ಪಂಚಾಯತ್ ರಾಜ್ ಇಲಾಖೆಯ 28 ಅಧಿಕಾರಿಗಳ ಅಮಾನತು
ಬೆಂಗಳೂರು, ಅ.28 : ನಕಲಿ ಬಿಲ್ ಪಾವತಿ, ಅಕ್ರಮ ಹಣ ಪಾವತಿ ತಡೆಯುವಲ್ಲಿ ವಿಫಲವಾದ ಪಂಚಾಯತ್ ರಾಜ್ ಇಲಾಖೆಯಲ್ಲಿನ 28 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇಬ್ಬರು ಐಎಎಸ್ ಅಧಿಕಾರಿಗಳು ಸೇರಿ ಉಪ ಕಾರ್ಯದರ್ಶಿ ಮಟ್ಟದ 9 ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ್, ಒಂದೇ ಕಾಮಗಾರಿಗೆ ಎರಡು ಬಿಲ್ಲು, ಕಾಮಗಾರಿ ಇಲ್ಲದೇ ಹಣ ಪಾವತಿಯಂತ ಅಕ್ರಮ ತಡೆಯಲು ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶವನ್ನು 4-5 ತಿಂಗಳ ಹಿಂದೆ ಅಳವಡಿಸಲಾಗಿದೆ.

ಇಲಾಖೆಯು ಯಾವುದೇ ಕಾಮಗಾರಿ ಕೈಗೊಂಡು ಬಿಲ್ ಪಾವತಿ ಮಾಡುವಾಗ ಕಾಮಗಾರಿಯ ಫೋಟೋವನ್ನು ಅಪ್ಲೋಡ್ ಮಾಡಿದರೆ ಮಾತ್ರ ಹಣ ಬಿಡುಗಡೆ ಪತ್ರ ನೀಡುವಂತೆ ಇಲಾಖೆ ಸೂಚನೆ ನೀಡಿದೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು. [ನಿಮ್ಮ ಕೆಲಸದ ಆತ್ಮಾವಲೋಕನ ಮಾಡಿಕೊಳ್ಳಿ : ಸಿಎಂ]
ಆದರೆ, ಇಲಾಖೆಯ ಕೆಲವು ಅಧಿಕಾರಿಗಳು ಗಾಂಧಿ ಸಾಕ್ಷಿ ಕಾಯಕ ತಂತ್ರಾಂಶವನ್ನು ಬಳಸದೆ, ಕಂಪ್ಯೂಟರ್ ಮೂಲಕ ಬಿಲ್, ಹಣ ಪಾವತಿ ಮಾಡಿದ್ದಾರೆ. ಆದ್ದರಿಂದ ಕರ್ತವ್ಯಲೋಪ ಎಸಗಿದ ಇಂತಹ 28 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.
ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲು ಅಧಿಕಾರವಿಲ್ಲದ 9 ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಆರ್ಥಿಕ ಇಲಾಖೆಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದರು.
ನೋಟಿಸ್ ನೀಡಲಾಗಿತ್ತು : ಇಲಾಖೆಯ ನಿರ್ದೇಶಗಳನ್ನು ಪಾಲಿಸದ ಅಧಿಕಾರಿಗಳನ್ನು ಗುರುತಿಸಿ ಅವರಿಗೆ ಮೊದಲು ನೋಟೀಸ್ ಜಾರಿಗೊಳಿಸಲಾಗಿತ್ತು. ಸರ್ವರ್ ಡೌನ್, ವಿದ್ಯುತ್ ಸಮಸ್ಯೆ ಎಂದು ನೋಟಿಸ್ಗೆ ಕೆಲವು ಅಧಿಕಾರಿಗಳು ಉತ್ತರ ನೀಡಿದ್ದರು. ಎಲ್ಲರ ವಿರುದ್ಧ ಇಲಾಖೆ ವಿಚಾರಣೆ ನಡೆಸಿ, ತಪ್ಪಿತಸ್ಥರೆಂದು ಕಂಡುಬಂದಲ್ಲಿ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.












Click it and Unblock the Notifications