Old Case Reopen: ಪೊಲೀಸರಿಗೆ ನಿತ್ಯ ನಿರ್ದೇಶನ ನೀಡುವುದಿಲ್ಲ: ಜಿ.ಪರಮೇಶ್ವರ ಹೀಗೆ ಹೇಳಿದ್ದೇಕೆ?
ಬೆಂಗಳೂರು, ಜನವರಿ 03: ರಾಮಜನ್ಮಭೂಮಿ ಪ್ರಕರಣ ಮರು ಪರಿಶೀಲನೆಗೆ ಮುಂದಾದ ಸರ್ಕಾರದ ವಿರುದ್ಧ ಬಿಜೆಪಿ ನೀಡಿದ ಹೇಳಿಕೆಗಳಿಗೆ ಗೃಹ ಸಚಿವ ಜಿ.ಪರಮೇಶ್ವರ ಖಾರವಾಗೇ ತಿರುಗೇಟು ಕೊಟ್ಟಿದ್ದಾರೆ. ನಮಗೆ ಬುದ್ಧಿ ಕಲಿಸುತ್ತಾರೆ ಎನ್ನುತ್ತಿರುವ ಬಿಜೆಪಿಯವರಿಗೆ ಈಗಾಗಲೇ ಜನರು ಬುದ್ಧಿ ಕಲಿಸಿದ್ದಾರೆ. ಇದು ಜನರಿಂದ ಚುನಾಯಿತವಾದ ಸರ್ಕಾರ. ನಾವು ನಿತ್ಯ ಪೊಲೀಸರಿಗೆ ನಿರ್ದೇಶನ ನೀಡುವುದಿಲ್ಲ. ಅವರ ಕೆಲಸ ಅವರು ಮಾಡುತ್ತಾರೆ ಎಂದು ಕಿಡಿ ಕಾರಿದರು.
ರಾಮಜನ್ಮಭೂಮಿ ಹೋರಾಟ ಕುರಿತು ಬಿಜೆಪಿ ಆರೋಪಗಳು, ಹೇಳಿಕೆ ವಿಚಾರಗಳಿಗೆ ಸುದ್ದಿಗಾರರಿಗೆ ಉತ್ತರಿಸಿದ ಗೃಹ ಸಚಿವರು, ಪೊಲೀಸ್ ಅಧಿಕಾರಿಗಳಿಗೆ ದಿನನಿತ್ಯ ನಾವು ನಿರ್ದೇಶನಗಳನ್ನು ನೀಡುವುದಿಲ್ಲ. ಸಂದರ್ಭ ಬಂದಾಗ ಅಗತ್ಯ ಸಂದರ್ಭದಲ್ಲಿ ಮಾತ್ರ ಕೆಲವು ಸೂಚನೆಗಳನ್ನು ನೀಡುತ್ತೇವೆ. ಕಾನೂನು ಪುಸ್ತಕವನ್ನು ಅವರ ಕೈಗೆ ನಾವು ಕೊಟ್ಟಿದ್ದೇವೆ. ಸೂಕ್ತ ತರಬೇತಿ ಇರುವ ಪೊಲೀಸರು ಅವರ ಅವರು ಮಾಡುತ್ತಾರೆ ಎಂದರು.

ಕಾಂಗ್ರೆಸ್ ಸರ್ಕಾರ ಜನರಿಂದ ಚುನಾಯಿತರಾದ ಅಧಿಕೃತ ಸರ್ಕಾರ. ಇದಕ್ಕೆ ತಾಕತ್ತು ಇದೆಯೋ ಇಲ್ಲವೋ ಜನರು ಉತ್ತರಿಸಿದ್ದಾರೆ. ಜನರು ತಾಕತ್ತು ಕೊಟ್ಟಿದ್ದಾರೆ ,ಅಧಿಕಾರವು ಕೊಟ್ಟಿದ್ದಾರೆ, ಕಾನೂನು ಕೊಟ್ಟಿದ್ದಾರೆ. ಆ ಕಾನೂನಿನ ಅಡಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ.
ಬಂಧಿತನ ಬಗ್ಗೆ ಉಲ್ಲೇಖವಿಲ್ಲ
ಪ್ರಕರಣದಲ್ಲಿ ಬಂಧಿತ ವ್ಯಕ್ತಿ ಕರಸೆವಕ ಎಂಬುದು ಎಫ್ ಐಆರ್ ನಲ್ಲಿ ಎಲ್ಲಿಯೂ ಉಲ್ಲೇಖ ಆಗಿಲ್ಲ. ಆತ ಒಬ್ಬ ಅಪರಾಧಿ ಸ್ಥಾನದಲ್ಲಿರುವಂತಹವನು. ಆತನ ಮೇಲೆ ಸುಮಾರು ಹದಿನಾರು ಕೇಸುಗಳು ದಾಖಲಾಗಿವೆ. ಇಂತಹ ಅಪರಾಧ ಹಿನ್ನೆಲೆ ಇರುವಂತವನ ಮೇಲೆ ಬಿಜೆಪಿ ನಾಯರಕು ಸಹಕಾರ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ದಶಕಗಳಷ್ಟು ಹಳೆ ಪ್ರಕರಣಗಳನ್ನು ವಿಲೇವಾರಿ ಮಾಡುವಾಗ ಬಂಧಿತ ವ್ಯಕ್ತಿಯ ಪ್ರಕರಣವು ಬಂದಿದೆ. ಆದರೆ 31 ವರ್ಷ ಯಾಕೆ ಕಾಯುತ್ತಿದ್ದರು, ಅಂದಿನಿಂದ ಏಕೆ ಸುಮ್ಮನಿದ್ದರು ಎಂದು ಬಿಜೆಪಿಯವರು ಪ್ರಶ್ನಿಸಿದ್ದಾರೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ್ದೇನು?
ಹೀಗೆ ಪ್ರಶ್ನಿಸುವ ಬಿಜೆಪಿಯವರು 2008ರಲ್ಲಿಯೂ ಸಹ ಅವರೇ ಅಧಿಕಾರದಲ್ಲಿದ್ದರು. ಈ ಹಿಂದೆಯೂ ಅವರೇ ಅಧಿಕಾರದಲ್ಲಿದ್ದರು. ಆಗ ಪ್ರಕರಣವನ್ನು ತೆಗೆದು ಹಾಕಬಹುದು ಅಥವಾ ಖುಲಾಸೆ ಮಾಡಬಹುದು. ಯಾಕೆ ಮಾಡಲಿಲ್ಲ.? ಹೀಗಾಗಿ ಯಾರ ಮೇಲೆ ಯಾರು ಆರೋಪ ಮಾಡಬೇಕು ಎನ್ನುವುದೇ ಯಕ್ಷ ಪ್ರಶ್ನೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಹಳೇ ಕೇಸ್ ಗಳನ್ನು ಇಷ್ಟೊಂದು ವರ್ಷ ಇಟ್ಟುಕೊಂಡಿದ್ದೇನೆ ಎಂದು ಕಾನೂನು ಪ್ರಕಾರ ಏನು ಮಾಡಬೇಕು ಅದನ್ನು ಮಾಡಿ ಎಂದು ಸಾಮಾನ್ಯ ಪ್ರಕ್ರಿಯೆ ರೂಪದಲ್ಲಿ ತಿಳಿಸಲಾಗಿದೆ. ಪ್ರತಿಭಟನೆ ಮಾಡುವುದು ವಿರೋಧಪಕ್ಷದ ಹಕ್ಕು ಅದನ್ನು ಅವರು ಮಾಡಲಿ ಬೇಡ ಎಂದು ಹೇಳುವುದಿಲ್ಲ.
ಎಲ್ಲ ಕೇಸುಗಳಂತೆ ಇದು ಒಂದು: ಸ್ಪಷ್ಟನೆ
ಹಿಂದೂ ಕಾರ್ಯಕರ್ತರನ್ನು ರಾಜ್ಯಾದ್ಯಂತ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ತಪ್ಪು ಕಲ್ಪನೆ. ಹುಬ್ಬಳ್ಳಿಯಲ್ಲಿ ಆಕಸ್ಮಿಕವಾಗಿ ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡುವಾಗ ರಾಮಜನ್ಮಭೂಮಿ ಪ್ರಕರಣವು ಬಂದಿದೆ ಅಷ್ಟೇ. ಆ ರೀತಿ ನಾವು ಟಾರ್ಗೆಟ್ ನಂತಹ ಕೆಲಸಗಳನ್ನು ನಾವು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
26 ಪ್ರಕರಣಗಳಲ್ಲಿ 36 ಮಂದಿಯನ್ನು ಬಂಧಿಸಲಾಗಿದೆ. 36 ಮಂದಿಯಲ್ಲಿ ಹಿಂದುಗಳಿಲ್ಲವಾ? ಅವರ ಬಗ್ಗೆ ಏಕೆ ಮಾತನಾಡುತ್ತಿಲ್ಲ ಬಿಜೆಪಿಯವರು. ಬಂಧಿತನಷ್ಟೇ ಹಿಂದುವೇ. ಇನ್ನುಳಿದ ಬಂಧಿತದ್ದಾರ ಬಗ್ಗೆಯೂ ಕಾಳಜಿ ತೋರಿಸಲಿ. ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಷಯಗಳಿಲ್ಲ ಆರೋಪ ಮಾಡಬೇಕೆಂದು ಇಲ್ಲದನ್ನು ಹುಡುಕುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಜನ ಪಾಠ ಕಲಿಸಿದ್ದಾರಲ್ಲ: ಸಚಿವ
ರಾಜಕೀಯ ಮಾಡಬೇಡಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಿ ಎಂದು ಮನವಿ ಮಾಡಿದ್ದೇನೆ. ಲೋಕಸಭೆಯಲ್ಲಿ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಿಜೆಪಿಯವರಿಗೆ ಪಾಠ ಕಲಿಸುತ್ತಾರೆ ಎಂದು ಅವರು ಮರು ಉತ್ತರಿಸಿದರು.
ಪಾಠ ಎಲ್ಲರಿಗೂ ಕಲಿಸಲಾಗುತ್ತದೆ. ಜನಸಮುದಾಯ ತೀರ್ಮಾನ ಮಾಡುವಾಗ ಎಲ್ಲರಿಗೂ ಪಾಠವಾಗುತ್ತದೆ. ರಾಜ್ಯದಲ್ಲಿ ಅವರಿಗೆ ಪಾಠ ಕಲಿಸಿಲ್ಲವೇ? ನಮಗೆ 136 ಸೀಟುಗಳನ್ನು ಗೆಲ್ಲಿಸಿಕೊಟ್ಟು ಜನವರೇ ಅವರಿಗೆ ಪಾಠ ಕಲಿಸಿದ್ದಾರಲ್ಲ ಎಂದು ವಿಧಾನಸಭಾ ಚುನಾವಣೆಯ ಬಿಜೆಪಿ ಸೋಲನ್ನು ಅವರು ನೆನಪಿಸಿದರು.












Click it and Unblock the Notifications