ರಾಜ್ಯಾದ್ಯಂತ ಸಂಭ್ರಮ, ಹೆಮ್ಮೆಯ ಸ್ವಾತಂತ್ರ್ಯೋತ್ಸವ ಆಚರಣೆ
ಬೆಂಗಳೂರು, ಆಗಸ್ಟ್ 15: ಇಂದು ಭಾರತಕ್ಕೆ 73ನೇ ಸ್ವಾತಂತ್ರ್ಯೋತ್ಸವ. ದೇಶದೆಲ್ಲೆಡೆ ಅದ್ಧೂರಿಯಾಗಿ ಸ್ವಾತಂತ್ರ್ಯದ ಸಂಭ್ರಮಾಚರಣೆ ನಡೆಯುತ್ತಿದೆ. ಜಮ್ಮುವಿನಿಂದ ಹಿಡಿದು ಕನ್ಯಾಕುಮಾರಿವರೆಗೆ ಭಾರತದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕಮಾದರಿಯ ಸ್ವಾತಂತ್ರ್ಯ ದಿನಾಚರಣೆ ಜರುಗಿದೆ.
ಕರ್ನಾಟಕದಲ್ಲಿಯೂ ಎಲ್ಲಾ ಜಿಲ್ಲೆಗಳಲ್ಲಿ ಸ್ವಾತಂತ್ರ್ಯೋತ್ಸವವನ್ನು ಹೆಮ್ಮೆ, ಸಂಭ್ರಮದಿಂದ ಆಚರಿಸಲಾಗಿದೆ. ಪ್ರವಾಹ, ಸುರಿವ ಮಳೆಯ ನಡುವೆಯೂ ದೇಶಾಭಿಮಾನವನ್ನು ಮರೆದಿದ್ದಾರೆ. ಈ ಬಾರಿ ಜಿಲ್ಲಾಕೇಂದ್ರಗಳಲ್ಲಿ ಡಿಸಿಗಳು, ಉಪವಿಭಾಗಗಳಲ್ಲಿ ಉಪ ವಿಭಾಗಾದಿಕಾರಿಗಳು, ತಾಲೂಕುಗಳಲ್ಲಿ ತಹಶೀಲ್ದಾರ್ ಗಳಿಗೆ ಧ್ವಜಾರೋಹಣ ಮಾಡುವಂತೆ ಯಡಿಯೂರಪ್ಪ ಸೂಚನೆ ಹೊರಡಿಸಿದ್ದರು.

ಉದ್ಯೋಗ ಸೃಷ್ಟಿಯ ಭರವಸೆ
ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ, "ರಾಮನಗರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಸತ್ತೆಗಾಲ ಯೋಜನೆಗೆ 540 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಅನುದಾನ ನೀಡಿದೆ. ಈ ಯೋಜನೆಯಿಂದಾಗಿ ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳಿಗೂ ಕುಡಿಯುವ ನೀರು ಲಭ್ಯವಾಗಲಿದೆ. ಜೊತೆಗೆ ಜಿಲ್ಲೆಯಲ್ಲಿ ನೂತನ ತಾಲೂಕು ಕೇಂದ್ರವಾಗಿ ಹಾರೋಹಳ್ಳಿ ಘೋಷಣೆಯಾಗಿದ್ದು ಆ ಕ್ಷೇತ್ರದಲ್ಲಿ ಎಲ್ಲಾ ಮೂಲ ಸೌಕರ್ಯವನ್ನು ಕಲ್ಪಿಸುವ ಜೊತೆಗೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶವಾಗಿರುವ ಕಾರಣ ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗ ಸೃಷ್ಟಿಸಲಾಗುವುದು" ಎಂದು ತಿಳಿಸಿದರು.
ವಿವಿಧ ಶಾಲೆಯಿಂದ ಆಗಮಿಸಿದ್ದ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಿದರು.
ದೇಶದೆಲ್ಲೆಡೆ 73ನೇ ಸ್ವಾತಂತ್ರ್ಯ ಹಬ್ಬದ ಸಂಭ್ರಮ: ಚಿತ್ರಗಳು

ಪ್ರವಾಹದ ನಡುವೆಯೂ ಸ್ವಾತಂತ್ರ್ಯದ ಹೆಮ್ಮೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಧಾರಾಕಾರ ಮಳೆಯ ನಡುವೆಯೇ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಧ್ವಜಾರೋಹಣ ನೆರವೇರಿಸಿದರು. ಮಳೆ ನಡುವೆ ಕೊಡೆ ಹಿಡಿದುಕೊಂಡು ಧ್ವಜಾರೋಹಣ ನೇರವೇರಿಸಿದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
"ರಾಜ್ಯದಲ್ಲಿ 100 ವರ್ಷಗಳಲ್ಲಿ ಕಂಡೂಕೇಳರಿಯದ ನೆರೆ ಪ್ರವಾಹ ಉಂಟಾಗಿದೆ. ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗಿದೆ. ಜನಸಾಮಾನ್ಯರ ಬದುಕು ಬೀದಿ ಪಾಲಾಗಿ ಸಂಕಷ್ಟದಲ್ಲಿದ್ದು, ಅವರಿಗೆ ಪುನರ್ವಸತಿ ಸಂಬಂಧಿಸಿದಂತೆ ಜಿಲ್ಲೆಯ ಜನರು ನೆರವು ನೀಡಿ ಸರ್ಕಾರದ ಜೊತೆ ಸಹಕರಿಸಬೇಕು" ಎಂದು ಅವರು ಮನವಿ ಮಾಡಿದರು.

ಸ್ವಾತಂತ್ರ್ಯೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ
ಕಾರವಾರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣವನ್ನು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ನೆರವೇರಿಸಿದರು. ಧ್ವಜವು ಕಟ್ಟಿದ ದಾರದಿಂದ ಬಿಡಿಸಿಕೊಂಡು ಹಾರದೇ, ಅಧಿಕಾರಿಗಳು ತಬ್ಬಿಬ್ಬಾದ ಘಟನೆಯೂ ಈ ವೇಳೆ ನಡೆಯಿತು. ಧ್ವಜಕ್ಕೆ ಕಟ್ಟಿದ ದಾರವು ಮಳೆಯಿಂದಾಗಿ ಬಿಗುವಾಗಿದ್ದರಿಂದ ಧ್ವಜಾರೋಹಣ ಮಾಡಿದಾಗ ಧ್ವಜ ಹಾರಲಿಲ್ಲ. ಹೀಗಾಗಿ ಮತ್ತೆ ಧ್ವಜವನ್ನು ಕೆಳಗಿಳಿಸಿಕೊಂಡು ಬಿಡಿಸಿ, ಮತ್ತೆ ಮೇಲಕ್ಕೆ ಏರಿಸಲಾಯಿತು. ಎರಡು ಬಾರಿ ರಾಷ್ಟ್ರಗೀತೆಯನ್ನು ಹಾಡಲಾಯಿತು.
ಧ್ವಜಾರೋಹಣ ನಂತರ ಜನತೆಗೆ ಸಂದೇಶ ನೀಡಿದ ಜಿಲ್ಲಾಧಿಕಾರಿ ಹರೀಶಕುಮಾರ್, "ಸ್ವಾತಂತ್ರ್ಯ ನಂತರದ ಏಳು ದಶಕಗಳಲ್ಲಿ ವಿಶ್ವ ಭೂಪಟದಲ್ಲಿ ಭಾರತ ಪಡೆದ ಸ್ಥಾನ ಭಾರತೀಯರೆಲ್ಲರು ಹೆಮ್ಮೆ ಪಡುವಂತಾಗಿದೆ. ಜಗತ್ತಿನ ಆರು ನಾಗರೀಕರಲ್ಲಿ ಒಬ್ಬ ಭಾರತೀಯ ಎಂಬುದು ವಿಶ್ವದಲ್ಲಿ ನಮ್ಮ ಸ್ಥಾನ ಏನು ಎಂಬುದನ್ನು ಮನದಟ್ಟು ಮಾಡುತ್ತಿದೆ" ಎಂದರು.
"ಪ್ರಾಕೃತಿಕ ವಿಕೋಪ ಮಾನವನ ನಿಯಂತ್ರಣಕ್ಕೆ ನಿಲುಕದ್ದು. ಪ್ರವಾಹ ಸಂದರ್ಭದಲ್ಲಿ ಜಿಲ್ಲೆಯ ಜನರು ಸಾಕಷ್ಟು ನೋವು ಅನುಭವಿಸಿದ್ದು, ಜಿಲ್ಲಾಡಳಿತದೊಂದಿಗೆ ಧೈರ್ಯದಿಂದ ನಿಂತು ಸಂತ್ರಸ್ತರ ನೆರವಿಗೆ ಧಾವಿಸಿ ಬಂದರು. ಜಿಲ್ಲಾಡಳಿತ ತನ್ನ ಶಕ್ತಿ ಮೀರಿ ಅಗತ್ಯ ನೆರವು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಿದೆ" ಎಂದು ತಿಳಿಸಿದರು.
ಸಾಧಕರಿಗೆ ಸನ್ಮಾನ: ಎಸ್ಸೆಸ್ಸೆಲ್ಸಿಯಲ್ಲಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಕಳೆದ ವರ್ಷ ಜಿಲ್ಲೆಗೆ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಲ್ಯಾಪ್ ಟಾಪ್ ವಿತರಿಸಿದರು. ಪರೇಡ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ದ್ವಿತೀಯ ಸ್ಥಾನ ಗಳಿಸಿದ ಸೈಂಟ್ ಮೈಕಲ್ ಹೈಸ್ಕೂಲ್ ಕಾರವಾರ ಹಾಗೂ ತೃತೀಯ ಸ್ಥಾನ ಗಳಿಸಿದ ಶಿವಾಜಿ ಗಂಡು ಮಕ್ಕಳ ಪ್ರೌಢ ಶಾಲೆ ತಂಡಕ್ಕೆ ಪ್ರಶಸ್ತಿ ವಿತರಿಸಲಾಯಿತು.

ವೀರನಾಡಲ್ಲಿ ಸ್ವತಂತ್ರ ಸಂಭ್ರಮ
ಕೋಟೆ ನಾಡು ಚಿತ್ರದುರ್ಗದಲ್ಲಿ ಸ್ವಾತಂತ್ರ್ಯೋತ್ಸವದ ಅದ್ಧೂರಿಯಾಗಿ ಜರುಗಿತು. ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಧ್ವಜಾರೋಹಣ ನೆರವೇರಿಸಿದರು. ಜಿಲ್ಲೆಯ ತಾಲೂಕುಗಳಲ್ಲಿ ತಾಲೂಕು ದಂಡಾಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಧ್ವಜಾರೋಹಣ ನೆರವೇರಿಸಿ, ಶಾಲಾ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಗೌರವಿಸಲಾಯಿತು. ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು ಸೇರಿದಂತೆ ಆಯಾ ಕ್ಷೇತ್ರದ ಶಾಸಕರು ಸ್ವಾತಂತ್ರೋತ್ಸವದ ಕುರಿತು ಮಾತನಾಡಿದರು.











Click it and Unblock the Notifications