ಉಕ್ರೇನ್ನಿಂದ ಕರ್ನಾಟಕಕ್ಕೆ 476 ಜನರು ವಾಪಸ್
ಬೆಂಗಳೂರು, ಮಾರ್ಚ್ 07; ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿದ್ದ ಕರ್ನಾಟಕದ 76 ಮಂದಿ ಭಾನುವಾರ ವಾಪಸ್ ಆಗಿದ್ದಾರೆ. ಈ ಮೂಲಕ ಕರ್ನಾಟಕದ 476 ಜನರು ರಾಜ್ಯಕ್ಕೆ ಆಗಮಿಸಿದಂತಾಗಿದೆ.
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಆಪರೇಷನ್ ಗಂಗಾ ಮೂಲಕ ಕೇಂದ್ರ ಸರ್ಕಾರ ಭಾರತಕ್ಕೆ ಕರೆತರುತ್ತಿದೆ. ಭಾನುವಾರ ಐದು ವಿಮಾನಗಳು ನವದೆಹಲಿಗೆ ಆಗಮಿಸಿವೆ. ಇವುಗಳಲ್ಲಿ ಕರ್ನಾಟಕದ 72 ಜನರು ಮತ್ತು ಮುಂಬೈಗೆ ಬಂದ ಒಂದು ವಿಮಾನದಲ್ಲಿ ನಾಲ್ವರು ಆಗಮಿಸಿದ್ದಾರೆ.

ಉಕೇನ್ನಲ್ಲಿ ಸಿಲುಕಿರುವ ಕರ್ನಾಟಕದ ಜನರ ರಕ್ಷಣೆ ಕಾರ್ಯಾಚರಣೆಗೆ ಮನೋಜ್ ರಾಜನ್ ನೋಡಲ್ ಅಧಿಕಾರಿಯಾಗಿದ್ದಾರೆ. ಸೋಮವಾರ, "ಸೋಮವಾರ ಬೆಳಗ್ಗೆಯ ತನಕ 476 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ" ಎಂದು ಹೇಳಿದರು.
"ನಮ್ಮ ಕಂಟ್ರೋಲ್ ರೂಂ ಮಾಹಿತಿ ಪ್ರಕಾರ ಇನ್ನೂ 142 ವಿದ್ಯಾರ್ಥಿಗಳು ವಾಪಸ್ ಬರಬೇಕಿದೆ. ನಮ್ಮ ಮಾಹಿತಿ ಪ್ರಕಾರ ಎಲ್ಲಾ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಕೆಲವರು ಪೋಲೆಂಡ್, ಕೆಲವು ರೋಮೆನಿಯಾದಲ್ಲಿದ್ದಾರೆ. ಎಲ್ಲರೂ ಸುರಕ್ಷಿತವಾಗಿ ಮರಳಲಿದ್ದಾರೆ" ಎಂಬ ಮಾಹಿತಿ ಇದೆ ಎಂದರು.
ಆಪರೇಷನ್ ಗಂಗಾ ಕಾರ್ಯಾಚರಣೆ ಫೆಬ್ರವರಿ 27ರಂದು ಆರಂಭವಾಗಿತ್ತು. ಭಾರತೀಯರನ್ನು ಹೊತ್ತ 40 ವಿಮಾನಗಳು ದೆಹಲಿಗೆ ಮತ್ತು 7 ವಿಮಾನಗಳು ದೆಹಲಿಗೆ ಬಂದಿವೆ. ನವದೆಹಲಿಗೆ ಆಗಮಿಸಿದವರಿಗೆ ಕರ್ನಾಟಕ ಭವನದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿಕೊಡಲಾಗುತ್ತಿದೆ.
ಉಕ್ರೇನ್ನಲ್ಲಿ ಕರ್ನಾಟಕದ 200 ಜನರು ಸಿಲುಕಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದರು. ಸೋಮವಾರ ಉಕ್ರೇನ್ನಿಂದ ಭಾರತೀಯರನ್ನು ಹೊತ್ತ 12 ವಿಮಾನಗಳು ಆಗಮಿಸಲಿದ್ದು, ಇದರಲ್ಲಿ ಹಲವಾರು ಕರ್ನಾಟಕದ ವಿದ್ಯಾರ್ಥಿಗಳು ವಾಪಸ್ ಆಗಲಿದ್ದಾರೆ.
ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಭಾನುವಾರ ಮಾಡಿರುವ ಟ್ವೀಟ್ ಪ್ರಕಾರ 15,920 ಭಾರತೀಯರನ್ನು 76 ವಿಮಾನಗಳ ಮೂಲಕ ಭಾರತಕ್ಕೆ ಇದುವರೆಗೂ ಕರೆತರಲಾಗಿದೆ.
ರೋಮೆನಿಯಾದಿಂದ 6,680 ಜನರು, ಪೋಲೆಂಡ್ನಿಂದ 2,822 ಜನರು, ಹಂಗೇರಿಯಿಂದ 5,300 ಜನರು, ಸ್ಲೋಮಾಕೀಯಾದಿಂದ 1,118 ಜನರನ್ನು ಭಾರತಕ್ಕೆ ಕರೆತರಲಾಗಿದೆ.












Click it and Unblock the Notifications