸಿಕ ರೂ.ಗಳಲ್ಲಿ). ಶಿಫಾರಸು ಮಾಡಲಾದ ದರ 900 ರೂ.ಗಳು. ವರ್ಗ ಸಿ&ಡಿ, ಜಾರಿಯಲ್ಲಿರುವ ದರ 500 ರೂ.ಗಳು. ಶಿಫಾರಸು ಮಾಡಲಾದ ದರ 750 ರೂ.ಗಳು.
* ಕಲಬುರಗಿ, ಬೆಳಗಾವಿ (ನ.ಸ), ಹುಬ್ಬಳ್ಳಿ- ಧಾರವಾಡ (ನ.ಸ), ಮಂಗಳೂರು (ನ.ಸ), ಮೈಸೂರು (ನ.ಸ). ವರ್ಗ ಎ&ಬಿ, ಜಾರಿಯಲ್ಲಿರುವ ದರ 450 ರೂ.ಗಳು. ಶಿಫಾರಸು ಮಾಡಲಾದ ದರ 700 ರೂ.ಗಳು. ವರ್ಗ ಸಿ&ಡಿ, ಜಾರಿಯಲ್ಲಿರುವ ದರ 400 ರೂ.ಗಳು, ಶಿಫಾರಸು ಮಾಡಲಾದ ದರ 600 ರೂ.ಗಳು.
ಸಮವಸ್ತ್ರಕ್ಕೆ ಸಂಬಂಧಿಸಿದ ಭತ್ಯೆಗಳು: ಕೆಲವು ಪ್ರವರ್ಗಗಳ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಸಮವಸ್ತ್ರ ಧರಿಸುವುದನ್ನು ಮತ್ತು ಇತರರು ಔಪಚಾರಿಕ ಅಥವಾ ಶಿಷ್ಟಾಚಾರದ ಸಂದರ್ಭಗಳಲ್ಲಿ ಸಮವಸ್ತ್ರವನ್ನು ಧರಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಅಂತಹ ನೌಕರರು ಸಮವಸ್ತ್ರವನ್ನು ಖರೀದಿಸಿ ಅದನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಮತ್ತು ಸೂಕ್ತ ನಿರ್ವಹಣೆಗಾಗಿ ಸಮವಸ್ತ್ರ ಭತ್ಯೆಯನ್ನು ನೀಡಲಾಗುತ್ತದೆ. ಆಯೋಗವು ವಿವಿಧ ಇಲಾಖೆಗಳಿಗೆ ಮತ್ತು ವೃಂದಗಳಿಗೆ ಸಮವಸ್ತ್ರ ಭತ್ಯೆಯನ್ನು ಪರಿಷ್ಕರಣೆ ಮಾಡಿದ್ದು, ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಅನೇಕ ವರ್ಷಗಳಿಂದ ಸರ್ಕಾರದಿಂದ ಯಾವುದೇ ಪರಿಶೀಲನೆಯಾಗದೆ ಸಮವಸ್ತ್ರ ಭತ್ಯೆಯನ್ನು ಮುಂದುವರೆಸಲಾಗಿರುವುದನ್ನು ಆಯೋಗವು ಗಮನಿಸಿದೆ. ಸಿಆಸುಇ, ಆರ್ಥಿಕ ಇಲಾಖೆ ಮತ್ತು ಸಂಬಂಧಪಟ್ಟ ಆಡಳಿತಾತ್ಮಕ ಇಲಾಖೆಗಳು ಒಟ್ಟಾಗಿ ವಿವಿಧ ಪ್ರವರ್ಗಗಳ ನೌಕರರಿಗೆ ನೀಡಲಾಗುತ್ತಿರುವ ಸಮವಸ್ತ್ರ ಭತ್ಯೆಯ ಮುಂದುವರಿಕೆಯ ಅಗತ್ಯತೆಯ ಬಗ್ಗೆ ಪರಿಶೀಲಿಸಿ ಮತ್ತು ಸಮವಸ್ತ್ರ ಭತ್ಯೆಯನ್ನು ಅರ್ಹತೆಯಂತೆ ಪಡೆದು ಆದರೆ ವಾಸ್ತವವಾಗಿ ಸಮವಸ್ತ್ರವನ್ನು ಧರಿಸದ ನೌಕರರಿಗೆ ಭತ್ಯೆಯನ್ನು ರದ್ದುಗೊಳಿಸುವುದು ಅಗತ್ಯವೆಂದು ಆಯೋಗವು ಭಾವಿಸುತ್ತದೆ ಎಂದು ಹೇಳಿದೆ.












Click it and Unblock the Notifications