ಕರ್ನಾಟಕದಲ್ಲಿ ಮೊದಲ ಗಣತಿ, 2,500 ಚಿರತೆ ಪತ್ತೆ
ಬೆಂಗಳೂರು, ಸೆಪ್ಟೆಂಬರ್ 27 : ಆನೆ ಮತ್ತು ಹುಲಿ ಗಣತಿ ಬಳಿಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಚಿರತೆ ಗಣತಿ ನಡೆದಿದೆ. ರಾಜ್ಯದಲ್ಲಿ 2,500 ಚಿರತೆಗಳಿವೆ ಎಂದು ಗಣತಿಯ ವರದಿ ಹೇಳಿದೆ. ದೇಶದಲ್ಲಿ ಚಿರತೆ ಗಣತಿ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ.
ಸುಮಾರು ಆರು ವರ್ಷಗಳಿಂದ ಕರ್ನಾಟಕದ ರಕ್ಷಿತಾರಣ್ಯ ಮತ್ತು ಹೊರಭಾಗದ ಕಾಡುಗಳಲ್ಲಿ ಮಾಹಿತಿ ಸಂಗ್ರಹಿಸಿ ಚಿರತೆಗಳ ಗಣತಿ ನಡೆಸಲಾಗಿದೆ. ವನ್ಯಜೀವಿ ಸಂರಕ್ಷಕ ಸಂಜಯ್ ಗುಬ್ಬಿ ಅವರ ನೇಚರ್ ಕನ್ಸ್ರ್ವೆಷನ್ ಫೌಂಡೇಷನ್ ಮತ್ತು ಕರ್ನಾಟಕ ಅರಣ್ಯ ಇಲಾಖೆ ಜಂಟಿಯಾಗಿ ಈ ಗಣತಿ ನಡೆಸಿವೆ.
ವನ್ಯಜೀವಿಗಳ ರಕ್ಷಿತಾರಣ್ಯವಾದ ಮಲೆಮಹದೇಶ್ವರ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯದ ಸುತ್ತಮುತ್ತ, ತಿಮ್ಲಾಪುರ ಸಂರಕ್ಷಿತ ಪ್ರದೇಶದಲ್ಲಿ ಗಣತಿ ಮಾಡಲಾಗಿದೆ. ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ತುಮಕೂರು, ರಾಮನಗರ, ಮೈಸೂರು, ಬೆಂಗಳೂರು ಗ್ರಾಮಾಂತರ, ಭದ್ರಾವತಿ, ಬಳ್ಳಾರಿ, ಚಿತ್ರದುರ್ಗದಲ್ಲೂ ಗಣತಿ ನಡೆಸಲಾಗಿದೆ.

2012ರಲ್ಲಿ ಕರ್ನಾಟಕ ಅರಣ್ಯ ಇಲಾಖೆ ಸಹಕಾರಿಂದ ಗಣತಿ ಕಾರ್ಯವನ್ನು ಆರಂಭಿಸಲಾಗಿತ್ತು. 363 ಚಿರತೆಗಳನ್ನು ತಂಡ ಗುರುತಿಸಿದ್ದು, ಅವುಗಳ ಚಿತ್ರಗಳನ್ನು ಸೆರೆಹಿಡಿದಿದೆ. ಕ್ಯಾಮರಾ ಟ್ರಾಪ್, ಹೆಜ್ಜೆಗಳ ಸಂಗ್ರಹ ಮುಂತಾದವುಗಳ ಮೂಲಕ 2,500 ಚಿರತೆಗಳಿವೆ ಎಂದು ಗಣತಿ ವರದಿ ನೀಡಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸುತ್ತಮತ್ತಲಿನ ಕುಕ್ಕವಾಡಿ, ಹಾದಿಕೆರೆ, ರಂಗಯ್ಯನಗಿರಿ ಪ್ರದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಿದೆ. ತುಮಕೂರು ಜಿಲ್ಲೆಯ ಬುಕ್ಕಪಟ್ಟಣ, ಸುವರ್ಣಾವತಿ ಪ್ರದೇಶದಲ್ಲಿಯೂ ಚಿರತೆಗಳು ಹೆಚ್ಚಾಗಿವೆ ಎಂದು ಗಣತಿ ವರದಿ ಹೇಳಿದೆ.












Click it and Unblock the Notifications