ಶುಭ ಶುಕ್ರವಾರ 35 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಬೆಂಗಳೂರು, ಮಾ. 22 : ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೂರನೇ ದಿನವಾದ ಶುಕ್ರವಾರ ರಾಜ್ಯದಲ್ಲಿ ಒಟ್ಟು 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಶುಭದಿನ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ.
ಶುಕ್ರಚಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನಿಲ್ ಕುಮಾರ್ ಝಾ, ಮೂರನೇ ದಿನವಾದ ಶುಕ್ರವಾರ 35 ಅಭ್ಯರ್ಥಿಗಳು 49 ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಮೂರು ದಿನಗಳಲ್ಲಿ 85 ಅಭ್ಯರ್ಥಿಗಳು 135 ನಾಮಪತ್ರ ಸಲ್ಲಿಸಿದಂತಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿ ವಿವರಗಳು

ವೆಬ್ ಸೈಟ್ ಗೆ ಭೇಟಿ ನೀಡಿ
ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು http://www.ceokarnataka.kar.nic.in/ ವೆಬ್ಸೈಟ್ನಲ್ಲಿ ಹಾಕಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ಪ್ರಗತಿಯ ಬಗ್ಗೆ, ಮತಗಟ್ಟೆ ಕೇಂದ್ರಗಳ ವಿವರ ಮುಂತಾದ ಮಾಹಿತಿಗಳನ್ನು ಪಡೆಯಬಹುದಾಗಿದೆ ಎಂದು ಅನಿಲ್ ಕುಮಾರ್ ಝಾ ತಿಳಿಸಿದರು.

ಶೀಘ್ರವೇ ಎಪಿಕ್ ಕಾರ್ಡ್
ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿದವರಿಗೆ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಭಾವಚಿತ್ರ ಸಹಿತ ಎಪಿಕ್ ಕಾರ್ಡ್ ನೀಡುವ ವ್ಯವಸ್ಥೆ ಸಹ ಮಾಡಲಾಗಿದೆ. ವೆಬ್ಸೈಟ್ನಲ್ಲಿ ಮತಗಟ್ಟೆ ಕೇಂದ್ರ ಹಾಗೂ ಗುರುತಿನ ಚೀಟಿ ವಿತರಿಸುವ ಸ್ಥಳದ ಬಗ್ಗೆಯೂ ಮಾಹಿತಿಯೂ ಇದೆ ಎಂದು ಝಾ ಹೇಳಿದ್ದಾರೆ.

ಶುಕ್ರವಾರ ನಾಮಪತ್ರ ಸಲ್ಲಿಸಿದ ಪ್ರಮುಖರು
ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ, ತುಮಕೂರಿನ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ, ಮೈಸೂರಿನಿಂದ ಎಚ್.ವಿಶ್ವನಾಥ್, ದಾವಣಗೆರೆಯಿಂದ ಎಸ್.ಎಸ್.ಮಲ್ಲಿಕಾರ್ಜುನ, ಜೆಡಿಎಸ್ ಅಭ್ಯರ್ಥಿಗಳಾದ ಚಿತ್ರದುರ್ಗದ ಗೂಳಿಹಟ್ಟಿ ಶೇಖರ್, ಉಡುಪಿ-ಚಿಕ್ಕಮಗಳೂರಿನ ವಿ.ಧನಂಜಯಕುಮಾರ್ ಮುಂತಾದವರು ನಾಮಪತ್ರ ಸಲ್ಲಿಸಿದ್ದಾರೆ.

ಒಟ್ಟು ಎಷ್ಟು ನಾಮಪತ್ರ
ಕರ್ನಾಟಕದಲ್ಲಿ ಚುನಾವಣಾ ಅಧಿಸೂಚನೆ ಪ್ರಕಟವಾಗಿ ಮೂರು ದಿನಗಳು ಕಳೆದಿದ್ದು, ಇದುವರೆಗೂ 28 ಕ್ಷೇತ್ರಗಳಿಗೆ 85 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಇದುವರೆಗೂ ಯಾವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ.












Click it and Unblock the Notifications