ಶಿಥಿಲಾವಸ್ಥೆಯಲ್ಲಿವೆ ರಾಜ್ಯದ 56 ಸೇತುವೆಗಳು; ಎಚ್ಚೆತ್ತುಕೊಳ್ಳದ ಸರ್ಕಾರಿ ಅಧಿಕಾರಿಗಳು
ಬೆಂಗಳೂರು, ನ.17: ಕಳೆದ ತಿಂಗಳು ಗುಜರಾತ್ನ ಮೊರ್ಬಿಯಲ್ಲಿ ನಡೆದ ಸೇತುವೆ ದುರಂತ ಇನ್ನು ನೆನಪಿನಿಂದ ಮಾಸುವ ಮುನ್ನವೇ ರಾಜ್ಯದಲ್ಲಿ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ.
ರಾಜ್ಯದ ಸುಮಾರು 56 ಸೇತುವೆಗಳು ಶಿಥಿಲಾವಸ್ಥೆಯಲ್ಲಿ ಇದೆ ಎಂಬ ಮಾಹಿತಿ ಬೆಳಕಿಗೆ ಬಂದೆ. ಇದರಲ್ಲಿ ಆತಂಕಕಾರಿ ವಿಷಯವೆಂದರೆ ಅವುಗಳಲ್ಲಿ ಹೆಚ್ಚಿನವು ಸಾರ್ವಜನಿಕರು ಬಳಸುತ್ತಿರುವುದು.
ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಡಿಯಲ್ಲಿ ರಸ್ತೆ ಕಾಮಗಾರಿ, ನಿರ್ಮಾಣ ಮತ್ತು ಸೇತುವೆಗಳ ಪುನರಾಭಿವೃದ್ಧಿಯನ್ನು ಕೈಗೊಂಡು ಮೂಲಸೌಕರ್ಯವನ್ನು ಉತ್ತೇಜಿಸಲು ಸ್ಥಾಪಿಸಲಾದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ (KRDCL) ಕಂಪನಿಯು ಈ ಸೇತುವೆಗಳನ್ನು ಬಲಪಡಿಸಲು ಶಿಫಾರಸು ಮಾಡಿದೆ. ಶಿಥಿಲಾವಸ್ಥೆಯಲ್ಲಿರುವ ಅವುಗಳಲ್ಲಿ ಹೆಚ್ಚಿನವು ಬಳಕೆಯಲ್ಲಿವೆ.
2022-23ರ ಬಜೆಟ್ ಅಧಿವೇಶನದಲ್ಲಿ ಮಾಡಿದ ಘೋಷಣೆಯಂತೆ ಸೇತುವೆಗಳ ಸ್ಥಿತಿಯ ಕುರಿತು ವಿವರವಾದ ಕಾರ್ಯಸಾಧ್ಯತಾ ವರದಿಯನ್ನು (ಡಿಎಫ್ಆರ್) ತಯಾರಿಸಲು ರಾಜ್ಯ ಸರ್ಕಾರ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಸೂಚಿಸಿತ್ತು.

ಬಲಿಗಾಗಿ ಕಾಯುತ್ತಿವೆ ರಾಜ್ಯದ 56 ಸೇತುವೆಗಳು!
"ನಾವು ಮೂರು ತಿಂಗಳ ಹಿಂದೆ ಸೇತುವೆಗಳ ಸ್ಥಿತಿಯ ಕುರಿತು ವಿವರವಾದ ವರದಿಯನ್ನು ಸಿದ್ಧಪಡಿಸಿದ್ದೇವೆ. ಅದನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಆದರೆ ಸರ್ಕಾರ ಇನ್ನೂ ಬಜೆಟ್ಗೆ ಅನುಮೋದನೆ ನೀಡಿಲ್ಲ.
ಶಿಥಿಲಾವಸ್ಥೆಯಲ್ಲಿರುವ ಈ 56 ಸೇತುವೆಗಳಲ್ಲಿ ಕೆಲವು ಸೇತುವೆಗಳ ಮೇಲೆ ವಾಹನಗಳನ್ನು ಓಡಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ, ಇನ್ನು ಕೆಲವು ವಾಹನಗಳ ಓಡಾಟಕ್ಕೆ ಮುಕ್ತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇತುವೆ ಬಳಕೆ ಪ್ರಾಣಹಾನಿಗೂ ಕಾರಣವಾಗುವ ಆತಂಕ
ಈ ಸೇತುವೆಗಳ ಬಳಕೆಯು ಪ್ರಾಣಾಪಾಯ ಮತ್ತು ಅಂಗಾಂಗಗಳಿಗೆ ಅಪಾಯವನ್ನುಂಟು ಮಾಡಬಹುದು ಎಂದು ಅಧಿಕಾರಿ ಒಪ್ಪಿಕೊಂಡಿದ್ದಾರೆ. ''ಈ ಸೇತುವೆಗಳಲ್ಲಿ ಹೆಚ್ಚಿನವು 50 ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟಿವೆ. ಹೆಚ್ಚಿದ ವಾಹನಗಳ ಬಳಕೆಯಿಂದಾಗಿ ದುರ್ಬಲಗೊಂಡಿವೆ. ಈಗ ನಾವು ಕೆಲವು ಹೊಸ ಮಾರ್ಗಗಳನ್ನು ಹುಡುಕಬೇಕು, ಈ ಸೇತುವೆಗಳನ್ನು ಮತ್ತೆ ನಿರ್ಮಿಸಬೇಕು" ಎಂದಿದ್ದಾರೆ.
ಹಲವು ಸೇತುವೆಗಳು ಜಿಲ್ಲೆ ಜಿಲ್ಲೆಗಳ ನಡುವೆ ನಿರ್ಣಾಯಕ ಸಂಪರ್ಕವನ್ನು ಒದಗಿಸುತ್ತಿವೆ. ಇವುಗಳನ್ನು ಸಂಪೂರ್ಣವಾಗಿ ಮುಚ್ಚುವುದು ಕಷ್ಟಸಾಧ್ಯ. ಆದ್ದರಿಂದ ಅಧಿಕಾರಿಗಳು ಅವುಗಳನ್ನು ವಾಹನಗಳ ಸಂಚಾರಕ್ಕೆ ಮುಕ್ತವಾಗಿಸಿದ್ದಾರೆ. ಆದರೆ, ಕಾಮಗಾರಿ ಮಂಜೂರಾದಾಗ ಮಾತ್ರ ಮುಚ್ಚಲಾಗುತ್ತದೆ.

ಪ್ರತಿ ಸೇತುವೆಯ ಮಣ್ಣಿನ ತನಿಖೆಯನ್ನು ನಡೆಸಿರುವ ಅಧಿಕಾರಿಗಳು
ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣಾ ಕೇಂದ್ರವು ಸಿದ್ಧಪಡಿಸಿದ ಸೇತುವೆಯ ಸ್ಥಿತಿ ಸೂಚ್ಯಂಕದ ಆಧಾರದ ಮೇಲೆ 56 ಸೇತುವೆಗಳನ್ನು ಶಿಥಿಲಾವಸ್ಥೆಯಲ್ಲಿವೆ ಎಂದು ಪಟ್ಟಿ ಮಾಡಲಾಗಿದೆ.
''ಕೇಂದ್ರವು ಸೇತುವೆಗಳ ಸ್ಥಿತಿಯನ್ನು ನಿಯಮಿತವಾಗಿ ಅಧ್ಯಯನ ಮಾಡುತ್ತದೆ. ಅವುಗಳ ಸ್ಥಿರತೆ ಮತ್ತು ಸಾಮರ್ಥ್ಯದ ಬಗ್ಗೆ ವರದಿಯನ್ನು ಸಿದ್ಧಪಡಿಸುತ್ತದೆ. ಈ ವರದಿಯ ಆಧಾರದ ಮೇಲೆ ಹೆಚ್ಚಿನ ಸೇತುವೆಗಳನ್ನು ಪಟ್ಟಿ ಮಾಡಲಾಗಿದ್ದರೆ, ಕೆಲವು ರಾಜಕೀಯ ಪ್ರಭಾವದ ಕಾರಣದಿಂದ ಪಟ್ಟಿ ಮಾಡಲಾಗಿದೆ" ಎಂದು ಅಧಿಕಾರಿ ವಿವರಿಸಿದ್ದಾರೆ.
ವರದಿಯು ಸಂಚಾರ ಸಾಂದ್ರತೆಯನ್ನು ಅಧ್ಯಯನ ಮಾಡಿದೆ ಮತ್ತು ತಾಂತ್ರಿಕ ಮಧ್ಯಸ್ಥಿಕೆಗಳನ್ನು ಸೂಚಿಸಿದೆ ಎಂದು ಕೆಆರ್ಡಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ ಆರ್ ತಿಳಿಸಿದ್ದಾರೆ.
''ನಾವು ಪ್ರತಿ ಸೇತುವೆಯ ಮಣ್ಣಿನ ತನಿಖೆಯನ್ನು ನಡೆಸಿದ್ದೇವೆ. ಪುನರಾಭಿವೃದ್ಧಿ ಸಮಯದಲ್ಲಿ ಅಳವಡಿಸಿಕೊಳ್ಳಬೇಕಾದ ತಾಂತ್ರಿಕ ವಿನ್ಯಾಸಗಳನ್ನು ಸಹ ವರದಿ ಶಿಫಾರಸು ಮಾಡಿದೆ'' ಎಂದು ಶಿವಪ್ರಸಾದ್ ತಿಳಿಸಿದ್ದಾರೆ.

ಶಿಥಿಲಾವಸ್ಥೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ,ಉಡುಪಿಯ ಸೇತುವೆಗಳು
ಒಂದು ಅಂದಾಜಿನ ಪ್ರಕಾರ, ಈ ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಮರುಸ್ಥಾಪನೆ ಮಾಡಲು 1,350 ಕೋಟಿ ರೂಪಾಯಿ ಬೇಕಾಗುತ್ತದೆ.
ಯೋಜನೆಗೆ ಅನುಮೋದನೆ ದೊರೆತು ಹಣ ಮಂಜೂರಾದರೆ ಕಾಮಗಾರಿ ಆರಂಭವಾಗಲು ಕನಿಷ್ಠ ಆರು ತಿಂಗಳು ಬೇಕಾಗುತ್ತದೆ. ಸೇತುವೆಯನ್ನು ಅಭಿವೃದ್ಧಿಪಡಿಸಲು ಮೂರು ವರ್ಷಗಳವರೆಗೆ ತೆಗೆದುಕೊಳ್ಳಬಹುದು.
ಶಿಥಿಲಾವಸ್ಥೆಯಲ್ಲಿರುವ ಹೆಚ್ಚಿನ ಸೇತುವೆಗಳು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿವೆ.
ತಕ್ಷಣ ಬಲಪಡಿಸುವ ಅಗತ್ಯವಿರುವ ಪ್ರಮುಖ ಸೇತುವೆಗಳು ಇಲ್ಲಿವೆ.
1. ಧಾರವಾಡ ಜಿಲ್ಲೆಯ ಉಪ್ಪಿನಬೆಟ್ಟಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 01 ಬಳಿಯ ಸೇತುವೆ
2. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 46
3. ರಾಮದುರ್ಗ, ಬೆಳಗಾವಿ ಜಿಲ್ಲೆ ಬಳಿ ರಾಷ್ಟ್ರೀಯ ಹೆದ್ದಾರಿ 34
4. ಬಾಗಲಕೋಟೆಯ ಮುಧೋಳ ಬಳಿಯ ರಾಷ್ಟ್ರೀಯ ಹೆದ್ದಾರಿ 55
5. ಬೆಳಗಾವಿ ಜಿಲ್ಲೆಯ ಲೋಲಸೂರು ಬಳಿಯ ರಾಷ್ಟ್ರೀಯ ಹೆದ್ದಾರಿ 31
(ಮಾಹಿತಿ ಕೃಪೆ: ಡೆಕ್ಕನ್ ಹೆರಾಲ್ಡ್)












Click it and Unblock the Notifications