ನಮ್ಮ ಪಾದಯಾತ್ರೆ ಕಾಂಗ್ರೆಸ್ ದುರಾಡಳಿತಕ್ಕೆ ಅಂತ್ಯಹಾಡಲಿದೆ: ಬಿಜೆಪಿ
ಬೆಂಗಳೂರು, ಮಾರ್ಚ್ 06: "ಬೆಂಗಳೂರು ಉಳಿಸಿ ಪಾದಯಾತ್ರೆಯು ಕಾಂಗ್ರೆಸ್ ದುರಾಡಳಿತಕ್ಕೆ ಅಂತ್ಯ ಹಾಡಿ, ಐಟಿ ಸಿಟಿ, ಉದ್ಯಾನ ನಗರಿಯ ಗತ ವೈಭವವನ್ನು ಮರಳಿಸಲಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಹೇಳಿದ್ದಾರೆ.
ರಾಜಧಾನಿ ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದನ್ನು ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ, ಬೆಂಗಳೂರು ಮಹಾನಗರ ವತಿಯಿಂದ ಆರಂಭಿಸಿರುವ 'ಬೆಂಗಳೂರು ರಕ್ಷಿಸಿ' ಯಾತ್ರೆಯ ನಾಲ್ಕನೇ ದಿನ ಅವರು ಮಾತನಾಡುತ್ತಿದ್ದರು.
ಎರಡನೇ ದಿನಕ್ಕೆ ಕಾಲಿಟ್ಟ ಬಿಜೆಪಿಯ ಬೆಂಗಳೂರು ರಕ್ಷಿಸಿ ಪಾದಯಾತ್ರೆ
ನಾಲ್ಕನೇ ದಿನದ ಯಾತ್ರೆ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಆರಂಭವಾಗಿದ್ದು, ಸಂಜೆ ಪದ್ಮನಾಭನಗರ ಕ್ಷೇತ್ರದಲ್ಲಿ ನಡೆಯಲಿದೆ.
'ಬೆಂಗಳೂರಿನಾದ್ಯಂತ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ನಂ 1 ಎಂದು ಫ್ಲೆಕ್ಸ್ ಗಳನ್ನು ಹಾಕಿಸಿದ್ದಾರೆ. ಆದರೆ ಅದಕ್ಕಾಗಿ ಬಳಸಿದ್ದು ತೆರಿಗೆ ಪಾವತಿಸಿದ ಸಾಮಾನ್ಯ ಜನರ ದುಡ್ಡನ್ನು ಎಂಬುದು ತಿಳಿದಿರಲಿ. ನಮ್ಮ ಬೆಂಗಳೂರು ರಕ್ಷಿಸಿ ಪಾದಯಾತ್ರೆಗೂ ಕಾಂಗ್ರೆಸ್ ಅಡ್ಡಿ ಪಡಿಸಲು ಪ್ರಯತ್ನಿಸುತ್ತದೆ. ಮೋದೀಜಿ ಹೋದಲ್ಲೆಲ್ಲ ಬಿಜೆಪಿ ಗೆಲ್ಲುತ್ತದೆ, ರಾಹುಲ್ ಗಾಂಧಿ ಹೋದಲ್ಲೆಲ್ಲ ಕಾಂಗ್ರೆಸ್ ಸೋಲುತ್ತದೆ. ಅದಕ್ಕೆ ಈಶಾನ್ಯ ರಾಜ್ಯಗಳ ಚುನಾವಣೆಯೇ ಸಾಕ್ಷಿ ಎಂದು ಅವರು ಲೇವಡಿ ಮಾಡಿದರು.
ಈ ಪಾದಯಾತ್ರೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ, ಬಿಜೆಪಿ ಮುಖಂಡರಾದ ಅರವಿಂದ ಲಿಂಬಾವಳಿ, ಪಿ.ಸಿ.ಮೋಹನ್ , ತಾರಾ ಅನುರಾಧ , ಮಾಳವಿಕ ಅವಿನಾಶ್ , ಪಿ.ಎನ್.ಸದಾಶಿವ , ಎಸ್.ಮುನಿರಾಜು ಮುಂತಾದವರು ಭಾಗವಹಿಸಿದ್ದರು.