KSRTC; ಬೆಂಗಳೂರಿಗೆ ಬಂತು ಟ್ರಕ್, ಕಾರ್ಗೋ ಸೇವೆಗೆ ಡಿ.23ಕ್ಕೆ ಚಾಲನೆ
ಬೆಂಗಳೂರು, ಡಿಸೆಂಬರ್ 19; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಲಾಜಿಸ್ಟಿಕ್ಸ್ ಸೇವೆಯನ್ನು ಆರಂಭಿಸುತ್ತಿದೆ. ಇದಕ್ಕಾಗಿಯೇ ವಿಶೇಷ ಲಾರಿಗಳನ್ನು ವಿನ್ಯಾಸಗೊಳಿಸಲಾಗಿದ್ದು, 20 ಲಾರಿಗಳು ಬೆಂಗಳೂರಿಗೆ ಆಗಮಿಸಿವೆ. ಡಿಸೆಂಬರ್ 23ರಂದು ಈ ಸೇವೆಗೆ ಚಾಲನೆ ದೊರೆಯಲಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬೆಂಗಳೂರಿನ ಶಾಂತಿನಗರದಲ್ಲಿರುವ ಕೆಎಸ್ಆರ್ಟಿಸಿ ಕಛೇರಿಗೆ ಭೇಟಿ ನೀಡಿ. ನೂತನವಾಗಿ ಆರಂಭಿಸುವ 'ನಮ್ಮ ಕಾರ್ಗೋ' ಪಾರ್ಸೆಲ್ ಮತ್ತು ಕೊರಿಯರ್ ಸೇವೆ ಲಾರಿಗಳನ್ನು ಪರಿಶೀಲನೆ ನಡೆಸಿದರು.

ಅಧಿಕಾರಿಗಳು ಡಿಸೆಂಬರ್ 23ರಂದು ಆರಂಭವಾಗುವ 'ನಮ್ಮ ಕಾರ್ಗೋ' ಸೇವೆ ಲೋಕಾರ್ಪಣೆ ಕಾರ್ಯಕ್ರಮದ ಕುರಿತು ವಿವರಣೆಯನ್ನು ನೀಡಿದರು. ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ 20 ಲಾರಿಗಳ ಮೂಲಕ ಸೇವೆ ಆರಂಭಿಸಲಾಗುತ್ತಿದ್ದು, ನಿಗಮಕ್ಕೆ ವರ್ಷಕ್ಕೆ 20 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.
ಕೆಎಸ್ಆರ್ಟಿಸಿ ಹೊಸ ಹೆಜ್ಜೆ; ಇಷ್ಟು ದಿನ ಉತ್ತಮ ಸಾರಿಗೆ ವ್ಯವಸ್ಥೆ ನೀಡುವ ಮೂಲಕ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಕೆಎಸ್ಆರ್ಟಿಸಿ ಮೊದಲ ಬಾರಿಗೆ ಸರಕು ಸಾಗಣೆ ಸೇವೆ ಆರಂಭಿಸುತ್ತಿದೆ.
'ಕೆಎಸ್ಆರ್ಟಿಸಿ ನಮ್ಮ ಕಾರ್ಗೋ ನಿಮ್ಮ ವಿಶ್ವಾಸ, ನಮ್ಮ ಕಾಳಜಿ' ಹೆಸರಿನ ಸರಕು ಸಾಗಣೆ ಸೇವೆಗಾಗಿಯೇ 20 ಲಾರಿಗಳನ್ನು ವಿನ್ಯಾಸಗೊಳಿಸಲಾಗಿದೆ. ಖಾಸಗಿಯವರು ಮಾತ್ರ ನೀಡುತ್ತಿರುವ ಸರಕು ಸಾಗಣೆ ಸೇವೆಯನ್ನು ಸಾರಿಗೆ ಇಲಾಖೆಯೂ ಆರಂಭಿಸುತ್ತಿದ್ದು, ಕ್ಷೇತ್ರದಲ್ಲಿ ಹೊಸ ಸಂಚಲನ ಉಂಟಾಗಿದೆ.
ಕೆಎಸ್ಆರ್ಟಿಸಿ ಬಸ್ ನಿರ್ವಹಣೆ ಮಾಡುವ ಮಾದರಿಯಲ್ಲಿಯೇ ಸರಕು ಸಾಗಣೆ ಲಾರಿಗಳನ್ನು ನಿರ್ವಹಿಸಲು ಯೋಜನೆ ರೂಪಿಸಲಾಗಿದೆ. ಪ್ರಾಯೋಗಿಕವಾಗಿ ಆರಂಭಿಸುತ್ತಿರುವ ಯೋಜನೆ ಯಶಸ್ವಿಯಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
'ನಮ್ಮ ಕಾರ್ಗೋ' ಸೇವೆಗಾಗಿಯೇ ಸುಮಾರು 17.03 ಲಕ್ಷ ರೂ. ವೆಚ್ಚದಲ್ಲಿ 3.4 ಕೋಟಿ ರೂ. ಖರ್ಚು ಮಾಡಿ 20 ಲಾರಿಗಳನ್ನು ಖರೀದಿ ಮಾಡಲಾಗಿದ್ದು, ಇದರ ವಿನ್ಯಾಸವೂ ಕಾರ್ಯವೂ ಸಹ ಪೂರ್ಣಗೊಂಡು, ಲಾರಿಗಳು ಕೇಂದ್ರ ಕಛೇರಿಗೆ ಬಂದಿವೆ.
ಕೆಎಸ್ಆರ್ಟಿಸಿ 'ನಮ್ಮ ಕಾರ್ಗೋ' ಸೇವೆಗೆ ಹೆಸರನ್ನು ಜನರಿಂದಲೇ ಆಹ್ವಾನಿಸಿತ್ತು. ಸರಕು ಸಾಗಣೆ ಮಾಡಲು ವಿಶಿಷ್ಟವಾಗಿ 20 ಲಾರಿಗಳನ್ನು ಪುಣೆಯಲ್ಲಿ ವಿನ್ಯಾಸಗೊಳಿಸಿ ಬೆಂಗಳೂರಿಗೆ ತರಲಾಗಿದೆ. ಇಷ್ಟು ದಿನ ಬಸ್ಗಳಲ್ಲಿ ಸಾಗಣೆ ಮಾಡುತ್ತಿದ್ದ ಸರಕುಗಳನ್ನು ಇನ್ನು ಮುಂದೆ ಲಾರಿಗಳಲ್ಲಿ ಸಾಗಿಸಲಾಗುತ್ತಿದೆ. ಈ ಸೇವೆಗಾಗಿಯೇ ಹೊಸ ಸಾಫ್ಟ್ವೇರ್ ಅಭಿವೃದ್ಧಿಗೊಳಿಸಲಾಗಿದೆ.
'ಶಕ್ತಿ' ಯೋಜನೆ ಜಾರಿಗೆ ಬಂದ ಬಳಿಕ ನಿಗಮದ ಆದಾಯ ಹೆಚ್ಚಳ ಮಾಡುವ ಉದ್ದೇಶದಿಂದ ಜಾರಿಗೊಳಿಸುತ್ತಿರುವ ಯೋಜನೆ ಇದಾಗಿದೆ. ವರ್ಷಕ್ಕೆ 20 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ. ಸದ್ಯ ಕರ್ನಾಟಕದಲ್ಲಿ ಮಾತ್ರ ಸರಕು ಸಾಗಣೆ ಸೇವೆ ನೀಡಲಾಗುತ್ತದೆ. ಜನರಿಂದ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಹೊರ ರಾಜ್ಯಗಳಿಗೆ ಸಹ ಸೇವೆ ವಿಸ್ತರಣೆ ಮಾಡಲಾಗುತ್ತದೆ.
ಬಿಎಂಟಿಸಿ ಹೊರತುಪಡಿಸಿ ಉಳಿದ ಎಲ್ಲಾ ಸಾರಿಗೆ ನಿಗಮಗಳ ಬಸ್ ನಿಲ್ದಾಣಗಳಲ್ಲಿ 'ನಮ್ಮ ಕಾರ್ಗೋ' ಸೇವೆಯ ಕೌಂಟರ್ ಸ್ಥಾಪನೆ ಮಾಡಲಾಗುತ್ತದೆ. ಇಲ್ಲಿಯೇ ಜನರು ತಮ್ಮ ಪಾರ್ಸೆಲ್ಗಳನ್ನು ನೀಡಿ, ಅದಕ್ಕೆ ನಿಗದಿಪಡಿಸಿದ ಹಣ ಪಾವತಿ ಮಾಡಬೇಕು. ಪಾರ್ಸೆಲ್ ಸೇವೆಯ ರಿಯಲ್ ಟೈಂ ಮಾಹಿತಿ ಒದಗಿಸಲು ಎಸ್ಎಂಎಸ್ ಸೇವೆ ಸಹ ಇರಲಿದೆ.
ರಾಜ್ಯದಲ್ಲಿ ಆರಂಭದಲ್ಲಿ 109 ಕೇಂದ್ರಗಳಲ್ಲಿ ಕಾರ್ಗೋ ಸೇವೆ ಆರಂಭಿಸಲಾಗುತ್ತದೆ. ಈಗಾಗಲೇ ಸರಕು ಸಾಗಣೆ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳು ಪಾರುಪತ್ಯವನ್ನು ಸ್ಥಾಪನೆ ಮಾಡಿದೆ. ಇಂತಹ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ಈ ಸೇವೆಗೆ ಜನರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ? ಎಂದು ಕಾದು ನೋಡಬೇಕಿದೆ.












Click it and Unblock the Notifications