ಪಿಯು ಪ್ರಶ್ನೆ ಪ್ರತ್ರಿಕೆ ಸೋರಿಕೆಯಾಗಿದ್ದು ಹಾವೇರಿಯಲ್ಲಿ
ಬೆಂಗಳೂರು, ಮೇ 11 : ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ಮಹತ್ವದ ಮಾಹಿತಿ ಲಭ್ಯವಾಗಿದೆ. ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಹಾವೇರಿಯಲ್ಲಿ ಸೋರಿಕೆಯಾಗಿತ್ತು. ಸಿಐಡಿ ವಶದಲ್ಲಿರುವ ಶಿವಕುಮಾರ ಸ್ವಾಮಿ ಅಲಿಯಾಸ್ ಟೊಮೆಟೊ ಇದರ ರೂವಾರಿಯಾಗಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಬುಧವಾರ ಬೆಂಗಳೂರಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರು ಈ ಕುರಿತು ಮಾಹಿತಿ ನೀಡಿದರು. 'ತುಮಕೂರಿನಲ್ಲಿ ಮಂಗಳವಾರ ಬಂಧಿಸಲಾದ ಕಿರಣ್ ವಿಚಾರಣೆಯಿಂದ ಮಹತ್ವದ ಮಾಹಿತಿಗಳು ಲಭ್ಯವಾಗಿವೆ. ಹಾವೇರಿ ಜಿಲ್ಲೆಯ ಹಾನಗಲ್ ಉಪ ಖಜಾನೆಯಿಂದ ಮೊದಲು ಪತ್ರಿಕೆ ಸೋರಿಕೆಯಾಗಿತ್ತು' ಎಂದು ಹೇಳಿದರು. [ಪತ್ರಿಕೆ ಸೋರಿಕೆ : ಟೊಮೆಟೊ ಅಣ್ಣನ ಮಗ ಸಿಕ್ಕಿಬಿದ್ದ]
'ಪ್ರಶ್ನೆ ಪತ್ರಿಕೆ ಹಗರಣ ಬಯಲಿಗೆ ಬಂದ ಬಳಿಕ ಕಿರಣ್ ಅಲಿಯಾಸ್ ಕುಮಾರಸ್ವಾಮಿ (28) ಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಆತ ತುಮಕೂರಿನಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮೀಸೆ ಬಿಟ್ಟು, ತಲೆ ಬೋಳಿಸಿಕೊಂಡು ಓಡಾಡುತ್ತಿದ್ದ ಕಿರಣ್ನನ್ನು ಮಂಗಳವಾರ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ' ಎಂದರು. [ಪೊಲೀಸರಿಗೆ ಹೊಸ ಕಥೆ ಹೇಳಿದ ಟೊಮೆಟೊ!]
'ಕಿರಣ್ ಹಾನಗಲ್ನಲ್ಲಿ ಮೊದಲು ಪತ್ರಿಕೆ ಬಹಿರಂಗವಾಯಿತು ಎಂದು ಹೇಳಿದ್ದ. ಅವನು ನೀಡಿದ ಮಾಹಿತಿಯಂತೆ ಹಾನಗಲ್ ಉಪ ಖಜಾನೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಂತೋಷ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಪತ್ರಿಕೆ ಸೋರಿಕೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ' ಎಂದು ಕಿಶೋರ್ ಚಂದ್ರ ತಿಳಿಸಿದರು. [ಪತ್ರಿಕೆ ಹಗರಣದಲ್ಲಿ ಕೋಕಾ ಪ್ರಯೋಗ, ಏನಿದು ಕೋಕಾ?]
ಫೋಟೋ ತೆಗೆದುಕೊಂಡಿದ್ದರು : 'ಹಾನಗಲ್ ಖಜಾನೆಗೆ ಪತ್ರಿಕೆ ಬರುತ್ತಿದ್ದಂತೆ ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸಂತೋಷ್ ಪ್ರಶ್ನೆ ಪತ್ರಿಕೆ ಬಂಡಲ್ ಸೀಲ್ ಓಪನ್ ಮಾಡಿ, ಪತ್ರಿಕೆಯ ಫೋಟೋ ತೆಗೆದುಕೊಂಡು ಪುನಃ ಸೀಲ್ ಮಾಡಿ ಇಟ್ಟಿದ್ದರು. ನಂತರ ಸಂತೋಷ್ ಕೈಯಿಂದ ಪತ್ರಿಕೆ ಸೋರಿಕೆಯಾಗಿದೆ' ಎಂದು ಕಿಶೋರ್ ಚಂದ್ರ ವಿವರಣೆ ನೀಡಿದರು.
ಟೊಮೆಟೊ ಕಿಂಗ್ ಪಿನ್ : ಹಗರಣ ಕಿಂಗ್ ಪಿನ್ ಟೊಮೆಟೊ ಅಲಿಯಾಸ್ ಶಿವಕುಮಾರ ಸ್ವಾಮಿ 'ನಾನು 2008ರಲ್ಲಿ ಸಿಕ್ಕಿಬಿದ್ದ ಬಳಿಕ ಪತ್ರಿಕೆ ಬಯಲು ಮಾಡುವ ವ್ಯಾಪಾರನ್ನು ಬಿಟ್ಟಿದ್ದೇನೆ. ಈಗ ಕಿರಣ್ ಈ ವ್ಯಾಪಾರ ನೋಡಿಕೊಳ್ಳುತ್ತಿದ್ದಾನೆ. ನನಗೂ ಇದಕ್ಕೂ ಸಂಬಂಧವಿಲ್ಲ' ಎಂದು ವಿಚಾರಣೆ ವೇಳೆ ಹೇಳಿದ್ದ. ಆದರೆ, ಈಗ ತನಿಖೆಯಿಂದ ಶಿವಕುಮಾರ ಸ್ವಾಮಿಯೇ ಕಿಂಗ್ ಪಿನ್ ಎಂಬುದು ಬಹಿರಂಗವಾಗಿದೆ.