ನಾಳೆ (ಜ.13) ಸಚಿವ ಸಂಪುಟ ಸೇರುವವರ EXCLUSIVE ಪಟ್ಟಿ ಇಲ್ಲಿದೆ!
ಬೆಂಗಳೂರು, ಜ. 12: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು, ನಾಳೆ ಸಂಜೆ ರಾಜಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ 7 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತಮ್ಮನ್ನು ನಂಬಿ ಬಂದವರಿಗೆ ಮಂತ್ರಿಸ್ಥಾನ ಕೊಡಿಸಲು ಕಳೆದ ಆರು ತಿಂಗಳುಗಳಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು.
ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆ, ಬಳಿಕ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಎರಡು ಬಾರಿ ಹೈಕಮಾಂಡ್ ಕದ ತಟ್ಟಿ ಬರಿಗೈಲಿ ವಾಪಸಾಗಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಮೂರನೇ ಬಾರಿ ಪಕ್ಷದ ವರಿಷ್ಠರು ನಿರಾಸೆ ಮಾಡಿಲ್ಲ.
ಸದ್ಯ 7 ಮಂತ್ರಿಸ್ಥಾನಗಳು ಖಾಲಿಯಿವೆ. ಹೀಗಾಗಿ ಈ ಎಲ್ಲ ಸ್ಥಾನಗಳಿಗೆ ಮಂತ್ರಿಗಳನ್ನು ನೇಮಕ ಮಾಡುವ ಮೂಲಕ ಪೂರ್ಣ ಪ್ರಮಾಣದ ಮಂತ್ರಿ ಮಂಡಲ ರಚನೆ ಮಾಡಲು ಸಿಎಂ ಯಡಿಯೂರಪ್ಪ ಅವರು ಮುಂದಾಗಿದ್ದಾರೆ ಎನ್ನಲಾಗಿದೆ. ಮಂತ್ರಿಮಂಡಲ ಸೇರಲಿರುವ 7 ಸಂಭಾವ್ಯ ಸಚಿವರ ಪಟ್ಟಿ ಮುಂದಿದೆ.

ರಾಜ್ಯಪಾಲರನ್ನು ಭೇಟಿ ಮಾಡಿದ ಯಡಿಯೂರಪ್ಪ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಂಕ್ರಾಂತಿಗೂ ಮೊದಲೇ ಬಿಜೆಪಿ ಹೈಕಮಾಂಡ್ ಸಿಹಿಸುದ್ದಿ ಕೊಟ್ಟಿದೆ. ನಾಳೆ (ಜ.13) ಸಂಜೆ 4 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲ ವಜೂಭಾಯಿ ವಾಲಾ ಅವರು ಪ್ರಮಾಣವಚನ ಬೋಧನೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟು, ಪ್ರಮಾಣ ವಚನ ಬೋಧನೆ ಮಾಡುವಂತೆ ಸಿಎಂ ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಎಲ್ಲರಿಗೂ ಸಂಪುಟ ದರ್ಜೆ
ನಾಳೆ ನಡೆಯುವ ಸರಳ ಕಾರ್ಯಕ್ರಮದಲ್ಲಿ 6 ಅಥವಾ 7 ಜನರು ಯಡಿಯೂರಪ್ಪ ಅವರ ಮಂತ್ರಿ ಮಂಡಲ ಸೇರಲಿದ್ದಾರೆ. ಸಂಪುಟ ಸೇರುವ ಎಲ್ಲರಿಗೂ ಸಂಪುಟ ದರ್ಜೆ ಕೊಡಲು ಯಡಿಯೂರಪ್ಪ ಅವರು ತೀರ್ಮಾನ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ನಾಳೆ ಕನಿಷ್ಠ 6 ಜನರು ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಮೊದಲೇ ತೀರ್ಮಾನವಾಗಿರುವಂತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರಿಗೆ ಮೊದಲ ಆದ್ಯತೆಯನ್ನು ಯಡಿಯೂರಪ್ಪ ಕೊಟ್ಟಿದ್ದಾರೆ ಎನ್ನಲಾಗಿದೆ.

ವಲಸಿಗರಿಗೆ ಮತ್ತೆ ಆದ್ಯತೆ
ರಾಣಿಬೆನ್ನೂರು ಪಕ್ಷೇತರ ಶಾಸಕರಾಗಿದ್ದ ಆರ್. ಶಂಕರ್ ಈಗ ವಿಧಾನ ಪರಿಷತ್ ಬಿಜೆಪಿ ಸದಸ್ಯರು. ಅವರು ನಾಳೆ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಖಚಿತವಾಗಿದೆ. ಜೊತೆಗೆ ಬಿಜೆಪಿ ಸರ್ಕಾರ ಬರಲು ಕಾರಣವಾಗಿರುವ ಎಂ.ಟಿ.ಬಿ. ನಾಗರಾಜ್ ಹಾಗೂ ಆರ್.ಆರ್. ನಗರ ಶಾಸಕ ಮುನಿರತ್ನ ಅವರು ಸಂಪುಟ ಸೇರಲಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವಾಗ ಮಹತ್ವದ ಪಾತ್ರ ವಹಿಸಿದ್ದ ಬಿಜೆಪಿಯ ನಾಯಕ ಸಿ.ಪಿ. ಯೋಗೇಶ್ವರ್ ಅವರೂ ಸಂಪುಟ ಸೇರಲಿದ್ದಾರೆ.

ಬಿಜೆಪಿಯಿಂದ ಸಂಪುಟ ಸೇರುವವರು
ಉಳಿದಂತೆ ಬಿಜೆಪಿ ಹಿರಿಯ ಶಾಸಕರಾದ ಉಮೇಶ್ ಕತ್ತಿ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದಿಂದ 6 ಬಾರಿ ಶಾಸಕರಾಗಿರುವ ಎಸ್. ಅಂಗಾರ ಅವರು ಯಡಿಯೂರಪ್ಪ ಅವರ ಸಂಪುಟ ಸೇರುವ ಪ್ರಮುಖರು ಎನ್ನಲಾಗಿದೆ. ಖಾಲಿ ಇರುವ 7ನೇ ಮಂತ್ರಿಸ್ಥಾನವನ್ನು ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಅವರಿಗೆ ಮೀಸಲಾಗಿಡಲು ತೀರ್ಮಾನ ಮಾಡಲಾಗಿದೆ. ಹೀಗಾಗಿ ಸಂಪುಟದಿಂದ ಯಾರನ್ನಾದರೂ ಕೈಬಿಟ್ಟಲ್ಲಿ ಅವರ ಬದಲಿಗೆ ಬಿಜೆಪಿ ಹಿರಿಯ ಶಾಸಕರಾದ ಹಾಲಪ್ಪ ಆಚಾರ್, ಅರವಿಂದ ಲಿಂಬಾವಳಿ ಅಥವಾ ಪೂರ್ಣಿಮಾ ಶ್ರೀನಿವಾಸ್ ಅವರಲ್ಲಿ ಒಬ್ಬರು ಸಂಪುಟ ಸೇರಲಿದ್ದಾರೆ.

ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕ
ಮಂತ್ರಿಸ್ಥಾನ ಕಳೆದುಕೊಳ್ಳುವ ಆತಂಕದ ಹಿನ್ನೆಲೆಯಲ್ಲಿ ಅಬಕಾರಿ ಸಚಿವ ಎಚ್. ನಾಗೇಶ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಇಂದು (ಜ.12) ಬೆಳಿಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಅಬಕಾರಿ ಸಚಿವ ನಾಗೇಶ್ ಅವರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ತಮ್ಮನ್ನು ಸಂಪುಟದಿಂದ ಕೈ ಬಿಡದಂತೆ ನಾಗೇಶ್ ಅವರು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.












Click it and Unblock the Notifications