ಆರೇ ತಿಂಗಳಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ 77 ಅಪಘಾತಗಳು
ಬೆಂಗಳೂರು, ಡಿಸೆಂಬರ್ 28: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಕಳೆದ ಆರು ತಿಂಗಳಲ್ಲಿ 77 ಅಪಘಾತಗಳು ನಡೆದಿವೆ ಎಂದು ಪೊಲೀಸ್ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.
ಪೊಲೀಸ್ ಮಾಹಿತಿ ಪ್ರಕಾರ, ರಾಮನಗರ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತಗಳು ವರದಿಯಾಗಿದ್ದು, ಒಟ್ಟು 28 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 67 ಜನರು ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
₹ 8,453 ಕೋಟಿ ವೆಚ್ಚದ ಯೋಜನೆಯಾದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಮುಂದಿನ ವರ್ಷ ಮಾರ್ಚ್ನಲ್ಲಿ ಉದ್ಘಾಟನೆಯಾಗಲಿದೆಯಾದರೂ, ಉಳಿದ ಭಾಗವು ಇನ್ನೂ ಪೂರ್ಣಗೊಳ್ಳದ ಕಾರಣ ಬೆಂಗಳೂರಿನಿಂದ ಮಂಡ್ಯಕ್ಕೆ ವಾಹನಗಳನ್ನು ಓಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯಿಂದ ಯೋಜನೆ ಮಂಜೂರು ಮಾಡುವಲ್ಲಿ ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಮುಖ ಪಾತ್ರ ವಹಿಸಿದ್ದಾರೆ.
ಕೆಂಗೇರಿಯಿಂದ ಮೈಸೂರಿಗೆ ಎಕ್ಸ್ಪ್ರೆಸ್ವೇ ಪ್ರಸ್ತುತ 3.5 ಗಂಟೆಗಳ ಪ್ರಯಾಣವನ್ನು ಕೇವಲ 1.5 ಗಂಟೆಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ರಸ್ತೆಯು 118 ಕಿಲೋಮೀಟರ್ ಉದ್ದವನ್ನು ಹೊಂದಿದ್ದು, ಉದ್ಘಾಟನೆಗೂ ಮುನ್ನವೇ ವಾಹನಗಳ ಭಾರೀ ಸಂಚಾರಕ್ಕೆ ಸಾಕ್ಷಿಯಾಗಿದೆ. ಎನ್ಎಚ್ಎಐ ಅಧಿಕಾರಿಗಗಳು ಹೇಳುವಂತೆ ಎಕ್ಸ್ಪ್ರೆಸ್ವೇಯಲ್ಲಿ 16 ಅಪಘಾತ ವಲಯಗಳಿದೆ. ಆದರೆ ಅಧಿಕಾರಿಗಳು ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ.
ಹೊಸ ಎಕ್ಸ್ಪ್ರೆಸ್ವೇನಲ್ಲಿ ಅಪಘಾತಗಳ ಹೆಚ್ಚಳವನ್ನು ನಾವು ಗಮನಿಸಿದ್ದೇವೆ. ಅಪಘಾತಗಳನ್ನು ಕಡಿಮೆ ಮಾಡಲು ನಾವು 13 ಅಂಶಗಳ ಸಲಹೆಗಳನ್ನು ಎನ್ಎಚ್ಎಐ ಅಧಿಕಾರಿಗಳಿಗೆ ಕಳುಹಿಸಿದ್ದೇವೆ. ಚಾಲಕರ ನಿರ್ಲಕ್ಷ್ಯದಿಂದಲೇ ಎಲ್ಲ ಅಪಘಾತಗಳು ಸಂಭವಿಸಿವೆ ಎಂದು ರಾಮನಗರ ಎಸ್ಪಿ ಕೆ ಸಂತೋಷ್ ಬಾಬು ತಿಳಿಸಿದ್ದಾರೆ.
ಏತನ್ಮಧ್ಯೆ, ಎನ್ಎಚ್ಎಐ ಅಧಿಕಾರಿಗಳಿಗೆ ಪ್ರತಿ 500 ಮೀಟರ್ಗೆ ಸಿಸಿಟಿವಿ ಅಳವಡಿಸಲು ಮತ್ತು ಸೈನ್ಬೋರ್ಡ್ಗಳು ಮತ್ತು ವೇಗ ಮಿತಿಗಳನ್ನು ಅಳವಡಿಸಲು ಪೊಲೀಸರು ಸೂಚಿಸಿದ್ದಾರೆ. ಅಪಘಾತಗಳಿಗೆ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಕಾರಣ. ಎಕ್ಸ್ಪ್ರೆಸ್ವೇಯಲ್ಲಿ ಗರಿಷ್ಠ ವೇಗವು ಗಂಟೆಗೆ 100ಗೆ ಸೀಮಿತವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿ ಶ್ರೀಧರ್ ಹೇಳಿದ್ದಾರೆ.
ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ಅನೇಕ ವಾಹನ ಸವಾರರು ಈಗಾಗಲೇ ಗಂಟೆಗೆ 140ರಿಂದ 160 ಕಿಲೋಮೀಟರ್ ವೇಗದಲ್ಲಿ ವಾಹನಗಳನ್ನು ಓಡಿಸುವುದನ್ನು ನಾವು ಗಮನಿಸಿದ್ದೇವೆ. ಎಕ್ಸ್ಪ್ರೆಸ್ವೇ ಪೂರ್ಣಗೊಂಡ ನಂತರ ಪೊಲೀಸರು ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಾರೆ. ಇದು ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದರು.

ಪರೀಕ್ಷೆಯ ನಂತರವೇ ವಾಹನ ಓಡಾಟಕ್ಕೆ ಅನುಮತಿ
ರಸ್ತೆ ನಿರ್ಮಾಣ ಸಂಪೂರ್ಣ ವೈಜ್ಞಾನಿಕವಾಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೂ ಎಕ್ಸ್ ಪ್ರೆಸ್ ವೇ ನಿರ್ಮಾಣಕ್ಕೂ ಸಂಬಂಧವಿಲ್ಲ. ನಾವು ಸಂಪೂರ್ಣ ಪರೀಕ್ಷೆಯ ನಂತರವೇ ವಾಹನಗಳನ್ನು ರಸ್ತೆಯಲ್ಲಿ ಓಡಾಡಲು ಅನುಮತಿಸಿ ನೀಡಿದ್ದೇವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿ ಶ್ರೀಧರ್ ಅವರು ಹೇಳಿದರು.

ಒಟ್ಟು 118 ಕಿಲೋ ಮೀಟರ್ ರಸ್ತೆ ಕಣ್ಗಾವಲು
ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದ ನೆರವು ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರ ಮಾಡಿದೆ. ಒಟ್ಟು 118 ಕಿಲೋ ಮೀಟರ್ ರಸ್ತೆಯಲ್ಲಿ ಪ್ರತಿ 500 ಮೀಟರ್ ಪ್ರದೇಶದಲ್ಲಿ ಎಐ ನೆರವಿನ ಕ್ಯಾಮೆರಾಗಳು ಕಾರ್ಯನಿರ್ವಹಿಸಲಿವೆ. ಇಂಟಲಿಜೆನ್ಸ್ ಟ್ರಾನ್ಸ್ಪೋರ್ಟ್ ಸಿಸ್ಟಮ್ನಡಿ ರಸ್ತೆ ನಿರ್ವಹಣೆ ವ್ಯವಸ್ಥೆ ರೂಪಿಸಲು ಪ್ರಾಧಿಕಾರ ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಪ್ರತಿ ವಾಹನದ ಸಂಚಾರ ದಾಖಲು
ಪ್ರತಿ 500 ಮೀಟರ್ಗೆ ಒಂದರಂತೆ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಈ ಕ್ಯಾಮೆರಾಗಳು ಹೆದ್ದಾರಿಯ ಪ್ರತಿ ವಾಹನದ ಸಂಚಾರವನ್ನು ಸೆರೆ ಹಿಡಿಯಲಿವೆ. ಇದರಿಂದ ಹೆದ್ದಾರಿಯಲ್ಲಿ ಯಾವುದೇ ಪ್ರಕರಣ ನಡೆದರೂ, ಘಟನೆಯ ವಿಡಿಯೋಗಳು ಕಂಟ್ರೋಲ್ ರೂಂ, ಹೈವೆ ಪೆಟ್ರೋಲಿಯಂ, ಆ್ಯಂಬುಲೆನ್ಸ್, ಸ್ಥಳೀಯ ಪೊಲೀಸ್ ಠಾಣೆಗೆ ತಕ್ಷಣ ರವಾನೆ ಆಗಲಿದೆ. ಈ ಕ್ಯಾಮೆರಾಗಳು ಆಟೋಮೆಟಿಕ್ ಸೆನ್ಸಾರ್ ಮೂಲಕ ವಾಹನಗಳ ನಂಬರ್ ಪ್ಲೇಟ್, ವೇಗದ ನಿಯಂತ್ರಣ ಎಲ್ಲವನ್ನೂ ದಾಖಲಿಸಿಕೊಳ್ಳಲಿವೆ.

ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಿದರೆ ನೋಟೀಸ್
ಎಕ್ಸ್ಪ್ರೆಸ್ ವೇಯಲ್ಲಿ ನಿಗದಿಪಡಿಸಿರುವ ವೇಗದ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಓಡಿಸುವುದು, ಅನಗತ್ಯವಾಗಿ ಪದೆಪದೇ ಅವೈಜ್ಞಾನಿಕವಾಗಿ ಲೇನ್ ಬದಲಿಸುವುದು, ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವುದರೆ ನೋಟಿಸ್ ಜಾರಿಯಾಗಲಿದೆ. ಹೀಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಕೂಡಲೇ ಬಿಲ್ ಜನರೇಟ್ ಆಗಲಿದೆ. ನಂತರ ನಿಯಮ ಉಲ್ಲಂಘನೆ ಮಾಡಿದ ವಾಹನ ಮಾಲೀಕರಿಗೆ ನೋಟಿಸ್ ಜಾರಿಯಾಗಲಿದೆ. ಜೊತೆಗೆ ಅಪಘಾತದಲ್ಲಿ ಚಾಲಕನ ನಿರ್ಲಕ್ಷ್ಯ ಕಂಡು ಬಂದರೆ ಅಂತಹ ವಾಹನದ ವಿಮೆ ವಜಾಗೊಳ್ಳಲಿದೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗಿದೆ.












Click it and Unblock the Notifications