ಐಸಿಸ್ ನಂಟು, ಕಾಸರಗೋಡಿನ ವ್ಯಕ್ತಿ ದೆಹಲಿಯಲ್ಲಿ ಬಂಧನ
ಕಾಸರಗೋಡು, ಫೆಬ್ರವರಿ.17 : ಐಸಿಸ್ ಜತೆ ನಂಟು ಹೊಂದಿದ್ದನೆಂದು ಶಂಕಿಸಲಾದ ಕಾಸರಗೂಡಿನ ಮೂಲದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂಧಿಸಿದ್ದಾರೆ.
ಕಾಂಞಂಗಾಡು ಹೊಸದುರ್ಗ ಲಕ್ಷ್ಮೀ ನಗರದ ಅಬ್ದುಲ್ಲಾ ತೆರುವತ್ತ್ ಎಂಬವರ ಪುತ್ರ ಮೊಯುದ್ದೀನ್ ಪಾರಕಡ ವತ್ತ್ (25) ಬಂಧಿತ.
2016ರ ಆಗಸ್ಟ್ 2ರಂದು ಕಣ್ಣೂರು ಜಿಲ್ಲೆಯ ಕನಕಮಲೆಯ ನಿರ್ಜನ ಪ್ರದೇಶದಲ್ಲಿ ಐಸಿಸ್ ಜತೆ ನಂಟು ಹೊಂದಿರುವುದಾಗಿ ಶಂಕಿಸಲಾಗುತ್ತಿರುವ ಕೆಲವು ಸದಸ್ಯರು ಒಟ್ಟು ಸೇರಿ ಗುಪ್ತ ಸಭೆ ನಡೆಸಿದ್ದರು. ಅದರಲ್ಲಿ ಮೊಯುದ್ದೀನ್ ಕೂಡಾ ಭಾಗವಹಿಸಿದ್ದ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಹಿಸಲಾಗಿತ್ತು.
ಅಬುಧಾಬಿಯಿಂದ ವಾಪಸ್ ಬುಧವಾರ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತಯೇ ಅಧಿಕಾರಿಗಳು ಮೊಯುದ್ದೀನ್ ನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ದಿಲ್ಲಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅರ್ಜಿ ಸಲ್ಲಿಸಲಾಗುವುದು ಬಳಿಕ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.