ಶೆ.73 ಮಂದಿ ಉಕ್ಕಿನ ಸೇತುವೆ ಬೇಕು ಎಂದಿದ್ದಾರೆ: ಸಿದ್ದರಾಮಯ್ಯ
ಮಂಗಳೂರು, ಅಕ್ಟೋಬರ್. 30: ಬಂಟ್ವಾಳದಲ್ಲಿ ನಿರ್ಮಾಣಗೊಂಡಿರುವ ಬಂಟರ ಸಂಘ ಭವನವನ್ನು ಉದ್ಘಾಟನೆ ಮಾಡಲು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರೊಂದಿಗೆ ಮಾತನಾಡಿ ಕರಾವಳಿಗೆ ಪತ್ಯೇಕ ಮರಳು ನೀತಿಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ನವೆಂಬರ್ 3ರಂದು ಸಭೆ ಕರೆಯುವುದಾಗಿ ತಿಳಿಸಿದರು.
ಮುಂದಿನ ಎರಡು ದಿನಗಳೊಳಗೆ ನಿಗಮ, ಮಂಡಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಹೇಳಿದ ಮುಖ್ಯಮಂತ್ರಿ ಅವರು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ ಎಂದರು.

ಬೆಂಗಳೂರಿನಲ್ಲಿ ಸುಮಾರು 1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಉಕ್ಕಿನ ಸೇತುವೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ವಿರೋಧ ವ್ಯಕ್ತಪಡಿಸಿರುವುದರ ಬಗ್ಗೆ ಕೇಳಿದಾಗ, ಡಿ.ವಿ.ಸದಾನಂದ ಗೌಡರ ಕಾಲದಲ್ಲೇಈ ಯೋಜನೆ ಪ್ರಾರಂಭಗೊಂಡಿದ್ದು, ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಉಕ್ಕಿನ ಸೇತುವೆ ನಿರ್ಮಾಣ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಲಾಗಿದ್ದು, ಶೇ. 73 ಮಂದಿ ಉಕ್ಕಿನ ಸೇತುವೆ ಬೇಕು ಎಂದಿದ್ದಾರೆ. ಪ್ರಸ್ತುತ ಯೋಜನೆಯನ್ನು ತಾನು ಮಂಡಿಸಿದ ಆಯ-ವ್ಯಯದಲ್ಲಿ ಘೋಷಣೆ ಮಾಡಿದಾಗ ವಿರೋಧ ವ್ಯಕ್ತಪಡಿಸದ ಬಿಜೆಪಿಯವರು ಈಗ ಯಾಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಸುಳ್ಳು ಮಾತಾಡುವುದೇ ಅವರ ಕಾಯಕವಾಗಿದೆ ಎಂದರು.
ಆರೆಸೆಸ್ ಕಾರ್ಯಕರ್ತರ ರುದ್ರೇಶ್ ಹತ್ಯೆಯ ಹಿಂದೆ ಪಿಎಫ್ಐ ಕೈವಾಡದ ಬಗ್ಗೆ ಪ್ರಕ್ರಿಯೆ ನೀಡಿದ ಮುಖ್ಯಮಂತ್ರಿ ಇದು ಇನ್ನೂ ದೃಢಪಟ್ಟಿಲ್ಲ ಎಂದರು.
ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆ ಬಗ್ಗೆ ಪ್ರಶ್ನಿಸಿದಾಗ, ಅವರು ಪಕ್ಷವನ್ನು ತೊರೆದಿರುವಾಗ ಯಾವ ಪಕ್ಷ ಸೇರ್ಪಡೆಗೊಂಡರೂ ನಮಗೆ ಸಂಬಂಧವಿಲ್ಲ ಎಂದರು.












Click it and Unblock the Notifications