ರಾಜಕೀಯ ವಿಶೇಷ; ಪಂಚ ಅಂಶಗಳು ಜೆಡಿಎಸ್ಗೆ ವರದಾನವಾಗುತ್ತಾ?
ಬೆಂಗಳೂರು, ಡಿಸೆಂಬರ್ 30; 2023ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷ ಈಗಿನಿಂದಲೇ ತಯಾರಿ ನಡೆಸಿದ್ದು, ಪಂಚ ಅಂಶಗಳನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.
ಒಂದೆಡೆ ಪಕ್ಷ ಬಿಟ್ಟು ಬೇರೆ ಪಕ್ಷಗಳತ್ತ ಮುಖ ಮಾಡಿರುವ ನಾಯಕರು. ಮತ್ತೊಂದೆಡೆ ಒಕ್ಕಲಿಗರ ಮತ ಸೆಳೆಯಲು ತಂತ್ರ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್. ಇಂತಹ ಪರಿಸ್ಥಿತಿಯಲ್ಲಿಯೂ 2023ರ ವಿಧಾನಸಭಾ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಜೆಡಿಎಸ್ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಕನಸನ್ನು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕಾಣುತ್ತಿದ್ದಾರೆ.
ಈ ಬಾರಿಯ ಚುನಾವಣೆ ಜೆಡಿಎಸ್ ಪಕ್ಷದ ಪಾಲಿಗೆ ಅಂದು ಕೊಂಡಷ್ಟು ಸುಲಭವಿಲ್ಲ. ಇದು ಪಕ್ಷದ ನಾಯಕರಿಗೆ ಸಹ ತಿಳಿದಿದೆ. ಬಿಡದಿಯ ತೋಟದ ಮನೆಯಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಿ ಕುಮಾರಸ್ವಾಮಿ ಪಕ್ಷದ ನಾಯಕರಿಗೆ ಚುನಾವಣೆ ಎದುರಿಸುವ ಪಾಠ ಹೇಳಿದ್ದಾರೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಪಕ್ಷ ರಾಜ್ಯದಲ್ಲಿ ಪ್ರಭಾವ ಕಳೆದುಕೊಳ್ಳುತ್ತಿದೆ. ಪಕ್ಷ ಬಿಟ್ಟು ಹೋಗುವ ನಾಯಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಅಧಿಕಾರ ಪಡೆಯಬೇಕು ಎಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ದೊಡ್ಡ ಮಟ್ಟಿನ ತಯಾರಿ ಮಾಡಿಕೊಳ್ಳುತ್ತಿದೆ.

ಎಚ್ಡಿಕೆ ಪದೇ ಪದೇ ಹೇಳುತ್ತಿರುವುದೇನು?
ಕೆಲವು ದಿನಗಳ ಹಿಂದೆ ನಡೆದ ವಿಧಾನಪರಿಷತ್ ಚುನಾವಣೆ ವೇಳೆಯೇ ಎಚ್. ಡಿ. ಕುಮಾರಸ್ವಾಮಿ ತಮ್ಮ ಇಂಗಿತವನ್ನು ಹೊರ ಹಾಕಿದ್ದರು, "ನಮಗೆ ವಿಧಾನಪರಿಷತ್ ಚುನಾವಣೆ ಮುಖ್ಯವಲ್ಲ. ನಮ್ಮ ಗುರಿ ಇರುವುದು 2023ರ ವಿಧಾನಸಭಾ ಚುನಾವಣೆಯಾಗಿದ್ದು ಅದರಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯುವುದಾಗಿದೆ. ಹೀಗಾಗಿ ಆ ಬಗ್ಗೆ ನಾವು ಚಿಂತನೆ ಮಾಡುತ್ತಿದ್ದೇವೆ" ಎಂಬ ಹೇಳಿಕೆಗಳನ್ನು ಪದೇ ಪದೇ ನೀಡುತ್ತಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಪ್ರತಿನಿಧಿಗಳೇ ಮತದಾರರಾಗಿರುವುದರಿಂದ ಕೇವಲ ಪ್ರಚಾರ ಮಾಡಿದರೆ ಸಾಲದು, ಅವರರಿಂದ ಮತ ಪಡೆಯಲು ಬೇರೆಯದ್ದೇ ಆದ ಕಸರತ್ತು ಮಾಡಬೇಕು, ಹಣ ಖರ್ಚು ಮಾಡಬೇಕು. ಅನಗತ್ಯವಾಗಿ ಹಣ ಖರ್ಚು ಮಾಡಿ ಅಭ್ಯರ್ಥಿಗಳು ಗೆಲ್ಲದೆ ಹೋದರೆ ತೊಂದರೆಯಾಗುತ್ತದೆ ಎಂಬುದನ್ನು ಮನಗಂಡಿದ್ದ ಕುಮಾರಸ್ವಾಮಿ ವಿಧಾನಪರಿಷತ್ ಚುನಾವಣೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ನಿರೀಕ್ಷೆ ಮಾಡಿದ ಸ್ಥಾನಗಳು ಕೂಡ ಲಭಿಸಲಿಲ್ಲ.

ಪಕ್ಷ ಬಿಟ್ಟವರಿಗೆ ಜೆಡಿಎಸ್ ಬಾಗಿಲು ಬಂದ್
ವಿಧಾನಪರಿಷತ್ನಲ್ಲಿ ಆದ ಸೋಲುಗಳ ಬಗ್ಗೆ ರಾಜಕೀಯವಾಗಿ ಬೇರೆ, ಬೇರೆ ರೀತಿಯಲ್ಲಿ ವಿಶ್ಲೇಷಣೆಗಳನ್ನು ಮಾಡುತ್ತಿರುವ ರಾಜಕೀಯ ವಿಶ್ಲೇಷಕರು ಜೆಡಿಎಸ್ ಮೊದಲು ಪಡೆದಿದ್ದ ಸ್ಥಾನಗಳನ್ನು ಕಳೆದುಕೊಂಡಿರುವುದನ್ನು ಗಮನದಲ್ಲಿಟ್ಟುಕೊಂಡು ಇದು ಮುಂದಿನ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬಂತಹ ಲೆಕ್ಕಾಚಾರಗಳನ್ನು ಮಾಡುತ್ತಿದ್ದಾರೆ. ಆದರೆ ವಿಧಾನ ಪರಿಷತ್ ಮತ್ತು ವಿಧಾನಸಭಾ ಚುನಾವಣೆಗೆ ಬಹಳಷ್ಟು ವ್ಯತ್ಯಾಸಗಳಿದ್ದು ಅದನ್ನು ತಾಳೆ ಹಾಕಿನೋಡುವುದು ಕಷ್ಟವಾಗುತ್ತದೆ.
ಹಾಗೆ ನೋಡಿದರೆ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಲೇ ಇವೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ನಿಂದ ಒಬ್ಬರ ಮೇಲೊಬ್ಬರಂತೆ ಹೊರ ಹೋಗುತ್ತಿದ್ದಾರೆ. ಇರುವ ಕೆಲವು ಪ್ರಭಾವಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ನಾಯಕರನ್ನು ಸೃಷ್ಟಿ ಮಾಡಿ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವುದು ಅಷ್ಟು ಸುಲಭವಲ್ಲ. ಆದರೂ ಕುಮಾರಸ್ವಾಮಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುವ ಪ್ರಯತ್ನಕ್ಕೆ ಮಾನಸಿಕವಾಗಿ ಸಿದ್ಧವಾಗಿದ್ದಾರೆ. ಜತೆಗೆ ಪಕ್ಷ ಬಿಟ್ಟು ಹೋದವರಿಗೆ ಜೆಡಿಎಸ್ ಬಾಗಿಲು ಶಾಶ್ವತವಾಗಿ ಮುಚ್ಚುವುದಾಗಿಯೂ ಘೋಷಣೆ ಮಾಡಿದ್ದಾರೆ.

ಜೆಡಿಎಸ್ ಬಲಪ್ರದರ್ಶನ ಫಲಕೊಡಲಿಲ್ಲ
ಹಾಗೆ ನೋಡಿದರೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯವಿರುವುದಂತು ಸತ್ಯ. ಆದರೆ ಜೆಡಿಎಸ್ ಮಾಡಿಕೊಂಡ ಹಲವು ಎಡವಟ್ಟುಗಳಿಂದಾಗಿ ರಾಜ್ಯದಲ್ಲಿ ಪಕ್ಷ ಹೀನಾಯ ಮಟ್ಟಕ್ಕೆ ಬಂದು ನಿಲ್ಲುವಂತಾಗಿದೆ. ಇವತ್ತು ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಜೆಡಿಎಸ್ ಅನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿಯಲ್ಲಿ ಮತದಾರರಿಲ್ಲ. ಏಕೆಂದರೆ ಯಾವಾಗ ಯಾವ ಪಕ್ಷದೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತದೆಯೋ? ಎಂಬುದನ್ನು ಹೇಳಲಾಗದು. ಹೀಗಿರುವಾಗ ಮತ್ತೆ ಪಕ್ಷವನ್ನು ಬಲಿಷ್ಠವಾಗಿಸುವುದು ಅಷ್ಟು ಸುಲಭದ ಕೆಲಸವಾಗಿ ಉಳಿದಿಲ್ಲ.
ಕಳೆದ 2018ರ ಚುನಾವಣೆ ಸಂದರ್ಭದಲ್ಲಿ ಬಹಳಷ್ಟು ಜನ ಜೆಡಿಎಸ್ ಪಕ್ಷವು ಬಿಜೆಪಿಗೆ ಬೆಂಬಲ ನೀಡುತ್ತದೆ ಎಂದು ನಂಬಿದ್ದರಾದರೂ ಕೊನೆಗಳಿಗೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಿ ಸರ್ಕಾರ ರಚನೆ ಮಾಡಲಾಯಿತು. ಪ್ರಮಾಣವಚನ ಸಂದರ್ಭ ಬಿಜೆಪಿಗೆ ಸೆಡ್ಡು ಹೊಡೆಯುವ ಸಲುವಾಗಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ನಾಯಕರನ್ನು ಕರೆತಂದು ಎಚ್. ಡಿ. ಕುಮಾರಸ್ವಾಮಿ ಬಲಪ್ರದರ್ಶನ ಮಾಡಿದ್ದರು.

ಸಹಕಾರಿಯಾಗಲಿದೆಯಾ ಪಂಚಅಂಶಗಳು?
ಆದರೆ ನಂತರ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಕಣಕ್ಕಿಳಿಸಿ ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ತದ ನಂತರ ಬಿಜೆಪಿ ತಂತ್ರದಿಂದ ತಮ್ಮ ಮುಖ್ಯಮಂತ್ರಿ ಸ್ಥಾನವನ್ನೇ ಕಳೆದುಕೊಳ್ಳುಂತಾಗಿದ್ದು ಇತಿಹಾಸ.
ಇದೀಗ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಅಧಿಕಾರ ನಡೆಸಿದ್ದರಿಂದ ಹಲವು ರೀತಿಯ ಅನುಭವವಾಗಿದೆ. ಹಾಗಾಗಿ ತಾವೇ ಸ್ವಂತ ಬಲದಲ್ಲಿ ಅಧಿಕಾರಕ್ಕೇರುವ ಹಠಕ್ಕೆ ಬಿದ್ದಿದ್ದಾರೆ. ಅದಕ್ಕಾಗಿ ಉಚಿತ ಆರೋಗ್ಯ, ಉಚಿತ ಶಿಕ್ಷಣ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ, ಪ್ರತಿ ಕುಟುಂಬಕ್ಕೂ ಉದ್ಯೋಗ, ಪ್ರತಿ ಬಡ ಕುಟುಂಬಕ್ಕೂ ಮನೆ ಎಂಬ ಪಂಚ ಅಂಶಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವುದಾಗಿ ಹೇಳುತ್ತಿದ್ದಾರೆ. ಈ ಪಂಚ ಅಂಶಗಳು ಯಾವ ರೀತಿಯಲ್ಲಿ ಜೆಡಿಎಸ್ಗೆ ಸಹಕಾರಿಯಾಗುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.












Click it and Unblock the Notifications